ಸಂತೋಷ್ ಲಾಡ್ ಸಂತೋಷಕ್ಕೆ ಬಿಜೆಪಿ ಅಡ್ಡಗಾಲು
ಬೆಂಗಳೂರು, ಅ.11 : ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡುವ ತನಕ ತನ್ನ ಹೋರಾಟ ಮುಂದುವರೆಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇದರಿಂದ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಂಗಿಕುಸ್ತಿ ನಡೆಯುವುದು ಖಚಿತವಾಗಿದೆ.
ಸಚಿವ ಸಂತೋಷ್ ಲಾಡ್ ವಿಚಾರದಲ್ಲಿ ಬಿಜೆಪಿ ರಾಜ್ಯ ನಾಯಕರ ಹೋರಾಟದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋರಾಟವನ್ನು ಸಚಿವರು ರಾಜೀನಾಮೆ ನೀಡುವ ತನಕ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.

ಆದ್ದರಿಂದ ಬಿಜೆಪಿ ಸಂತೋಷ್ ಲಾಡ್ ವಿರುದ್ದ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸಜ್ಜಾಗಿದೆ. ಲಾಡ್ ರಾಜೀನಾಮೆ ನೀಡುವ ತನಕ ಹೋರಾಟ ನಡೆಸಲಿ ಸಜ್ಜಾಗಿ ನಿಂತಿದೆ.
ಸಂತೋಷ್ ಲಾಡ್ ಅವರಿಗೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ಮಾತ್ರ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಬಿಜೆಪಿ ತನ್ನ ಹೋರಾಟವನ್ನು ತೀವ್ರಗೊಳಿಸಿ ಲಾಡ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲು ನಿರ್ಧರಿಸಿದೆ.
ಅಧಿವೇಶದಲ್ಲಿ ಜಂಗಿ ಕುಸ್ತಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ.25ರಿಂದ ಚಳಿಗಾಲದ ಅಧಿವೇಶನ ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರದ ವಿರುದ್ಧ ಅಧಿವೇಶನದಲ್ಲೂ ಹೋರಾಟ ನಡೆಸಲು ಬಿಜೆಪಿ ಸಿದ್ದವಾಗಿದೆ.
ಸಂತೋಷ್ ಲಾಡ್ ವಿಚಾರ ವಿಧಾನಸಭೆಯ ಅಧಿವೇಶದೊಳಕ್ಕೆ ಪ್ರವೇಶಿಸಿದರೆ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹೋರಾಟ ನಡೆಸುತ್ತವೆ. ಆಗ ಅಧಿವೇಶನ ನಡೆಸುವುದು ಕಷ್ಟವಾಗಲಿದೆ. ಕೆಜೆಪಿ, ಜೆಡಿಎಸ್ ಬೆಂಬಲವನ್ನು ಪಡೆದು ಸದನದಲ್ಲಿ ಹೋರಾಟ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಸಂತೋಷ್ ಲಾಡ್ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ, ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಲಾಡ್ ವಿರುದ್ಧ ಮತ್ತಷ್ಟು ದಾಖಲೆ ಬಿಡುಗಡೆ ಮಾಡಿದ್ದಾರೆ. (ಸಂತೋಷ್ ಲಾಡ್ ಮತ್ತಷ್ಟು ಸಂಕಷ್ಟ)
ಬಿಜೆಪಿ ಪ್ರತಿ ಜಿಲ್ಲೆಯಲ್ಲೂ ಹೋರಾಟ ನಡೆಸಲು ಯೋಜನೆ ಸಿದ್ಧಪಡಿಸುತ್ತಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕುವುದು ಖಚಿತವಾಗಿದೆ. ಒತ್ತಡಕ್ಕೆ ಮಣಿದ ಲಾಡ್ ಸಚಿವ ಸ್ಥಾನ ತೊರೆಯುತ್ತಾರಾ? ಕಾದು ನೋಡಬೇಕು.












Click it and Unblock the Notifications