ಸ್ವುಸುಗತ - ಆಹಾ ಕನ್ನಡತಾಯೇ ನೀನು ಧನ್ಯಳು!
ಬೆಂಗಳೂರು, ನ. 14: ಬೆಂಗಳೂರಿನ ಜಯನಗರದಲ್ಲಿ ಶುಕ್ರವಾರ ಕಲ್ಯಾಣ್ ಜ್ಯುವೆಲರ್ಸ್ ನೂತನ ಮಳಿಗೆ ಉದ್ಘಾಟನೆ ಸಂಭ್ರಮದಲ್ಲಿ ನಿರೂಪಕ ಜೋಡಿ ಆಭರಣ ಮಳಿಗೆಯ ಸಾಧನೆಗಳ ಪಟ್ಟಿ ಮಾಡುತ್ತಿದ್ದರೆ, ಅತ್ತ ತಾಯಿ ಭುವನೇಶ್ವರಿ, ವರನಟ ಡಾ. ರಾಜ್ ಕುಮಾರ್ ಇಟ್ಟ ಕಣ್ಣಿರು ಯಾರಿಗೂ ಕಾಣಿಸಲಿಲ್ಲ!
ಕಾರ್ಯಕ್ರಮಕ್ಕೆ ಆಗಮಿಸುವವರಿಗೆ 'ಸ್ವುಸುಗತ'! ಎಂಬ ಬರಹ ಸ್ವಾಗತ ಫಲಕದಲ್ಲಿ ಕಂಡುಬಂತು. ಇಡೀ ಫಲಕದಲ್ಲಿ ಇದ್ದಿದ್ದು ಒಂದೇ ಕನ್ನಡ ಶಬ್ದ, ಅದೂ ತಪ್ಪಾಗಿ. ಕನ್ನಡ ನಾಡಿನ ಧ್ವಜದ ಬಣ್ಣದಲ್ಲಿ ಮೂಡಿಬಂದಿದ್ದ ಫಲಕದಲ್ಲಿ ವರನಟ ಡಾ.ರಾಜ್ ಕುಮಾರ್ ಚಿತ್ರವಿತ್ತು.[ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳುವುದೇನು?]
ಗುರುವಾರ ಡಾ. ರಾಜ್ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದನ್ನು ಖಂಡಿಸಿ ಹೋರಾಟ ನಡೆಸಿದ್ದ ಕನ್ನಡ ಹೋರಾಟಗಾರರು ಇಲ್ಲಿ ಮಾಯವಾಗಿದ್ದರು. ಡಾ. ರಾಜ್ ಕುಮಾರ್, ಶಿವಾಜಿ ಗಣೇಶನ್ ಮತ್ತು ತಮಿಳು ನಟ ಶಿವಾಜಿ ಪ್ರಭು ಭಾವಚಿತ್ರಗಳನ್ನೊಳಗೊಂಡ ಫಲಕದಲ್ಲಿ ಕನ್ನಡ ಬರೆದ ಪುಣ್ಯಾತ್ಮ ಎಲ್ಲಿದ್ದಾನೋ?
ಅಷ್ಟಕ್ಕೂ ಇದು ತಮಿಳು ಮತ್ತು ಕನ್ನಡದ ನಡುವಿನ ಸಂಬಂಧ ಎಂದೇ ಇಟ್ಟುಕೊಳ್ಳಿ. ಯಾರೋ ಮೂಲತಃ ಕನ್ನಡಿಗರಲ್ಲದವರು ಬರೆದಿರಬಹುದು ಎಂದು ಅಂದುಕೊಳ್ಳಬಹುದು. ಆದರೆ ಫಲಕ ತಂದು ನೆಟ್ಟ ನಂತರವಾದರೂ ಗೊತ್ತಾಗಲಿಲ್ಲವೇ? ಬಿಟ್ಟಿ ಪ್ರಚಾರಕ್ಕೆ ಇಂಥ ಫಲಕ ಹಾಕುವ ಬದಲು ಮುಚ್ಚಿಡುವುದೇ ಎಷ್ಟೋ ಒಳಿತಾಗುತ್ತಿತ್ತು. ಸೌತ್ ಎಂಡ್ ವೃತ್ತದಿಂದ ಎಲಿಫೆಂಟ್ ರಾಕ್ ರಸ್ತೆಯೂದ್ದಕೂ ನೆಟ್ಟಿದ್ದ ಎಲ್ಲ ಫಲಕಗಳು ಸ್ವುಸುಗತ ಕೋರುತ್ತಲೇ ಇದ್ದವು. [ಡಾ. ರಾಜ್ 'ಸಿಪಾಯಿ ರಾಮು' ಪ್ರತಿಮೆಗೆ ಅಪಮಾನ]
ಅಲ್ಲದೇ ಕಾರ್ಯಕ್ರಮ ಮುಗಿದು ಎರಡು ಗಂಟೆ ಕಳೆದಿದ್ದರೂ ಫಲಕ ತೆರವು ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಇನ್ನು ಬಿಬಿಎಂಪಿ ಪೌರ ಕಾರ್ಮಿಕರೇ ಇದಕ್ಕೆ ಕೈ ಹಾಕಬೇಕೆನೋ...
ಉದ್ಘಾಟನೆಗೆ ಆಗಮಿಸಿದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ತಮಿಳು ನಟ ಶಿವಾಜಿ ಪ್ರಭು ಅವರಿಗೆ 'ನಿಮಗೆ ಸ್ವಾಗತ ಕೋರುವ ಚಿತ್ರ ಹಾಕಿದ್ದಾರೆ' ಎಂದು ಹೇಳಿದ್ದನ್ನು ಮಾಧ್ಯಮದವರು ಗಮನಿಸಿದ್ದಾರೆ. ಆದರೆ ಶಿವಣ್ಣ ಕನ್ನಡಕ್ಕೆ ಆದ ಅಪಮಾನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಆಭರಣ ಮಳಿಗೆ ಉದ್ಘಾಟನೆ ವೇಳೆ ಕನ್ನಡದ ಮಾನಹರಣ ವಾಗಿದ್ದನ್ನು ಸುಮ್ಮನೆ ಒಪ್ಪಿಕೊಳ್ಳುವುದೊಂದೆ ನಮ್ಮ ಮುಂದಿರುವ ಕರ್ಮ.
ಇಂಥ ಚಿತ್ರಗಳು, ಫಲಕಗಳು ಬೆಂಗಳೂರಿನಲ್ಲಿ ಕಂಡುಬಂದರೆ ನಮಗೆ ಕಳುಹಿಸಿ.