ಬೆಂಗಳೂರು ಗಲಭೆ; ಕೇರಳದಲ್ಲಿ ಅಡಗಿರುವ ಆರೋಪಿಗಳು?
ಬೆಂಗಳೂರು, ಆಗಸ್ಟ್ 17 : ಬೆಂಗಳೂರಿನ ಕಾವಲ್ ಭೈರಸಂದ್ರ, ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆಯ ಆರೋಪಿಗಳು ಕೇರಳದಲ್ಲಿ ಅಡಗಿದ್ದಾರೆ?. ಗಲಭೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೇರಳದಲ್ಲಿ ಕೆಲವು ಫೋನ್ ಕರೆಗಳ ಲೊಕೇಷನ್ ಪತ್ತೆಯಾಗಿದೆ.
Recommended Video
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮೂವರು ಗಲಭೆಯಲ್ಲಿ ಮೃತಪಟ್ಟಿದ್ದರು.
ಈ ಗಲಭೆಯ ತನಿಖೆಗೆ ಪೊಲೀಸರು ಸೈಬರ್ ಕ್ರೈಂ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಸಹಾಯ ಪಡೆದಿದ್ದಾರೆ. ಮೊಬೈಲ್ ಕರೆಗಳ ಮಾಹಿತಿ, ಸಿಸಿಟಿವಿ ದೃಶ್ಯಾವಳಿಗಳನ್ನು ಈ ತಂಡಗಳು ಪರಿಶೀಲನೆ ನಡೆಸುತ್ತಿವೆ.

ಆರೋಪಿಗಳು ಗಲಭೆ ನಡೆಸಲು ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 309 ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ. ಕೆಲವು ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು, ನಿರಂತರವಾಗಿ ಮಾಡಿರುವ ಕರೆಗಳ ಮಾಹಿತಿ ಸಂಗ್ರಹ ಮಾಡಲಾಗಿದೆ.
ಈ ವೇಳೆ 30 ಜನರ ದೂರವಾಣಿ ಕರೆಗಳ ಲೊಕೇಷನ್ ಕೇರಳದಲ್ಲಿ ಪತ್ತೆಯಾಗಿದೆ. ಆರೋಪಿಗಳು ಗಲಭೆ ನಡೆದ ಬಳಿಕ ಕೇರಳಕ್ಕೆ ಪರಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಿಸಿಬಿ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಭಾನುವಾರದ ತನಕ ಗಲಭೆಗ ಸಂಬಂಧಿಸಿದಂತೆ ಒಟ್ಟು 52 ಎಫ್ಐಆರ್ ದಾಖಲಾಗಿದ್ದು, 309 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಂತೆ ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications