ಬೆಂಗಳೂರು 'ರಸ್ತೆಗುಂಡಿ'ಗಳ ವಿರುದ್ದ ತಡರಾತ್ರಿ ಭಾರೀ ಕಾರ್ಯಾಚರಣೆ!
ಗದ್ದೆಯನ್ನೂ ಮೀರಿಸುವ ರಸ್ತೆಯಂತಾಗಿ, ನಾಲ್ಕು ಜನರ ಜೀವಬಲಿ ಪಡೆದ ಬೆಂಗಳೂರು ರಸ್ತೆಗಳ 'ಗುಂಡಿಗಳನ್ನು' ಮುಚ್ಚುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದ್ದು, ಕೆಳೆದ ಎರಡು ದಿನಗಳಿಂದ ತಡರಾತ್ರಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆಸುತ್ತಿದೆ.
ಬೆಂಗಳೂರು, ಅ 21: ಗದ್ದೆಯನ್ನೂ ಮೀರಿಸುವ ರಸ್ತೆಯಂತಾಗಿ, ನಾಲ್ಕು ಜನರ ಜೀವಬಲಿ ಪಡೆದ ಬೆಂಗಳೂರು ರಸ್ತೆಗಳ 'ಗುಂಡಿಗಳನ್ನು' ಮುಚ್ಚುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದ್ದು, ಕೆಳೆದ ಎರಡು ದಿನಗಳಿಂದ ತಡರಾತ್ರಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆಸುತ್ತಿದೆ.
ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಖುದ್ದು ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದು, ಮಂಗಳವಾರದೊಳಗೆ (ಅ 24) ನಗರದ ಎಲ್ಲಾ ಗುಂಡಿಗಳನ್ನು ಮುಚ್ಚುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. (ರಸ್ತೆಗುಂಡಿ ಮುಚ್ಚುವ ಕೆಲಸ, ಜಾರ್ಜ್ ನಗರ ಪ್ರದಕ್ಷಿಣೆ)

ನಗರದಲ್ಲಿ ಒಟ್ಟು 24,661 ಗುಂಡಿಗಳಿದ್ದು, ಅದರಲ್ಲಿ 12,592 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಮುಖ್ಯಮಂತ್ರಿಗಳ ಆದೇಶ ಮತ್ತು ಗಡುವು ನೀಡಿರುವ ಹಿನ್ನಲೆಯಲ್ಲಿ ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಬರದಿರುವ ಹಿನ್ನಲೆಯಲ್ಲಿ, ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಸಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ ಎನ್ನುವ ದೂರು ಬಂದಿರುವ ಹಿನ್ನಲೆಯಲ್ಲಿ, ನಾವೇ ಖುದ್ದಾಗಿ ನಿಂತು ಕಾಮಗಾರಿ ಪರಿಶೀಲಿಸುತ್ತಿದ್ದೇವೆಂದು ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಮಧ್ಯರಾತ್ರಿ ಒಂದು ಗಂಟೆಯಿಂದ ಬೆಳಗ್ಗಿನ ಜಾವ ಆರು ಗಂಟೆಯವರೆಗೆ ಕಾಮಗಾರಿ ಚಾಲನೆಯಲ್ಲಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ತಡರಾತ್ರಿ ಕಾಮಗಾರಿ ನಡೆಯುತ್ತಿದೆ. ಮಂಗಳವಾರದೊಳಗೆ ಎಲ್ಲಾ ಗುಂಡಿಗಳಿಗೆ ಇತಿಶ್ರೀ ಹಾಡಲಿದ್ದೇವೆ ಎಂದು ಮೇಯರ್ ಸಂಪತ್ ರಾಜ್, ಕಾಮಗಾರಿಯ ಬಗ್ಗೆ ವಿವರಿಸಿದ್ದಾರೆ.
ಸೋಮವಾರದ ನಂತರ ಬೆಂಗಳೂರಿನ ಯಾವುದೇ ಪ್ರದೇಶಗಳ ರಸ್ತೆಗಳಲ್ಲಿ ಗುಂಡಿಯನ್ನು ನಾನು ನೋಡಬಾರದು, ಕಾಮಗಾರಿಗೆ ವೇಗ ನೀಡಿ ಕೆಲಸ ಬೇಗ ಮುಗಿಸಿ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.












Click it and Unblock the Notifications