ಅಂತಿಮ ಕ್ಷಣಗಳನ್ನು ಎದುರಿಸುತ್ತಿರುವ ತೆರೆದ ಗುಂಡಿಗಳು!
ಬೆಂಗಳೂರು, ಸೆಪ್ಟೆಂಬರ್ 15 : ಮಳೆಯ ರೌದ್ರಾವತಾರದ ನಂತರ ಮೈಸೂರು ರಸ್ತೆಯಲ್ಲಿ ವಾಹನದಲ್ಲಿ ಇತ್ತೀಚಿನ ದಿನಗಳಲ್ಲಿ ಅಡ್ಡಾಡದಿದ್ದರೆ ಒಂದು ಬಾರಿ ಹೋಗಿಬನ್ನಿ. ಹೋಗಿ ಬರುವ ಮುನ್ನ ವಾಹನವನ್ನು ಸರ್ವೀಸಿಂಗ್ ಮಾಡಿಸಲು ಮರೆಯದಿರಿ. ಎಲ್ಲಕ್ಕಿಂತ ಹೆಚ್ಚಾಗಿ ಗರ್ಭಿಣಿ ಹೆಂಗಸರನ್ನು ಅಪ್ಪಿತಪ್ಪಿ ಅಲ್ಲಿ ಕರೆದುಕೊಂಡು ಹೋಗಬೇಡಿ.
ಜಾಸ್ತಿ ದೂರ ಹೋಗುವುದೂ ಬೇಡ. ಸೆಟಲೈಟ್ ಬಸ್ ನಿಲ್ದಾಣದಿಂದ ಕೆಂಗೇರಿ ಬಸ್ ನಿಲ್ದಾಣದವರೆಗೆ ಮಾತ್ರ. ಹೋಗುವಾಗ ಹಾಗೆಯೇ ಹೋಗಬೇಡಿ, ನಿಮ್ಮ ವಾಹನ ನಿಮ್ಮನ್ನು ಎಷ್ಟು ಬಾರಿ ಎತ್ತಿ ಕುಕ್ಕುತ್ತದೆ, ನಿಮ್ಮ ವಾಹನವೂ ಎಷ್ಟು ಬಾರಿ ನೆಲಕ್ಕೆ ಕುಕ್ಕಿದೆ ಎಂಬುದನ್ನು ಲೆಕ್ಕ ಹಾಕಿ. ಹಾಗೆಯೆ, ತೆರೆದ ಹೊಂಡಗಳ ಲೆಕ್ಕವನ್ನೂ ಇಡಿ.
ಏಕೆಂದರೆ, ಈ ತೆರೆದ ಹೊಂಡಗಳ ಸಾವು ಸನ್ನಿಹಿತವಾಗಿದೆ. ಅವುಗಳ ಆಯಸ್ಸು ಇನ್ನು ಕೇವಲ 10 ದಿನ ಮಾತ್ರ. ಇನ್ನು ಹತ್ತೇ ಹತ್ತು ದಿನಗಳಲ್ಲಿ ಮೈಸೂರು ರಸ್ತೆಯಲ್ಲಿರುವ ಇರುವ ತೆರೆದ ಹೊಂಡಗಳು ಮಾತ್ರವಲ್ಲ ಬೆಂಗಳೂರಿನಲ್ಲಿ ಇರುವ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ಬೆದರಿಕೆ ಹಾಕಿದೆ.
ಆದ್ದರಿಂದ, ವಾಹನದಲ್ಲಿ ಹೋಗುವಾಗ ವಾಹನ ತೆರೆದ ಹೊಂಡಗಳಿದ್ದಲ್ಲೆಲ್ಲ ನಿಮ್ಮನ್ನು ಎತ್ತಿ ಕುಕ್ಕುವಾಗ ಸಿಗುವ ಆ ಆನಂದ ಇನ್ನು ಕೆಲವೇ ದಿನಗಳು ಮಾತ್ರ. ಅಷ್ಟರಲ್ಲಿ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಸತಿ ಹೋಗಿಬನ್ನಿ ಮತ್ತು ಮೂಳೆತಜ್ಞರ ಸಂಖ್ಯೆ ಬೇಕಿದ್ದರೆ ಬಿಬಿಎಂಪಿಯನ್ನೇ ಸಂಪರ್ಕಿಸಿ.

ಸಿದ್ದರಾಮಯ್ಯನವರು ವಾಗ್ದಾನ ನೀಡಿದ್ದರು
ಕೆಲ ದಿನಗಳ ಹಿಂದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇನ್ನು ಹದಿನೈದೇ ದಿನಗಳಲ್ಲಿ ನಗರದಲ್ಲಿರುವ ಎಲ್ಲ ತೆರೆದ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಸಂತೋಷದ ಸಂಗತಿಯನ್ನು ಪ್ರಕಟಿಸಿದ್ದರು. ಅದಾಗಿ ಐದಾರು ದಿನಗಳು ಈಗಾಗಲೆ ಕಳೆದಿವೆ. ಕೆಲವು ಮುಚ್ಚಿದ್ದರೆ, ಹಲವಾರು ಇನ್ನೂ ಬಾಯಿ ತೆರೆದುಕೊಂಡಿವೆ.

ಬರೀ ಬಿಬಿಎಂಪಿಯನ್ನು ದೂಷಿಸಲಾದೀತೆ?
ಇದಕ್ಕೆಲ್ಲ ಬರೀ ಬಿಬಿಎಂಪಿಯನ್ನು ದೂಷಿಸಲಾದೀತೆ? ಎಂದೂ ಕಂಡರಿಯದಂಥ ಮಳೆ ಹಚ್ಚಿ ಹೊಡೆದರೆ, ರಸ್ತೆಗಳೆಲ್ಲ ಕಿತ್ತುಕೊಂಡು ಹೋದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದರೂ ಏನು ಮಾಡಲಾದೀತು? ಹೀಗಾಗಿಯೇ ಈ ಮಳೆಯ ಆಟಾಟೋಪ ನಿಲ್ಲಲಿ ಎಂದು ಬಿಬಿಎಂಪಿ ಕಾಯುತ್ತ ಕುಳಿತಿದೆ.

ಎಷ್ಟು ಗುಂಡಿಗಳಿವೆಯೆಂದು ಲೆಕ್ಕ ಹಾಕಿದೆ ಬಿಬಿಎಂಪಿ
ಬಿಬಿಎಂಪಿ ಈಗಾಗಲೆ ಬೆಂಗಳೂರಿನಲ್ಲಿ ಎಷ್ಟು ತೆರೆದ ಗುಂಡಿಗಳಿವೆ ಎಂದು ಲೆಕ್ಕ ಹಾಕಿದೆ. ಅವರ ಪ್ರಕಾರ, ಬೆಂಗಳೂರಿನಲ್ಲಿ 5,067 ತೆರೆದ ಹೊಂಡಗಳಿವೆಯಂತೆ. ಇವನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಆದ್ ಎನ್ ಮಂಜುನಾಥ್ ಅವರು 10 ದಿನಗಳ ಡೆಡ್ ಲೈನ್ ಇಟ್ಟುಕೊಂಡಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ತೆರೆದ ಹೊಂಡ ತುಂಬುವ ಕಾರ್ಯ ಆರಂಭಿಸಿದ್ದಾರಂತೆ.

ತಾತ್ಕಾಲಿಕವಾಗಿ ಗುಂಡಿ ಮುಚ್ಚಿದ ಶ್ರೇಯಸ್ಸು
ತಾತ್ಕಾಲಿಕವಾಗಿಯಾದರೂ ಈ ತೆರೆದ ಹೊಂಡಗಳನ್ನು ಮುಚ್ಚಿದಂಥ ಶ್ರೇಯಸ್ಸು ಸಿಕ್ಕಿದ್ದು ಕಳೆದ ಶುಕ್ರವಾರ ಸಂಜೆ ಮತ್ತು ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ. ಮೈಸೂರು ರಸ್ತೆಯಲ್ಲಿ ವೃಷಭಾವತಿ ಮತ್ತು ಅಕ್ಕಪಕ್ಕದ ಚರಂಡಿಗಳು ಉಕ್ಕುಕ್ಕಿ ಹರಿದಿದ್ದರಿಂದ ತೆರೆದುಕೊಂಡಿದ್ದ ಗುಂಡಿಗಳೆಲ್ಲ ತಾತ್ಕಾಲಿಕವಾಗಿಯಾದರೂ ಮುಚ್ಚಿಕೊಂಡಿದ್ದವು.

ಕುಂದುಕೊರತೆಗಳಿದ್ದರೆ, ದೂರುದುಮ್ಮಾನಗಳಿದ್ದರೆ
ಬೆಂಗಳೂರಿನ ನಾಗರಿಕರೆ, ನಿಮಗೇನಾದರೂ ಸಹಾಯ ಬೇಕಿದ್ದರೆ, ತೆರೆದ ಗುಂಡಿಗಳ ಬಗ್ಗೆ ಕುಂದುಕೊರತೆಗಳಿದ್ದರೆ, ದೂರುದುಮ್ಮಾನಗಳಿದ್ದರೆ ಈ ವೆಬ್ ತಾಣಕ್ಕೆ ಹೋಗಿ ದೂರು ಸಲ್ಲಿಸಬಹುದು. ಸದ್ಯಕ್ಕೆ ಅವರೆಲ್ಲ ಮುಂದಿನ ಮೇಯರ್ ಯಾರನ್ನು ಆಯ್ಕೆ ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications