ಮ್ಯಾಟ್ರಿಮೊನಿ ಮೂಲಕ ಪರಿಚಯವಾಗಿ ಟೆಕ್ಕಿಯಿಂದ 18 ಲಕ್ಷ ರೂ ದೋಚಿದಳು
ಬೆಂಗಳೂರು, ಮಾರ್ಚ್ 18: ಯಾವ್ಯಾವ ವಿಧದಿಂದ ಜನರನ್ನು ಮೋಸ ಮಾಡಬಹುದು ಎಂದು ಕಾಯುತ್ತಲೇ ಇರುತ್ತಾರೆ. ಅಂಥವರಿಗೆ ಕೆಲವು ಮುಗ್ದ ಮನಸ್ಸುಗಳು ಆಹಾರವಾಗಿಬಿಡುತ್ತವೆ.
ಮ್ಯಾಟ್ರಿಮೊನಿ ಮೂಲಕ ಪರಿಚಯವಾದ ಯುವತಿ ತನ್ನನ್ನೇ ಮದುವೆಯಾಗುತ್ತಾಳೆಂದು ನಂಬಿ ಅವಳಿಗೆ ಕಷ್ಟ ಎಂದು 18 ಲಕ್ಷ ರೂ ನೀಡಿ ಮೋಸ ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ಜ್ಯೋತಿ ಕೃಷ್ಣನ್ (35) ಹೀಗೆ ವಂಚನೆಗೀಡಾದ ಯುವಕ. ಇವರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದು ಮಾರ್ಚ್ 2013 ರಂದು ಮ್ಯಾಟ್ರಿಮೊನಿಯಲ್ ವೆಬ್ ತಾಣದಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದು ರಮ್ಯಾ ನಾಯರ್ ಎಂಬಾಕೆಯ ಪರಿಚಯ ಮಾಡಿಕೊಂಡಿದ್ದರು.

ಕೃಷ್ಣನ್ ತಾವು ರಮ್ಯಾ ಪ್ರೊಫೈಲ್ ನಲ್ಲಿರುವ ಸಂಖ್ಯೆಗೆ ಕರೆ ಮಾಡಿದಾಗ ಆಕೆಯ ತಂದೆ ಕುಂಜೀರಾಮನ್ ಸಂಪರ್ಕಕ್ಕೆ ಬಂದಿದ್ದರು.ಆಗ ಕೃಷ್ಣನ್ ತಾವು ಅವರ ಮಗಳ ಪ್ರೊಫೈಲ್ ಇಷ್ಟಪಟ್ಟಿದ್ದಾಗಿ ಹೇಳಿದಾಗ ಕುಂಜೀರಾಮನ್ ಸಹ ತಮ್ಮ ಮಗಳಿಗೆ ನಿಮ್ಮನ್ನು ವಿವಾಹವಾಗಲು ಅಡ್ಡಿ ಇಲ್ಲ ಎಂದಿದ್ದಾರೆ.
ಆದರೆ ಆಕೆ ಯುಪಿಎಸ್ಸಿ ಪರೀಕ್ಷೆ ಕಟ್ಟಿದ್ದು ಅವಳಿಗೆ ಐಎಎಸ್ ಅಧಿಕಾರಿಯಾಗಬೇಕೆನ್ನುವ ಮಹತ್ವಾಕಾಂಕ್ಷೆ ಇದೆ. ಇದೀಗ ಆಕೆ ಪರೀಕ್ಷೆ ತಯಾರಿಯಲ್ಲಿರುವ ಕಾರಣ ಎರಡು ವರ್ಷಗಳ ಬಳಿಕ ವಿವಾಹ ನೆರವೇರಿಸಲು ತೀರ್ಮಾನಿಸಿದೇವೆ ಎಂದಿದ್ದಾರೆ. ಅದರಂತೆ ಕೃಷ್ಣನ್ ತನ್ನ ಬಾಳಸಂಗಾತಿಯನ್ನು ವಿವಾಹವಾಗಲು ಎರಡು ವರ್ಷ ಕಾಯಲು ಸಹ ಒಪ್ಪಿಕೊಂಡಿದ್ದಾರೆ.
ಬಳಿಕ ಮನೆಯಲ್ಲಿ ಕಷ್ಟ ಎಂದು ನಂಬಿಸಿ ಆಗಾಗ ಎರಡು ಮೂರು ಲಕ್ಷವನ್ನು ಅಕೌಂಟ್ಗೆ ಹಾಕಿಕೊಂಡು ಒಟ್ಟು 18 ಲಕ್ಷ ರೂ ದೋಚಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸಿ ಅವರ ಬಳಿ ಕೇಳಿದಾಗ ಡಿಸೆಂಬರ್ನಲ್ಲಿ ಮದುವೆ ಮಾಡಿಕೊಡುವುದಾಗಿ ಹೇಳಿ ನಂಬಿಸಿ ಏಕಾಏಕಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದು, ಯುವತಿ ಮನೆಯವರ ವಿರುದ್ಧ ದೂರು ನೀಡಲಾಗಿದೆ.












Click it and Unblock the Notifications