ಬೆಂಗಳೂರು ನಗರದ ಅನಧಿಕೃತ ಕಟ್ಟಡ ಹಾಗೂ ಮಂಜೂರಾತಿ ನಕ್ಷೆಗೆ ವ್ಯತಿರಿಕ್ತ ಕಟ್ಟಡಗಳ ನೆಲಸಮ: ಜಿಬಿಎ ಎಚ್ಚರಿಕೆ
ಬೆಂಗಳೂರಿನ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆಸ್ತಿದಾರರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ವಿವಿಧ ಪ್ರಮುಖ ಪಾಲಿಕೆಗಳು ಮುಂದಾಗಿವೆ. ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲೂ ಈ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.
ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡಗಳು ಮತ್ತು ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ತಡೆಯುವ ಸಂಬಂಧ ಕಾರ್ಯವಿಧಾನದ ಅರಿವಿಗಾಗಿ ಪಾಲಿಕೆಯ ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಬುಧವಾರ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಯಿತು. ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅಥವಾ ಅನಧಿಕೃತವಾಗಿ ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಿಸುತ್ತಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರ ಪ್ರತ್ಯಯೋಜನೆ ನೀಡಲಾಗಿರುತ್ತದೆ.

ಅದರಂತೆ ಆದೇಶವನ್ನು ಅನುಷ್ಠಾನಗೊಳಿಸಲು ಅನುವಾಗುವಂತೆ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ / ಉಲ್ಲಂಘಿತ ಕಟ್ಟಡಗಳ ನಿರ್ಮಾಣಗಳ ತಡೆಗೆ ಸಂಬಂಧಪಟ್ಟಂತೆ ವಿವಿಧ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಕಾಯ್ದೆ 2024 ರ ಕಲಂ 85(1) & 87 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಲಂ 243 (3) (c) (d) (e) ಮತ್ತು (f), 243(2) ಮತ್ತು (4), 244(2) & 311 ಮತ್ತು 312(1)(b) ರಡಿಯಲ್ಲಿ ಕಾರ್ಯವನ್ನು ನಿರ್ವಹಿಸಲು ಹಾಗೂ ವಿವಿಧ ರೀತಿಯ ಉಲ್ಲಂಘನೆಗಳನ್ನು ತಡೆಯುವಲ್ಲಿ ಮತ್ತು ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿವಿಧ ಅಧಿಕಾರಿಗಳಿಗೆ ಅನಧಿಕೃತ/ ಉಲ್ಲಂಘನೆ ತಡೆಯಲು ನಿರ್ವಹಿಸಬೇಕಾದ ಕಾರ್ಯ ವಿಧಾನವನ್ನು ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ಪ್ರಕಾರ ಅಧಿಕಾರ ಪ್ರತ್ಯಾಯೋಜನೆ ನೀಡಿರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. 243(2) ರಡಿಯಲ್ಲಿ ಅನಧಿಕೃತ /ಉಲ್ಲಂಘನೆ ಗಳನ್ನು ನಗರ ಯೋಜನೆ ಹಾಗೂ ಕಾಮಗಾರಿ ವಿಭಾಗದ ಅಭಿಯಂತರರು ಪರಿಶೀಲಿಸಲು ತಿಳಿಸಲಾಗಿದೆ. 243(3)(c)(d)(e)&(f) ರಡಿಯಲ್ಲಿ ಅನಧಿಕೃತ/ಉಲ್ಲಂಘನೆಗಳಿಗೆ ಸಂಬಂಧಪಟ್ಟ ವಲಯದ ಜಂಟಿ ಆಯುಕ್ತರು ನೋಟಿಸ್ ಜಾರಿ ಮಾಡುವುದು.
243(4)(a) ಅಡಿಯಲ್ಲಿ ಅನಧಿಕೃತ ಅಥವಾ ಉಲ್ಲಂಘನೆಗಳನ್ನು ನಗರ ಯೋಜನೆ, ಕಾಮಗಾರಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ನಿರ್ವಹಿಸುವುದು. 244(2) ರನ್ವಯ ಅನಧಿಕೃತ ಅಥವಾ ಉಲ್ಲಂಘನೆಗಳನ್ನು ತೆರವುಗೊಳಿಸಲು ನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಅನುಷ್ಠಾನ ಕಾರ್ಯಪಡೆ ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ.
ಮುಂದುವರಿದು 311, 312(1)(b) ಅಡಿಯಲ್ಲಿ ಅನಧಿಕೃತ ಅಥವಾ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಜಂಟಿ ಆಯುಕ್ತರು, ನಗರ ಯೋಜನೆ ಹಾಗೂ ಕಾಮಗಾರಿ ವಿಭಾಗದ ಅಭಿಯಂತರರು ನಿರ್ವಹಿಸುವುದು. ನೀಡಿರುವ ಅಧಿಕಾರ ಪ್ರತ್ಯಾಯೋಜನೆಯಂತೆ ಕ್ರಮವಹಿಸಲು ಹಾಗೂ ನ್ಯಾಯಾಲಯ, ಲೋಕಾಯುಕ್ತ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಆಯುಕ್ತರು ಸೂಚನೆ ಕೊಟ್ಟಿದ್ದಾರೆ.
ಈ ವೇಳೆ ಮುಖ್ಯ ಎಂಜಿನಿಯರರಾದ ಕೆ. ವಿ.ರವಿ, ನಗರ ಯೋಜನೆ ಅಪರ ನಿರ್ದೇಶಕರಾದ ಗಿರೀಶ್, ಜಂಟಿ ಆಯುಕ್ತರಾದ ಮಧು, ಶ್ರೀ ಸತೀಶ್ ಬಾಬು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications