Bengaluru Second Airport: 2ನೇ ಏರ್ಪೋರ್ಟ್ಗೆ ಫೈನಲ್ ಆಗದ ಜಾಗ, ಹೊಸೂರು ಬಳಿ ಚುರುಕಾಯ್ತು ಕೆಲಸ
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಇನ್ನೂ ಜಾಗ ಫೈನಲ್ ಮಾಡಲು ಹೆಣಗಾಡುತ್ತಿದೆ. ಮಾಗಡಿ ಬಳಿ ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳೀಯರು, ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅತ್ತ ತಮಿಳುನಾಡು ಕರ್ನಾಟಕಕ್ಕೆ ಟಕ್ಕರ್ ಕೊಡಲು ಮುಂದಾಗಿದ್ದು, ಹೊಸೂರು ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಕೆಲಸವನ್ನು ಚುರುಕುಗೊಳಿಸಿದೆ. ಈಗಾಗಲೇ ಅಲ್ಲಿ ಸಮೀಕ್ಷೆಗೆ ಮುಂದಾಗಿದ್ದು, ಸ್ಥಳ ಅಂತಿಮಗೊಳಿಸಲು ಸಜ್ಜಾಗಿದೆ.
ತಮಿಳುನಾಡು ಸರ್ಕಾರ ಹೊಸೂರು ವಿಮಾನ ನಿಲ್ದಾಣ ಯೋಜನೆಗಾಗಿ ಅಡಚಣೆ ಮಿತಿ ಮೇಲ್ಮೈ (ಒಎಸ್ಎಲ್) ಸಮೀಕ್ಷೆಯ ಶೀಘ್ರದಲ್ಲೇ ನಡೆಯಲಿದ್ದು, ಸ್ಥಳ ಅಂತಿಮಗೊಳ್ಳಲಿದೆ. ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಯೋಜನೆಯೊಂದಿಗೆ ತ್ವರಿತ ಹೆಜ್ಜೆ ಇಡುತ್ತಿದೆ. ಈ ಮೂಲಕ ಎರಡನೇ ಏರ್ಪೋರ್ಟ್ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

ಹೊಸೂರಿನಲ್ಲಿ ಪ್ರಮುಖ ಹಂತದಲ್ಲಿ ವಾಯುಪ್ರದೇಶ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಡಚಣೆ ಮಿತಿ ಮೇಲ್ಮೈ ಸಮೀಕ್ಷೆ ನಡೆಯಲಿದೆ. ಈ ನಿರ್ಣಾಯಕ ತಾಂತ್ರಿಕ ಸಮೀಕ್ಷೆಯನ್ನು ಕೈಗೊಳ್ಳಲು ಸಲಹೆಗಾರರನ್ನು ನೇಮಿಸುವ ಅಂತಿಮ ಹಂತಕ್ಕೆ ತಮಿಳುನಾಡು ಸರ್ಕಾರ ತಲುಪಿದೆ. ಈ ಪ್ರಸ್ತಾವಿತ ವಿಮಾನ ನಿಲ್ದಾಣವು ಪ್ರಾದೇಶಿಕ ವಾಯು ಸಂಪರ್ಕವನ್ನು ಹೆಚ್ಚಿಸಲು ಮತ್ತು ಹೊಸೂರು ಪ್ರದೇಶದಲ್ಲಿ ತ್ವರಿತ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ತಮಿಳುನಾಡಿನ ಕಾರ್ಯತಂತ್ರದ ಪ್ರಮುಖ ಭಾಗ ಎನ್ನಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಇತ್ತೀಚೆಗೆ ನಡೆಸಿದ ಸಮೀಕ್ಷೆಯ ನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆಯಲ್ಲಿ ಎರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ಒಂದು ಬೆಳಗೊಂಡಪಳ್ಳಿಯಲ್ಲಿರುವ ತನೇಜಾ ಏವಿಯೇಷನ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪದಲ್ಲಿ ಹಾಗೂ ಇನ್ನೊಂದು ಚೆನ್ನೈ-ಬೆಂಗಳೂರು ಹೆದ್ದಾರಿಯ ಉದ್ದಕ್ಕೂ ಇರುವ ಸ್ಥಳ ಗುರುತಿಸಲಾಗಿದೆ. ಇವೆರಡೂ ರಕ್ಷಣಾ ನಿಯಂತ್ರಿತ ವಾಯುಪ್ರದೇಶದ ವ್ಯಾಪ್ತಿಯಲ್ಲಿವೆ.

ಮುಂದಿನ ಹಂತದಲ್ಲಿ ಶಾರ್ಟ್ಲಿಸ್ಟ್ ಮಾಡಲಾದ ಸ್ಥಳಗಳಲ್ಲಿ ವಾಯುಪ್ರದೇಶವನ್ನು ನಿರ್ಣಯಿಸಲು ಒಎಲ್ಎಸ್ ಸಮೀಕ್ಷೆ ನಡೆಯಲಿದೆ. ಈ ಪ್ರದೇಶವು ರಕ್ಷಣಾ ಸಚಿವಾಲಯದ ಅಡಿಯಲ್ಲಿರುವುದರಿಂದ ಈ ಪ್ರಕ್ರಿಯೆಯು ಅತ್ಯಗತ್ಯ ಎಂದು ಹೇಳಲಾಗುತ್ತಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವ ಎರಡೂ ತಾಣಗಳು ಸೂಕ್ಷ್ಮ ವಾಯುಪ್ರದೇಶದ ಬಳಿ ಇವೆ. ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಹೊಸೂರಿನಲ್ಲಿ ವಾಯುಪ್ರದೇಶದ ನಿರ್ಬಂಧಗಳನ್ನು ಸಡಿಲಿಸುವಂತೆ ತಮಿಳುನಾಡು ಸರ್ಕಾರ ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಪತ್ರದ ಮೂಲಕ ಮನವಿಯೂ ಮಾಡಿದೆ. ಈಗ ಮುಂದಿನ ಹಂತಕ್ಕಾಗಿ ಅನುಮೋದನೆ ಪಡೆಯಲು ಮತ್ತಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ.
ಮೊದಲಿಗೆ ಐದು ಸಂಭಾವ್ಯ ಸ್ಥಳಗಳನ್ನು ಸೂಚಿಸಿ ಎಎಐ ವರದಿ ನೀಡಿತ್ತು. ಬಳಿಕ ಅಂತಿಮವಾಗಿ ಎರಡು ಜಾಗಗಳನ್ನು ಶಾರ್ಟ್ಲಿಸ್ಟ್ ಮಾಡಿ, ಅದರ ಸಾಧಕ-ಬಾಧಕಗಳನ್ನು ಪಟ್ಟಿ ಮಾಡಿದೆ. ತಮಿಳುನಾಡು ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಖಾಸಗಿ ಸೌಲಭ್ಯವನ್ನು ವಾಣಿಜ್ಯ ವಿಮಾನ ನಿಲ್ದಾಣವಾಗಿ ಪರಿವರ್ತಿಸಲು ಟಿಎಎಎಲ್ನೊಂದಿಗೆ ಜಂಟಿ ಉದ್ಯಮವನ್ನು ಯೋಜಿಸುತ್ತಿದೆ. ಶಾರ್ಟ್ಲಿಸ್ಟ್ ಮಾಡಿದ ಸ್ಥಳಗಳಲ್ಲಿ ಒಂದು ಈ ಟಿಎಎಎಲ್ ಆವರಣದ ಪಕ್ಕದಲ್ಲೇ ಇದೆ. ಇದಕ್ಕೆ ರಕ್ಷಣಾ ಸಚಿವಾಲಯದ ಒಪ್ಪಿಗೆ ಭಾರಿ ಮಹತ್ವ ಪಡೆದುಕೊಂಡಿದೆ.












Click it and Unblock the Notifications