Bengaluru Traffic: ಬೆಂಗಳೂರಿನಲ್ಲಿ ಟ್ರಾಫಿಕ್ ಟೂರ್ ಪ್ಯಾಕೇಜ್: ಎಷ್ಟು ಗಂಟೆ ಪ್ರವಾಸ?
ಬೆಂಗಳೂರು ಅಂದಾಕ್ಷಣ ಅಯ್ಯೋ ಟ್ರಾಫಿಕ್ ಅನ್ನೋದು ಕಾಮನ್. ಅಷ್ಟರಮಟ್ಟಿಗೆ ಬೆಂಗಳೂರಿನ ಟ್ರಾಫಿಕ್ ಜಗಜ್ಜಾಹೀರಾಗಿದೆ. ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ನಗರಗಳ ಪೈಕಿ ಸ್ಥಾನವನ್ನೂ ಪಡೆದುಕೊಂಡಿರುವುದು ಹೊಸದೇನಲ್ಲ. ವಾಹನ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ಕೋಟಿ ಕೋಟಿ ಸುರಿಯುತ್ತಿದ್ದರೂ ಟ್ರಾಫಿಕ್ ಜಗ್ಗುತ್ತಿಲ್ಲ. ಇದೀಗ ಹೊಸ ವಿಷಯವೇನಂದ್ರೆ ಬೆಂಗಳೂರಿನಲ್ಲಿ ಟ್ರಾಫಿಕ್ ಟೂರಿಸಂ ಪ್ಯಾಕೇಜ್. ಹೌದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ನಾವೆಲ್ಲ ಟೂರಿಂಗ್ ಪ್ಯಾಕೇಜ್ ಅನ್ನು ಕೇಳಿದ್ದೆವು. ಇದೇನಿದು ಟ್ರಾಫಿಕ್ ಟೂರಿಸಂ ಪ್ಯಾಕೇಜ್ ಅಂತಿರಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ..
ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನಲ್ಲಿರುವ ಪ್ರಮುಖ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಈಗಾಗಲೇ ಒಂದು ಟೂರ್ ಪ್ಯಾಕೇಜ್ ಸೇವೆ ನೀಡುತ್ತಿದೆ. ಆದರೆ, ಈಗ ಬೆಂಗಳೂರಿನ ಟ್ರಾಫಿಕ್ ಪ್ರವಾಸದ ಪ್ಯಾಕೇಜ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗತೊಡಗಿದೆ. ವೈರಲ್ ಆಗಿರುವ ಪೋಸ್ಟ್ನಲ್ಲಿ 4 ದಿನ ಹಾಗೂ 3 ರಾತ್ರಿ ಬೆಂಗಳೂರು "ಟ್ರಾಫಿಕ್ ಟೂರಿಸಂ" ಪ್ಯಾಕೇಜ್ ಎಂದು ಬರೆಯಲಾಗಿದ್ದು, ಇದನ್ನು ಹಲವರು ಕುತೂಹಲದಿಂದ ಶೇರ್ ಮಾಡಿಕೊಂಡಿದ್ದಾರೆ. ಉದ್ಯಮಿ ಮೋಹನದಾಸ್ ಪೈ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಜಂಜಾಟದಿಂದ ಬೇಸತ್ತು ಈ ರೀತಿ ಹಾಸ್ಯಮಯವಾದ ಪೋಸ್ಟ್ ಹಾಕಲಾಗಿದೆ.

ಮೋಹನದಾಸ್ ಪೈ ಅವರು "4 ದಿನ, 3 ರಾತ್ರಿ ಬೆಂಗಳೂರು ಟ್ರಾಫಿಕ್ ಟೂರಿಸಂ ಪ್ಯಾಕೇಜ್ ಎಂದು ಜಾಹೀರಾತು ನೀಡುವ ಪೋಸ್ಟ್ ಅನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್ ಟೂರ್ ಮಾಡಬೇಕಾದವರು ನೋಡಲೇಬೇಕಾದ ಸ್ಥಳಗಳೆಂದರೆ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್), ಸಿಲ್ಕ್ಬೋರ್ಡ್ ರಸ್ತೆ ಜಂಕ್ಷನ್, ಮಾರತ್ತಹಳ್ಳಿ ಮತ್ತು ಎಚ್ಎಸ್ಆರ್ ಲೇಔಟ್ ಎಂದು ಪಟ್ಟಿ ಮಾಡಲಾಗಿದೆ. ಬೆಂಗಳೂರಿನ ಮೇಲೆ ಒಂದು ದುಃಖದ ಜೋಕ್. ಕನಿಷ್ಠ ಪಕ್ಷ ನಮ್ಮ ನೋವು ಮತ್ತು ಕಾಳಜಿಯಿಲ್ಲದ ಸರ್ಕಾರದ ಬಗ್ಗೆ ನಮಗೆ ಹಾಸ್ಯಪ್ರಜ್ಞೆ ಇದೆ ಎಂದು ಮೋಹನ್ ದಾಸ್ ಪೈ ಬರೆದುಕೊಂಡಿದ್ದಾರೆ. ಈ ರೀತಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ವ್ಯಂಗ್ಯ ಮಾಡಲಾಗಿದೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅತಿ ಹೆಚ್ಚು ವೀಕ್ಷಣೆ ಪಡೆದಿದೆ. ಜೊತೆಗೆ ಬೆಂಗಳೂರು ಟ್ರಾಫಿಕ್ ಬಗ್ಗೆ ಚರ್ಚೆಯನ್ನೂ ಹುಟ್ಟುಹಾಕಿದೆ. ಕೆಲವರು ಇದು ಜೋಕ್ ಆದರೂ ತಪ್ಪಿಲ್ಲ. ಇಲ್ಲಿನ ಟ್ರಾಫಿಕ್ ಇದಕ್ಕಿಂತ ಭೀಕರವಾಗಿದೆ. ಇನ್ನೂ ಕೆಲವರು ನಾವು ದಿನನಿತ್ಯ ಈ ಪ್ರವಾಸ ಮಾಡುತ್ತಲೇ ಇದ್ದೇವೆ ಎಂದೂ ಹಾಸ್ಯಚಟಾಕಿ ಹಾರಿಸಿದ್ದಾರೆ.

ಪೈ ಅವರು ಬೆಂಗಳೂರಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ ಪರಿಹಾರಗಳನ್ನು ನೀಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ನೀವು ಅನೇಕ ಆಕ್ರೋಶಗಳನ್ನು ಪೋಸ್ಟ್ ಮಾಡುತ್ತಿದ್ದೀರಿ. ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ನಿಮ್ಮ ಪರಿಹಾರವೇನು? ಎಂದು ಪ್ರಶ್ನಿಸಿದ್ದಾರೆ. ಸುರಂಗಗಳು, ಎತ್ತರದ ರಸ್ತೆಗಳು, ಫ್ಲೈಓವರ್ಗಳು, ಅಂಡರ್ಪಾಸ್ಗಳನ್ನು ನಿರ್ಮಿಸುವುದಾ ಎಂದು ಕೇಳಿದ್ದಾರೆ. ನಮಗೆ ಈ ರೀತಿಯ ಜೋಕ್ ಅಲ್ಲ, ಪರಿಹಾರ ಬೇಕಾಗಿದೆ ಎಂದೂ ಹೇಳಿದ್ದಾರೆ. ಬೆಂಗಳೂರಿನ ಬಗ್ಗೆ ಈ ರೀತಿ ಕೀಳಾಗಿ ಚಿತ್ರಿಸಲಾಗುತ್ತಿದೆ ಎಂದೂ ಕೆಲವರು ಪೈ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೆಸರನ್ನು ಕೆಣಕಲು ನೀವು ಯಾವಾಗಲೂ ಮುಂದಿರುತ್ತೀರಿ ಎಂದೂ ಟೀಕಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಟ್ರಾಫಿಕ್ನಂತಹ ಪ್ರಮುಖ ಸವಾಲುಗಳನ್ನು ಚರ್ಚಿಸಲು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಬೆಂಗಳೂರು ಒಂದು ದೊಡ್ಡ ನಗರ, ಜಾಗತಿಕ ನಗರ ಮತ್ತು ವಿಜ್ಞಾನ ನಗರ ಎಂದಿದ್ದರು. ಇಲ್ಲಿ ಉತ್ತಮ ಪಾದಚಾರಿ ಮಾರ್ಗಗಳು, ರಸ್ತೆಗಳು ಮತ್ತು ಮೆಟ್ರೋ ವಿಸ್ತರಣೆ ಸೇರಿದಂತೆ ಹಲವು ಅಗತ್ಯಗಳಿವೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ಪರಿಹಾರ ನೀಡುವ ವಿಶ್ವಾಸ ನಮಗಿದೆ ಎಂದು ಹೇಳಿದ್ದರು.












Click it and Unblock the Notifications