Bengaluru water crisis: ಬೆಂಗಳೂರಿನಲ್ಲಿ ನೀರಿಗೆ ಬರ; ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ ನೀರಿನ ಟ್ಯಾಂಕರ್ ಬೆಲೆ!
ಬೆಂಗಳೂರು, ಫೆಬ್ರವರಿ.11: ಬೇಸಿಗೆ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಬರ ಆರಂಭವಾಗಿದೆ. ಈಗಾಗಲೇ ನಗರದಲ್ಲಿ ನೀರಿನ ಟ್ಯಾಂಕರ್ ಬೆಲೆ ಗಗನಕ್ಕೇರಿದ್ದು, ನೀರಿಗಾಗಿ ಜನರು ಪರದಾಡುವಂತಾಗಿದೆ. ಈ ಬೇಸಿಗೆಯಲ್ಲಿ ನಗರವು ದೊಡ್ಡ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಾವೇರಿ ನೀರಿನ ಪೂರೈಕೆಗಾಗಿ ಕಾಯುತ್ತಿರುವ ಹಲವಾರು ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ತಮ್ಮ ಅಗತ್ಯಗಳಿಗಾಗಿ ನೀರಿನ ಟ್ಯಾಂಕರ್ಗಳನ್ನು ಹೆಚ್ಚಾಗಿ ಅವಲಂಬಿಸಿವೆ. 12,000 ಲೀಟರ್ ಟ್ಯಾಂಕರ್ನ ನೀರಿನ ಬೆಲೆ ತಿಂಗಳ ಹಿಂದೆ ಸರಿಸುಮಾರು 1,200 ರೂಪಾಯಿಯಿತ್ತು. ಆದರೆ, ಈಗ ಕನಿಷ್ಠ 1,800 ರೂಪಾಯಿಗೆ ಏರಿದೆ.

ಕೆಲವು ಪ್ರದೇಶಗಳಲ್ಲಿ 12,000 ಲೀಟರ್ ಟ್ಯಾಂಕರ್ ಬೆಲೆ 2,000 ರೂಪಾಯಿಗೆ ಹೆಚ್ಚಿದೆ. ಬೇಸಿಗೆ ಬರುವ ಮುನ್ನವೇ ಇಷ್ಟೊಂದು ಹೆಚ್ಚಾಗಿದ್ದು, ಬೇಸಿಗೆ ಕಾಲದಲ್ಲಿ ನೀರಿನ ವೆಚ್ಚ 2,500 ರೂಪಾಯಿಗೆ ಹೆಚ್ಚಾಗಬಹುದು ಎಂದು ನೀರಿನ ಟ್ಯಾಂಕರ್ಗಳ ವಿತರಕರನ್ನು ಉಲ್ಲೇಖಿಸಿ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಬತ್ತಿದ ಬೋರ್ವೆಲ್ನಿಂದಾಗಿ ನೀರು ಪೂರೈಕೆಗೆ ತೊಂದರೆಯಾಗಿದ್ದು, ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ನೀರಿನ ಟ್ಯಾಂಕರ್ ಪೂರೈಕೆದಾರರು. ''ನಗರದ ಬಹುತೇಕ ಬೋರ್ವೆಲ್ಗಳು ಬತ್ತಿರುವುದರಿಂದ ಟ್ಯಾಂಕರ್ ತುಂಬಿಸಲು ನಾವು ಸುಮಾರು 40 ಕಿ.ಮೀ ಪ್ರಯಾಣಿಸಬೇಕಾಗಿದೆ. ಇದು ಇಂಧನದ ಮೇಲಿನ ವೆಚ್ಚ ಹೆಚ್ಚಿಸುತ್ತದೆ. ಹೀಗಾಗಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ' ಎಂದು ದೊಡ್ಡನೆಕುಂದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ವಾಟರ್ ಸಪ್ಲೈ ವರ್ಕ್ಸ್ ಮಾಲೀಕ ರಮೇಶ್ ರೆಡ್ಡಿ ಎಸ್. ಹೇಳಿದ್ದಾರೆ.

"ಮೊದಲು, ನಾವು ಕನಿಷ್ಠ 12 ಟ್ರಿಪ್ಗಳನ್ನು ಪೂರ್ಣಗೊಳಿಸಬಹುದಿತ್ತು. ಈಗ, ಸೀಮಿತ ಸಂಖ್ಯೆಯ ಬೋರ್ವೆಲ್ಗಳ ಕಾರ್ಯಾಚರಣೆಯ ಕಾರಣದಿಂದ ನೀರು ತುಂಬಿಸಲು ಭಾರಿ ನೂಕುನುಗ್ಗಲು ಇದೆ. ನಾವು ದಿನಕ್ಕೆ ಮೂರ್ನಾಲ್ಕು ಟ್ರಿಪ್ಗಳನ್ನು ಪೂರ್ಣಗೊಳಿಸಲು ಕಷ್ಟವಾಗುತ್ತಿದೆ" ಎಂದು ವರ್ತೂರು ಮತ್ತು ಬೊಮ್ಮನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಿ ವಾಟರ್ ಸಪ್ಲೈನ ಪ್ರವೀಣ್ ತಿಳಿಸಿದ್ದಾರೆ.
ಅನೇಕ ಟ್ಯಾಂಕರ್ ಪೂರೈಕೆದಾರರು ಈಗ ಹೊಸ ಆರ್ಡರ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ತಮ್ಮ ಮಾಮೂಲಿ ಗ್ರಾಹಕರಿಗೆ ಮಾತ್ರ ಸರಬರಾಜು ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಯಿದೆ. ಮಹದೇವಪುರ, ಮಾರತ್ತಹಳ್ಳಿ, ದೊಡ್ಡನೆಕುಂದಿ, ಹೊರಮಾವು, ವರ್ತೂರು, ಬೊಮ್ಮನಹಳ್ಳಿ, ಆರ್ಆರ್ನಗರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದೆ.












Click it and Unblock the Notifications