Bengaluru Second Airport: 2034ರ ವೇಳೆಗೆ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ: ಎಲ್ಲಿ ಎಂದು ತಿಳಿಯಿರಿ
Bengaluru Second Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್ ಹೊಂದಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಮಾತ್ರ ಕೆಡಿಮೆಯಾಗುತ್ತಿಲ್ಲ. ಈ ಹಿನ್ನೆಲೆ ನಗರದ ಸಮೀಪವೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಹಾಗಾದ್ರೆ ಯಾವಾಗ ಹಾಗೂ ಸ್ಥಳ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಬೆಂಗಳೂರಿನ ಯಾವ ಭಾಗದಲ್ಲಿ ಆಗಲಿದೆ ಎನ್ನುವುದೇ ಇದೀಗ ಕುತೂಹಲ ಹೆಚ್ಚಿಸಿದೆ. ಈ ನಡುವೆಯೂ ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಮಹತ್ವದ ಅಪ್ಡೇಟ್ವೊಂದು ಲಭ್ಯವಾಗಿದೆ.

ಈಗಾಗಲೇ ಮೊದಲಿಗೆ ನೆಲಮಂಗಲ ಬಳಿ ಜಾಗ ಗುರುತಿಸಿ ಸರ್ವೇ ಕಾರ್ಯ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಲ್ಲಿನ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ವಿಮಾನ ನಿಲ್ದಾಣ ಮಾಡಿದ್ರೆ ಫಲವತ್ತಾದ ಭೂಮಿ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಡಿ ಅಂತಾ ರೈತರು ಆಕ್ರೋಶ ಹೊರಹಾಕಿದ್ದರು.
ಅಷ್ಟೇ ಅಲ್ಲದೆ, ಇಲ್ಲಿ ಶಾಸಕರು ಸಹ ರೈತರ ಪರವಾಗಿ ನಿಲ್ಲುವ ಭರವಸೆಯನ್ನು ಕೂಡ ನೀಡಿದ್ದರು. ಶಾಸಕ ಸ್ಥಾನವನ್ನು ಮುಡುಪಾಗಿಟ್ಟರೂ ಸರಿ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಬಿಡುವುದಿಲ್ಲ. ನಾನು ರೈತರ ಪರ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದರು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಅವರು ಸ್ಪಂದಿಸಿದ್ದಾರೆ ಅಂತಾ ಹೇಳಿ ಜನರಿಗೆ ಭರವಸೆ ನೀಡಿದ್ದರು.
ಬೆಂಗಳೂರಿನ ಹೊರ ವಲಯದಲ್ಲಿ ಮೂರು ಪ್ರದೇಶಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. 2034ರ ವೇಳೆಗೆ ನಿರ್ಮಾಣ ಆಗಲಿರುವ ಈ ವಿಮಾನ ನಿಲ್ದಾಣದ ಜಾಗವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕನಕಪುರ ರಸ್ತೆಯಲ್ಲಿ ಗುರುತಿಸಲಾಗಿರುವ ಎರಡು ಪ್ರದೇಶಗಳಲ್ಲಿ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಒಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಮೂಲಕ, ಎರಡನೇ ವಿಮಾನ ನಿಲ್ದಾಣದ ರೇಸ್ನಲ್ಲಿದ್ದ ಬಿಡದಿ ಸ್ಪರ್ಧೆಯಿಂದ ಹೊರಡೆ ಬಿದ್ದಂತಾಗಿದೆ. ಅಲ್ಲದೆ ಸಚಿವ ಜಿ.ಪರಮೇಶ್ವರ್ ಹಾಗೂ ವಿ.ಸೋಮಣ್ಣ ಅವರ ಮನವಿಗೂ ಕ್ಯಾರೆ ಅನ್ನದೇ, ಈಗಾಗಲೇ ತುಮಕೂರನ್ನು ಸಹ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಕನಕಪುರ ರಸ್ತೆ ಅಥವಾ ನೆಲಮಂಗಲ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗಬಾರದು ಎಂದು ಸುಮಾರು 30ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್, ವಿ.ಸೋಮಣ್ಣ ಅವರು ಸಹ ಈಗಾಗಲೇ ಹಲವಾರು ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ, ತುಮಕೂರನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಟ್ಟಂತಿದೆ. ಮತ್ತೊಂದೆಡೆ ಮೈಸೂರು ರಸ್ತೆಯ ಬಿಡದಿ ಕೂಡಾ ರೇಸ್ನಲ್ಲಿತ್ತು. ಇದೀಗ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬಿಡದಿ ಸ್ಪರ್ಧೆಯಲ್ಲಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಎರಡನೇ ವಿಮಾನ ನಿಲ್ದಾಣಕ್ಕೆ ಬಿಡದಿ ಸೂಕ್ತ ಸ್ಥಳ ಅಲ್ಲ. ಆದ್ದರಿಂದ ಅದನ್ನು ವಿಮಾನ ನಿಲ್ದಾಣದ ಪ್ರಾಧಿಕಾರಿಗಳು ಪರಿಶೀಲನೆ ನಡೆಸಲು ಹೋಗುವುದಿಲ್ಲ. ಕನಕಪುರದ ಹಾರೋಹಳ್ಳಿ ಬಳಿ ಮತ್ತು ಕುಣಿಗಲ್ ಬಳಿ ಮತ್ತೊಂದು ಸ್ಥಳ ನೋಡಿದ್ದೇವೆ ಅಂತಲೂ ಹೇಳಿದ್ದಾರೆ.












Click it and Unblock the Notifications