ನಿಖಿಲ್ ಸೋತು, ಪ್ರಜ್ವಲ್ ಗೆದ್ದಿದ್ದು ಸಿಎಂಗೆ ಸಹಿಸಲಾಗ್ತಿಲ್ಲ: ಈಶ್ವರಪ್ಪ ಟೀಕೆ
ಬೆಂಗಳೂರು, ಜೂನ್ 27: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕೆರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ ಘಟನೆಗೆ ಬಿಜೆಪಿಗೆ ಶಾಸಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಪೌರುಷ ಪ್ರದರ್ಶನ ನಡೆಯುವುದಿಲ್ಲ ಎಂದು ಅವರು ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಈಶ್ವರಪ್ಪ, 'ಸಹಾಯ ಕೇಳಿ ಬಂದ ಜನರ ಮೇಲೆ ಆವಾಜ್ ಹಾಕುತ್ತೀರಾ?' ಎಂದು ಕಿಡಿಕಾರಿದರು.

'ಮೊದಲು ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ಆಗ ಯಾರೂ ನಿಮ್ಮ ಬಳಿ ಸಹಾಯ ಕೇಳಿ ಬರುವುದಿಲ್ಲ. ಕಷ್ಟ ಹೇಳಿಕೊಳ್ಳಲು ಬಂದವರಿಗೆ ಲಾಠಿ ಚಾರ್ಜ್ ಮಾಡಿಸ್ತೀರಾ? ನೀವು ಸಿಎಂ ಆಗಲು ಆಯೋಗ್ಯರು' ಎಂದು ಈಶ್ವರಪ್ಪ ಹರಿಹಾಯ್ದರು.
'ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಮಗ ನಿಖಿಲ್ ಸೋಲು ಅನುಭವಿಸಿ, ಹಾಸನದಲ್ಲಿ ರೇವಣ್ಣ ಅವರ ಮಗ ಪ್ರಜ್ವಲ್ ಗೆದ್ದಿರುವುದು ಮುಖ್ಯಮಂತ್ರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆ ಸಿಟ್ಟನ್ನು ಜನರ ಮೇಲೆ ತೋರಿಸುತ್ತಿದ್ದಾರೆ' ಎಂದು ಟೀಕಿಸಿದರು.
'ಪ್ರಜಾಪ್ರಭುತ್ವದಲ್ಲಿ ಇಂತಹ ಪೌರುಷ ನಡೆಯುವುದಿಲ್ಲ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಜನರು ಕಾಂಗ್ರೆಸ್ ಪಕ್ಷವನ್ನೇ ತಿರಸ್ಕಾರ ಮಾಡಿದ್ದರು. ಇದು ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗೊತ್ತಿರಲಿ' ಎಂದು ಹೇಳಿದರು.











Click it and Unblock the Notifications