Bengaluru: ವಾರ್ಷಿಕ 4000 ಟನ್ ತ್ಯಾಜ್ಯ ಉತ್ಪಾದನೆ, ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸದಂತೆ ಬಿಬಿಎಂಪಿ ಮನವಿ
ಬೆಂಗಳೂರು, ಜೂನ್ 23: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ದಿನೇ ದಿನೆ ಅಭಿವೃದ್ಧಿಯಲ್ಲಿ ಮತ್ತು ಜನಸಂಖ್ಯೆಯಲ್ಲಿ ಮತ್ತಷ್ಟು ವಿಶಾಲವಾಗುತ್ತಿದೆ. ಇದರ ಬೆನ್ನಲ್ಲೇ ವರ್ಷದಿಂದ ವರ್ಷಕ್ಕೆ ತ್ಯಾಜ್ಯ ಉತ್ಪಾದನೆಯಲ್ಲೂ ಸಹ ಏರಿಕೆ ಆಗುತ್ತಿದೆ. ಅಪಾರ ಪ್ರಮಾಣದ ತ್ಯಾಜ್ಯ ಉತ್ಪಾದನೆಯಲ್ಲಿ ಬಹುತೇಕ ಪ್ರಯಾಣ ಪ್ಲಾಸ್ಟಿಕ್ ಇರುವುದು ಕಸ ನಿರ್ವಹಣೆಯ ಜವಾಬ್ದಾರಿ ಹೊತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಳವಳಕ್ಕೆ ಕಾರಣವಾಗಿದೆ.
ಬೆಂಗಳೂರು ಜನರು ಸಾಧ್ಯವಾದಷ್ಟು ನಿಮ್ಮ ದೈನಂದಿನ ಜಿವನದಲ್ಲಿ 'ಏಕ ಬಳಕೆ'ಯ ಪ್ಲಾಸ್ಟಿಕ್ಗಳನ್ನು ಬಳಸುವುದನ್ನು ಕೈ ಬಿಡಬೇಕು ಎಂದು ಪಾಲಿಕೆಯ ದಕ್ಷಿಣ ವಲಯ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ಮನವಿ ಮಾಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 'ಏಕ ಬಳಕೆ ಪ್ಲಾಸ್ಟಿಕ್ ಬಳಕೆ'ಯನ್ನು ನಿಲ್ಲಿಸುವ ಸಲುವಾಗಿ BMS ತಾಂತ್ರಿಕ ಮಹಾವಿದ್ಯಾಲಯ ಹಾಗೂ SWMRT ಅವರ ಸಹಯೋಗದೊಂದಿಗೆ "ತ್ಯಾಜ್ಯ ರಹಿತ ಸಮಾರಂಭಗಳ" ಕುರಿತು ಜಾಗೃತಿ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾರ್ಷಿಕ 4000 ಟನ್ ನಷ್ಟು ತ್ಯಾಜ್ಯ ಶೇಖರಣೆ
ಬೆಂಗಳೂರಿನಲ್ಲಿ ಕಳೆದ ವರ್ಷದಿಂದ ಬೆಂಗಳೂರು ನಗರದಲ್ಲಿ ಸುಮಾರು 4000 ಟನ್ ನಷ್ಟು ತ್ಯಾಜ್ಯ ಶೇಖರಣೆ ಆಗುತ್ತಿದೆ. ಅದರಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಆಗಿವೆ ಎಂಬುದು ವಿಷಾಧನಿಯ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಯು ಮಾಲಿನ್ಯ ಉಂಟಾಗಲಿದ್ದು, ನಾಗರಿಕರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಮೊದಲು ವಾರ್ಷಿಕ ಸುಮಾರು 2.75 ಸಾವಿರ ಟನ್ನಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಕಂಡು ಬರುತ್ತಿತ್ತು.
ಆದ್ದರಿಂದ ನಗರದಲ್ಲಿ ದಿನನಿತ್ಯ ನಡೆಯುವ ವಿವಿಧ ಸಮಾರಂಭಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ವಲಯ ವ್ಯಾಪ್ತಿಯ ಕಲ್ಯಾಣಮಂಟಪ/ ಪಾರ್ಟಿಹಾಲ್ / ಕ್ಯಾಟರಿಂಗ್ ಉದ್ದಿಮೆಗಳ ಮಾಲೀಕರಿಗೆ ವಲಯ ಆಯುಕ್ತರು ಸೂಚಿಸಿದರು.

ಏಕಬಳಕೆ ಪ್ಲಾಸ್ಟಿಕ್ಗಳನ್ನು, ಕಲ್ಯಾಣ ಮಂಟಪ ಹಾಗೂ ಕ್ಯಾಟರಿಂಗ್ ಗಳಲ್ಲಿ ಉಪಯೋಗಿಸುವುದನ್ನುಸಂಪೂರ್ಣವಾಗಿ ನಿಷೇಧಿಸಿ. ಅದರ ಬದಲಾಗಿ ಅಡಿಕೆ ಪಟ್ಟೆ, ಬಾಳೆ ಎಲೆ ಹಾಗೂ ಮರು ಬಳಸಬಹುದಾದಂತಹ ಉಕ್ಕಿನ ವಸ್ತುಗಳನ್ನು ಉಪಯೋಗಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮನವರಿಕೆ ಮಾಡಿದರು. ಪ್ಲಾಸ್ಟಿಕ್ ಅಲ್ಲ ವಸ್ತುಗಳ ಬಳಕೆಯಿಂದ ಆರೋಗ್ಯ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ ಎಂಬುದನ್ನು ಇದೇ ವೇಳೆ ತಿಳಿಸಲಾಯಿತು.
ಸೂಕ್ತ ಕಸ ವಿಲೇವಾರಿಗೆ ಸೂಚನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ /ಬಯೋ ಗ್ಯಾಸ್ ಪ್ಲಾಂಟ್ಸ್/ ಥರ್ಮಕೋಲ್ ರಿಸೈಕ್ಲಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು. ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಬೇರ್ಪಡಿಸಿ, ವಿಲೇವಾರಿಗೆ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಸದರಿ ಜಾಗೃತಿ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷರಾದ ಡಾ.ತೇಜಸ್ವಿನಿ ಅನಂತಕುಮಾರ್, ಸ್ತ್ರೀ ರೋಗ ತಜ್ಞ ಡಾ.ಮೀನಾಕ್ಷಿ ಭರತ್, ಜಂಟಿ ಆಯುಕ್ತರು(ದಕ್ಷಿಣ) ಡಾ. ಕೆ.ಜಗದೀಶ್ ನಾಯಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications