MLA Munirathna: ಬಿಜೆಪಿ ಶಾಸಕ ಮುನಿರತ್ನ ಮೇಲೆ ಅಟ್ಯಾಕ್, ಮೊಟ್ಟೆ ಕಲ್ಲಿನಿಂದ ಹೊಡೆದ ಗುಂಪು
ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರ ಮೇಲೆ ಕೆಲವರು ದಾಳಿ ನಡೆಸಿದ್ದಾರೆ. ಮುನಿರತ್ನ ಅವರ ತಲೆಗೆ ಮೊಟ್ಟೆಯಿಂದ ಹೊಡೆದಿರುವ ಘಟನೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ನಡೆದಿದೆ. ಇಂದು ಕ್ಷೇತ್ರದ ಲಕ್ಷ್ಮಿದೇವಿ ನಗರದಲ್ಲಿ ವಾಜಪೇಯಿಯವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗವಹಿಸಿ ವಾಪಸ್ ಆಗುತ್ತಿದ್ದಾಗ ಕಲ್ಲು ಮತ್ತು ಮೊಟ್ಟೆಯಿಂದ ದಾಳಿ ನಡೆದಿದೆ.
ಮುನಿರತ್ನ ಕಾರಿನ ಗಾಜಿನ ಮೇಲೆ ಕಲ್ಲು ಕೂಡ ಬಿದ್ದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಮುನಿರತ್ನ ಅವರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಮುನಿರತ್ನ ಅವರ ಕಾರು ಬರುತ್ತಿದ್ದಂತೆಯೇ ಬೇರೆ ಪಕ್ಷದ ಕಾರ್ಯಕರ್ತರು ಮುನಿರತ್ನ ಅವರ ಮೇಲೆ ಮೊಟ್ಟೆ ಹಾಗೂ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯೇ ಈ ಘಟನೆ ನಡೆದಿದ್ದು, ಮುನಿರತ್ನ ಕಂಡ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಅವರ ಕಾರಿನತ್ತ ಮೊಟ್ಟೆ ಎಸೆದು ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಬಿಜೆಪಿ ಕಾರ್ಯಕರ್ತರು ಕೂಡ ಈ ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಜೋರು ಗಲಾಟೆಯೂ ಮಾಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಈ ವೇಳೆ ಮಾರಾಮಾರಿಯೂ ನಡೆದಿದೆ. ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟಕಾರನನ್ನು ವಶಕ್ಕೆ ಪಡೆದಿದ್ದಾರೆ.
ಆಕೆಯೇ ಕಾರಣ ಎಂದು ಮುನಿರತ್ನ: ಶಾಸಕ ಮುನಿರತ್ನ ಕೂಡ ತಮ್ಮ ಮೇಲೆ ನಡೆದ ಹಲ್ಲೆ ಖಂಡಿಸಿ ಕಂಠೀರವ ಸ್ಟುಡಿಯೋ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರನ್ನು ಶಾಸಕಿಯಾಗಿ ಮಾಡಲು ನನ್ನ ಮೇಲೆ ಈ ದಾಳಿ ನಡೆದಿದೆ. ಕುಸುಮಾರನ್ನ ಎಂಎಲ್ಎ ಮಾಡಲು ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಕಡೆಯವರು ನನ್ನ ಮೇಲೆ ದಾಳಿ ನಡೆಸಿದ್ದಾರೆ. ನನ್ನ ಮೇಲೆ ನಡೆದಿರುವುದು ಆಸಿಡ್ ದಾಳಿ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ನನಗೆ ಜೀವಬೆದರಿಕೆ ಇದೆ. ನಾನು ಜೈಲಿನಿಂದ ಹೊರಬಂದರೆ ಕೊಲೆಯಾಗುತ್ತೆ ಎಂದು ಒಬ್ಬರು ನನಗೆ ಮೊದಲೇ ಮಾಹಿತಿ ನೀಡಿದ್ದರು. ನಾನು ಜೈಲಿನಿಂದ ಹೊರಬರುವುದು ಒಳ್ಳೆಯದಲ್ಲ ಎಂದು ಅವರು ಹೇಳಿದ್ದರು. ಈಗ ಅವರು ಹೇಳಿದಂತೆ ನನ್ನ ಕೊಲೆಗೆ ಯತ್ನ ನಡೆದಿದೆ ಎಂದು ಹೇಳಿದ್ದಾರೆ.
ಪೊಲೀಸರು ಕೂಡ ಈ ಘಟನೆ ನಡೆದ ಬಳಿಕ ನನಗೆ ಗಂಭೀರ ವಿಚಾರ ಹೇಳಿದ್ದಾರೆ. ನನ್ನ ಕೊಲೆ ಪ್ರಯತ್ನ ನಡೆಯಲಿದೆ ಎನ್ನುವ ಮಾಹಿತಿ ಇದ್ದು, ಇದರ ಬಗ್ಗೆ ಯಾರಿಗೂ ಹೇಳಬೇಡಿ ಎಂದು ನನಗೆ ತಿಳಿಸಿದ್ದಾರೆ. ಇದೆಲ್ಲ ನಡೆಯುತ್ತಿರುವುದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮತ್ತು ಕುಸುಮಾ ಕುಮ್ಮಕ್ಕಿನಿಂದಲೇ ಎಂದು ಆರೋಪ ಮಾಡಿದ್ದಾರೆ.
ನಾನು ರಾಜೀನಾಮೆ ಕೊಡಬೇಕು ಎಂದು ಮೊದಲಿನಿಂದಲೂ ಒತ್ತಡವಿದೆ. ರಾಜೀನಾಮೆ ಕೊಡದಿದ್ದರೆ ನನ್ನ ಮೇಲೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಲೇ ಇದ್ದಾರೆ. ಈ ಬಗ್ಗೆ ಸಿಎಂಗೆ ಹೇಳಿ ಪ್ರಯೋಜವಿಲ್ಲ. ನನ್ನ ಪ್ರಾಣಕ್ಕೆ ಏನೇ ಆದ್ರೂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಹಾಗೂ ಕೆಲವು ನಾಯಕರೇ ಹೊಣೆ ಎಂದು ಈಗಾಗಲೇ ಪ್ರಧಾನಮಂತ್ರಿ ಮೋದಿ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.












Click it and Unblock the Notifications