ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ
ಬೆಂಗಳೂರು, ನ.13: 'ಅಯ್ಯೋ ಅಂತೂ ಇಂತು ಮಳೆಗಾಲ ಮುಗೀತು' ಎಂದು ನಿಟ್ಟುಸಿರು ಬಿಟ್ಟಿದ್ದ ಬೆಂಗಳೂರಿನ ಜನ ನಿಧಾನವಾಗಿ ಚಳಿಗಾಲಕ್ಕೆ ಹೊಂದಿಕೊಳ್ಳುತ್ತಿದ್ದರು. ಆದರೆ ಸುಮಾರು 15 ದಿನಗಳಿಂದ ಮಾಯವಾಗಿದ್ದ ವರುಣ ಗುರುವಾರ ಬೆಳಗ್ಗೆಯೇ ಹಾಜರಾಗಿದ್ದ.
ಗುರುವಾರ ಬೆಂಗಳೂರು ಎಂದಿನಂತೆ ಇರಲಿಲ್ಲ. ಬೆಳಗ್ಗೆಯಿಂದಲೇ ಆರಂಭವಾದ ಜಿಟಿ ಜಿಟಿ ಮಳೆ ಸಂಜೆ ವೇಳೆಗೆ ಜೋರಾಯಿತು. ಅತ್ತ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದ ಡಾ. ರಾಜ್ ಪ್ರತಿಮೆಗೆ ಬೆಂಕಿ ಇಟ್ಟ ಸುದ್ದಿ ಬೆಳಗ್ಗೆ ಒಂದಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು.[ಬೆಂಗಳೂರಿಗರಿಗೆ ಗುಡ್ ಮಾರ್ನಿಂಗ್ ಹೇಳಿದ ಮಳೆ]

ಬೆಳಗ್ಗೆ ಕಚೇರಿಗೆ ತೆರಳುವವರು ಹೊಂಡ ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುತ್ತ ಒಂದರ್ಧ ಗಂಟೆ ತಡವಾಗಿಯಾದರೂ ಮುಟ್ಟಿದರು. 'ಮೊದಲೇ ಟ್ರಾಫಿಕ್ ಜಾಮ್ ಈ ಮಳೆ ಬೇರೆ' ಎಂಬ ಗೊಣಗಾಟ ಸಾಮಾನ್ಯವಾಗಿತ್ತು.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನು ಎರಡು ದಿನ ನಗರದಲ್ಲಿ ಮಳೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗುರುವಾರ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಆಂಧ್ರದ ವಿಶಾಖಪಟ್ಟಣಕ್ಕೆ ಚಂಡಮಾರುತವೊಂದು ಅಪ್ಪಳಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅದು ದುರ್ಬಲಗೊಂಡು ಮಾಯವಾಗಿದೆ.
ನವೆಂಬರ್ 14 ಮತ್ತು 15 ರಂದು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರರ್ಥ ಆ ಏರಿಯಾದಲ್ಲಿ ಮನೆಗೆ ನೀರು ನುಗ್ಗಿತು. ಗಾಳಿ ಆಂಜನೇಯ ಮತ್ತೆ ನೀರಲ್ಲಿ ಮುಳುಗಿದ ಎಂಬ ಸುದ್ದಿ ಮತ್ತೆ ಮಾಧ್ಯಮಗಳಲ್ಲಿ ಬಿತ್ತರವಾದರೂ ಆಶ್ಚರ್ಯವಿಲ್ಲ.
ಬೆಂಗಳೂರಿನ ಹವಾಮಾನವೇನು?
ಗುರುವಾರ ಬೆಂಗಳೂರಿನಲ್ಲಿ 4 ಮಿಮೀ ಮಳೆಯಾಗಿದೆ. ಎಚ್ಎಎಎಲ್ ವಿಮಾನ ನಿಲ್ದಾಣದಲ್ಲಿ 5 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರಿನ ಹೊರವಲಯದ ನೆಲಮಂಗಲ, ಯಲಹಂಕ, ದೇವನಹಳ್ಳಿ, ದೊಡ್ಡ ಬಳ್ಳಾಪುರದಲ್ಲೂ ಮಳೆಯಾಗಿದೆ.
ಉಳಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಕಲಬುರ್ಗಿಯ ನೆಲೋಗಿಯಲ್ಲಿ ಅತಿಹೆಚ್ಚು ಅಂದರೆ 7 ಮಿಮೀ ಮಳೆಯಾಗಿದೆ. ಉತ್ತರ ಕರ್ನಾಟಕದ ಬೀದರ್, ಸಿಂದಗಿ, ಸುಲ್ತಾನ್ ಪೇಟ, ಶಹಪುರದಲ್ಲೂ ವರುಣ ಕಾಣಿಸಿಕೊಂಡಿದ್ದಾನೆ. ಕರಾವಳಿ ಪ್ರದೇಶದಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ.












Click it and Unblock the Notifications