Bengaluru Rain Alert: ಬೆಂಗಳೂರಿನಲ್ಲಿ ಮುಂದಿನ 4 ದಿನ ಧೂಳಿನ ಗಾಳಿಯೊಂದಿಗೆ ಮಳೆ- ಎಲ್ಲಿ? ಯಾವಾಗ?
ಬೆಂಗಳೂರು ಮೇ 11: ಬೆಂಗಳೂರಿನಲ್ಲಿ ಮಳೆ ಮುಂದುವರೆದಿದೆ. ಹಗಲಿನಲ್ಲಿ ಬಿಸಿಲು ಇದ್ದರೆ ಸಂಜೆ ವೇಳೆ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದಲ್ಲದೆ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಧೂಳಿನ ಗಾಳಿಯೊಂದಿಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಹೀಗಾಗಿ ಸಂಜೆ ವಿನಾಕಾರಣ ಮನೆಯಿಂದ ಹೊರಬರುವುದನ್ನು ತಪ್ಪಿಸಬೇಕು. ಜೊತೆಗೆ ಕಚೇರಿಯಿಂದ ಮನೆಗೆ ತೆರಳುವವರು ಜಾಗರೂಕತೆಯಿಂದಿರಬೇಕು ಎಂದು ಐಎಂಡಿ ಮನವಿ ಮಾಡಿದೆ.
ಹೌದು.. ಬೆಂಗಳೂರಿನಲ್ಲಿ ಮುಂದಿನ ಕೆಲ ದಿನಗಳವರೆಗೆ ವರುಣ ಅರ್ಭಟವಿರಲಿದೆ. ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೇಸಿಗೆ ಝಳದಿಂದ ಪರಿಹಾರವನ್ನು ನೀಡಿದೆ.

ಅಲ್ಲದೆ ಭಾರೀ ಸುಡುವ ಶಾಖದ ನಡುವೆ ಗಂಟೆಗೆ 50-70 ಕಿಲೋ ಮೀಟರ್ ವೇಗದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಬೀಸಲಿದೆ. ಇದರಿಂದ ನಗರದಲ್ಲಿ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೇ 9 ರಂದು 7
ಸೆಂಟಿ ಮೀಟರ್ ಮಳೆಯಾಗಿದೆ. ಅಲ್ಲದೆ, ಇಂದೂ ಕೂಡ ನಗರದಲ್ಲಿ ಮಳೆಯಾಗುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆ
ವಾರಾಂತ್ಯವೂ ವಾತಾವರಣ ಹೀಗೆ ಇರಲಿದ್ದು ಭಾನುವಾರ ಮಳೆರಾಯ ತಂಪೆರೆಯಲಿದ್ದಾನೆ. ಮೇ 12ರವರೆಗೆ ಮಳೆ ಮೋಡ ಇರಲಿದೆ. ಈ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೈರು, ಮಂಡ್ಯ, ಹಾಸನ, ಕೋಲಾರ, ಚಾಮರಾಜನಗರ ಸ್ಥಳಗಳಲ್ಲಿ ಅಧಿಕ ಮಳೆಯಾಗುವ ಸೂಚನೆ ಇದೆ.
ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ.

ಶುಕ್ರವಾರ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತ
ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಮಳೆಯಿಂದಾಗಿ ನಾಗರಭಾವಿ ಎನ್ಜಿಎಫ್ ಬಡಾವಣೆಯಲ್ಲಿ ಬಡ ಜೀವನಗಳು ಪ್ರಾಣಾಪಾಯದಿಂದ ಪಾರಾಗಿವೆ. ಈ ಪ್ರದೇಶದಲ್ಲಿ ಲೈಟ್ ಕಂಬ ಬೃಹತ್ ಮರವೊಂದು ಶೆಡ್ ಮನೆಯ ಮುಂದೆ ಬಿದ್ದಿದೆ. ಅಕಸ್ಮಾತ್ ಶೆಡ್ ಮೇಲೆ ಬಿದ್ದಿದ್ರೆ ಅಲ್ಲಿ ವಾಸವಾಗಿದ್ದ ಶಿವು ಕುಟುಂಬ ಮಣ್ಣುಪಾಲಾಗುವ ಸಾಧ್ಯತೆ ಇತ್ತು. ಶಿವ ಕೂಲಿ ಕೆಲಸ ಮಾಡುತ್ತಿದ್ದು ಕುಟುಂಬದೊಂದಿಗೆ ರಾಯಚೂರಿನಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ.
ಅಲ್ಲದೆ ಚಾಮರಾಜಪೇಟೆಯಲ್ಲೂ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್ಮೆಂಟ್ ನಿಂದ ಹರಿಯುವ ನೀರು, ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಕುಟುಂಬಸ್ಥರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?
ಹೆಮ್ಮಿಗೆಪುರದಲ್ಲಿ 61, ಆರ್ ಆರ್ ನಗರದಲ್ಲಿ 60 ಮಿಮಿ, ಮಾರುತಿ ಮಂದಿರದಲ್ಲಿ 51, ಕೆಂಗೇರಿಯಲ್ಲಿ 89ಮಿಮಿ, ಪೀಣ್ಯಾ 62ಮಿಮಿ, ನಾಯಂಡನಹಳ್ಳಿ 61 ಮಿಮಿ, ವಿದ್ಯಾಪೀಠ 50 ಮಿಮಿ, ಉತ್ತರಹಳ್ಳಿ 42ಮಿಮಿ, ಹಂಪಿನಗರ 39 ಮಿಮಿ, ಯಲಹಂಕ 38 ಮಿಮಿ, ಜಕ್ಕೂರು 38, ಕೊಟ್ಟಿಗೆಪಾಳ್ಯ 33, ಕೊಡಿಗೆಹಳ್ಳಿ 28, ನಂದಿನಿ ಲೇಲೌಟ್ 28 ಮಿಮಿ ಮಳೆಯಾಗಿದೆ.
ಧರೆಗೆ ಉರುಳಿದ ಮರಗಳು
ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಮರಗಳು ನೆಲಕ್ಕುರುಳಿದ್ರೆ, 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದೆ. ನಗರದ ನಾಗರಬಾಯಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿದೆ. ಇದರಿಂದಾಗಿ ಪಾರ್ಕ್ ಮಾಡಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ.












Click it and Unblock the Notifications