ನೀತಿಗೆಟ್ಟ ರಾಜಕೀಯ ನಿಲ್ಲಿಸಿ: ಕಾಂಗ್ರೆಸ್, ಬಿಜೆಪಿಗೆ ಎಎಪಿ ತರಾಟೆ
ಬೆಂಗಳೂರು, ಸೆ.22: ಇಡೀ ರಾಜ್ಯವೇ ಸುಪ್ರೀಂ ಕೋರ್ಟಿನ ಆಘಾತಕಾರಿ ತೀರ್ಪುಗಳಿಂದ ಪದೇ ಪದೇ ಹೊತ್ತಿ ಉರಿಯುತ್ತಿದ್ದು, ರಾಜ್ಯದ ಯಾವುದೇ ಜನ ಪ್ರತಿನಿಧಿಗಳಿಗೆ ಈ ಬಗ್ಗೆ ಕಿಂಚಿತ್ತು ಕಾಳಜಿ ಇದ್ದಂತೆ ಕಾಣುತ್ತಿಲ್ಲ.
ಬರಗಾಲ, ಬೆಳೆ ನಷ್ಟ, ಬೆಳೆದ ಬೆಳೆಗೆ ಬೆಲೆ ಇಲ್ಲದೆ, ಮಾರಿದ ಕಬ್ಬಿಗೆ ಹಣ ಸಿಗದೆ ರಾಜ್ಯದ ರೈತ ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಕಾವೇರಿ ನದಿ ನೀರು ಹಂಚಿಕೆಯಲ್ಲಿ ನಡೆಯುತ್ತಿರುವ ಘೋರ ಅನ್ಯಾಯದಿಂದಾಗಿ ರಾಜ್ಯದ ರೈತ ಮತ್ತಷ್ಟು ಪರಿತಪಿಸುವಂತಾಗಿದೆ. ಸುಪ್ರೀಂ ಕೋರ್ಟಿನ ಪ್ರತಿಯೊಂದು ತೀರ್ಪು, ಕಾವೇರಿ ಜಲಾನಯನ ಪ್ರದೇಶದ ಜನರು ಹಾಗೂ ರೈತರಿಗೆ ಮರಣಶಾಸನವಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನರ ದನಿಯಾಗಬೇಕಿದ್ದ ರಾಜ್ಯದ ಶಾಸಕರು ಹಾಗೂ ಸಂಸದರು, ಪಕ್ಷಬೇಧ ಮರೆತು ಒಂದಾಗಿ ರಾಜ್ಯದ ಜನರ ಪರವಾಗಿ ನಿಲ್ಲುವ ಬದಲು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಕಟುವಾಗಿ ಖಂಡಿಸುತ್ತದೆ.

ಈ ಕೂಡಲೇ ರಾಜ್ಯದ 28 ಸಂಸದರು ಹಾಗೂ 224 ಶಾಸಕರು ದೆಹಲಿಗೆ ತೆರಳಿ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳು ಮಧ್ಯಪ್ರವೇಶಸಲು ಒತ್ತಾಯಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ವಿನಂತಿಸಿಕೊಳ್ಳುತ್ತದೆ.
ರಾಜ್ಯದ ಜನಪ್ರತಿನಿಧಿಗಳಿಗೆ ಭಾರತದ ಸಂವಿಧಾನ ನೀಡಿರುವ ಶಾಸನಾತ್ಮಕ ಅಧಿಕಾರವನ್ನು ಈ ಕೂಡಲೇ ಪ್ರಧಾನಿಗಳ ಬಳಿ ಕುಳಿತು ಮಾತನಾಡಲು ಚಲಾಯಿಸಬೇಕು. ಈ ವಿಚಾರದಲ್ಲಿ ಯಾರೂ ಪಕ್ಷ ಭೇದ ಮಾಡದೆ, ರಾಜ್ಯದ ರೈತರ ಹಾಗೂ ಜನತೆಯ ಕಾಳಜಿ ವಹಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಆಗ್ರಹಿಸುತ್ತದೆ.

ಯಡಿಯೂರಪ್ಪನವರ ಉದ್ಧಟತನ
ರಾಜ್ಯದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದೆ ಸಂಸದರೂ ಆಗಿರುವ, ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತಾರಕ್ಕೇರಿಸಿದ ಕೀರ್ತಿಯುಳ್ಳ ಮಾನ್ಯ ಯಡಿಯೂರಪ್ಪನವರು ಉದ್ಧಟತನ ಮೆರೆದಿದ್ದಾರೆ. ಒಂದೆಡೆ ಮಹಾರಾಷ್ಟ್ರದ ಬಿಜೆಪಿ ನಾಯಕಿ ಶಾನಿಯಾ ಎನ್.ಸಿ ಕಾವೇರಿ ವಿಚಾರದಲ್ಲಿ ಕರ್ನಾಟಕವೇ ನಾಟಕವಾಡುತ್ತಿದ್ದು, ತಮಿಳುನಾಡಿಗೆ ನೀರು ಬಿಡಬೇಕೆಂದು ಹೇಳಿದ್ದಾರೆ,
ಮತ್ತೊಂದೆಡೆ ರಾಜ್ಯದ ಬಿಜೆಪಿ ವಕ್ತಾರೆ ಮಾಳವಿಕಾ ರಾಜ್ಯದ ಸಂಕಷ್ಟದಲ್ಲಿರುವಾಗ ತಮ್ಮ ತಮಿಳು ಪ್ರೇಮವನ್ನು ಸಾಮಾಜಿಕ ಜಾಲತಾನದಲ್ಲಿ ಹರಿಯಬಿಟ್ಟರು. ಮತ್ತೊಂದೆಡೆ ತಮಿಳುನಾಡು ಬಿಜೆಪಿಯ ಮುಖ್ಯಸ್ಥೆ ತಮಿಳುಸೈ ಸುಂದರರಾಜನ್
ತಮಿಳುನಾಡಿಗೆ ನೀರು ಸತತವಾಗಿ ಹರಿದು ಬರುತ್ತಿರಲು ಪ್ರಧಾನಿ ಮೋದಿಯೇ ಕಾರಣ ಎಂದು ಪ್ರಚಾರ ಮಾಡುತ್ತಿದ್ದಾರೆ,

ಬಿಜೆಪಿಯಿಂದ ಕೆಟ್ಟ ರಾಜಕೀಯ
ರಾಜ್ಯದ ಜನರಿಗೆ ಒಂದು ಬಾರಿ ಇವರನ್ನು ಮುಖ್ಯಮಂತ್ರಿಯಾಗಿ ಕೊಟ್ಟು ಅನುಭವಿಸವಂತೆ ಮಾಡಿದ್ದು ಬಿಜೆಪಿಗೆ ಸಾಲದು ಎಂಬಂತೆ, ಇದೀಗ ಸಂಸದರಾಗಿಯೂ ತಮ್ಮ ಜವಾಬ್ದಾರಿ ನಿರ್ವಹಿಸದೇ ಇರಲು ತೀರ್ಮಾನಿಸಿರುವುದು ನಾಚಿಕೆಗೇಡಿನ ವಿಷಯ. ಬಿಜೆಪಿಯ ಈ ಕೆಟ್ಟ ರಾಜಕೀಯದಿಂದಾಗಿ ಇಡೀ ರಾಜ್ಯವನ್ನೇ ಕತ್ತಲೆಗೆ ತಳ್ಳಿದಂತಾಗಿದೆ.
ರಾಜ್ಯದ ಬಿಜೆಪಿಯ ಮೌನ, ಇಡೀ ವಿವಾದದಲ್ಲಿ ಕರ್ನಾಟಕಕ್ಕೆ ಸೋಲುಂಟಾಗಲು ಬಿಜೆಪಿಯೇ ಹುನ್ನಾರ ನಡೆಸಿರಬಹುದು ಎಂಬ ಬಲವಾದ ಸಂಶಯ ಮೂಡುತ್ತಿದೆ. ರಾಜ್ಯದಿಂದ 17 ಜನ ಸಂಸದರಿದ್ದರೂ, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯನ್ನು ಒತ್ತಾಯಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ

ಶಶಿ ಶೇಖರನ್ ಅವರು ತಮಿಳುನಾಡು ಮೂಲದವರು
ಇನ್ನೊಂದೆಡೆ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶಶಿ ಶೇಕರನ್ ಅವರು ತಮಿಳುನಾಡು ರಾಜ್ಯದ ಐ.ಏ.ಎಸ್ ಕೇಡರ್ ಅಧಿಕಾರಿಯಾಗಿದ್ದಾರೆ. ಇವರಿಂದ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದ ತೀರ್ಪುನ್ನು ಅಪೇಕ್ಷಸಿಲು ಸಾದ್ಯವೇ ಇಲ್ಲದಿರುವುದು ಜಗತ್ತಿಗೇ ತಿಳಿದ ವಿಷಯ, ಹಾಗಾಗಿ ಇವರನ್ನು ಈ ಕೂಡಲೇ ಬದಲಿಸಿ, ಈ ವಿಷಯಕ್ಕೆ ಸಂಬಂಧಪಡದ ರಾಜ್ಯದ ಅಧಿಕಾರಿಯನ್ನು ಶಶಿ ಶೇಕರನ್ ಸ್ಥಾನಕ್ಕೆ ನೇಮಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತದೆ.

ಮೋದಿ ಅವರ ಮಧ್ಯಸ್ಥಿಕೆ ಅಗತ್ಯವಿದೆ
ಶ್ರೀಮಾನ್ ನರೇಂದ್ರ ಮೋದಿಯವರು ಕೇವಲ ಬಿಜೆಪಿ ಪಕ್ಷಕ್ಕೆ ಅಥವಾ ಬಿಜೆಪಿ ಮಿತ್ರ ಪಕ್ಷಗಳ ಆಡಳಿತ ರಾಜ್ಯಗಳಿಗೆ ಪ್ರಧಾನಮಂತ್ರಿಗಳಲ್ಲ, ಇಡೀ ಭಾರತಕ್ಕೆ ತಾವೂ ಪ್ರಧಾನಮಂತ್ರಿಗಳು ಎಂಬುದನ್ನು ಮನಗಾಣಬೇಕೆಂದು ಆಗ್ರಹಿಸುತ್ತದೆ. ಕೇಂದ್ರ ಸರ್ಕಾರದ ಕರ್ನಾಟಕದ ಕಡೆಗಿನ ನಿರಂತರ ಮೌನ, ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಿರುವುದು ಅತ್ಯಂತ ಖಂಡನೀಯ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಲ್ಲಿ ಕಾವೇರಿ ನದಿ ವಿವಾದ ಅರ್ಜಿಗಳನ್ನು ಪರಿಶೀಲಿಸಲು ಬೇರೊಂದು ಪೀಠಕ್ಕೆ ವರ್ಗಾಯಿಸಬೇಕೆಂದು ಮನವಿ ಸಲ್ಲಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.












Click it and Unblock the Notifications