ಗಣಪತಿ ಕೂರಿಸಲು ಕಲೆಕ್ಷನ್ಗೆ ಇಳಿದಿದ್ದೀರಾ? ಜೈಲಿಗೆ ಹೋಗ್ತೀರಿ ಹುಷಾರು..!
ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆಗಲೇ ಏರಿಯಾಗಳಲ್ಲಿ ಗಣಪನನ್ನ ಕೂರಿಸೋಕೆ ಚಪ್ಪರ, ಶಾಮಿಯಾನ ಹಾಕೋದು ಶುರುವಾಗಿದೆ. ಬೀದಿ ಬೀದಿಗಳಲ್ಲಿ, ಶೆಡ್ಗಳಲ್ಲಿ ಕಲರ್ ಕಲರ್ ಗಣೇಶನ ಮೂರ್ತಿಗಳು ಮಾರಾಟಕ್ಕೆ ಬಂದಿವೆ. ಇದೆಲ್ಲದಕ್ಕಿಂತ ಮುಖ್ಯ ಅಂದ್ರೆ ʼʼಗಣೇಶ ಕಲೆಕ್ಷನ್ʼʼ. ಕೈಯಲ್ಲಿ ಬಿಲ್ ಬುಕ್ ಹಿಡಿದು ಹಬ್ಬಕ್ಕೆ ಹಣ ಸಂಗ್ರಹಿಸೋ ಕೆಲಸ ಕೂಡ ಶುರುವಾಗಿದೆ.
ಹಬ್ಬಕ್ಕೂ ಒಂದೆರಡು ವಾರಗಳ ಮುಂಚೆಯೇ ಗಣಪತಿ ಕೂರಿಸೋ ಹುಡುಗರು ಗುಂಪು ಗುಂಪಾಗಿ ರಸ್ತೆಗಳಲ್ಲಿ ನಿಂತು ಹಣ ಸಂಗ್ರಹ ಮಾಡೋದು ಅಂದಿನಿಂದಲೂ ನಡೆದುಕೊಂಡು ಬಂದಿರೋ ಅನ್ಅಫೀಶಿಯಲ್ ಪದ್ಧತಿ ಎಂದೇ ಹೇಳಬಹುದು. ಆದರೆ, ಈ ಸಲ ಗಣಪತಿ ಹಬ್ಬಕ್ಕೆ ಚಂದಾ ವಸೂಲಿ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನುವುದು ನೆನಪಿರಲಿ. ಹಬ್ಬದ ಹೆಸರಲ್ಲಿ ಏನಾದರೂ ಸಾರ್ವಜನಿಕರ ಹತ್ತಿರ ಜೋರು ಮಾಡೋಕೆ ಹೋದ್ರೆ, ಸೀದಾ ಜೈಲಿಗೂ ಕಳೆಸೋಕೆ ಪೊಲೀಸರು ರೆಡಿಯಾಗಿದ್ದಾರೆ.

ಹೌದು ಈ ಬಗ್ಗೆ ಖುದ್ದು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರೇ ಎಚ್ಚರಿಕೆ ನೀಡಿದ್ದಾರೆ. ಗೌರಿ-ಗಣೇಶ ಉತ್ಸವಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಗಣೇಶ ಕೂರಿಸ್ತಿದೀವಿ, ದುಡ್ ಕೊಡ್ಲೇಬೇಕು ಎಂದು ನೀವು ಸಾರ್ವಜನಿಕರಿಗೆ ಬಲವಂತ ಮಾಡುವಂತಿಲ್ಲ.
ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಯ ಹೆಸರಲ್ಲಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಖಡಕ್ ಆದೇಶ ಕೂಡ ನೀಡಿದ್ದಾರೆ. ಹಾಗಾಗಿ ಸಾರ್ವಜನಿಕರು ಕೊಟ್ಟರಷ್ಟೇ ದುಡ್ಡು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು, ದುಡ್ ಅಷ್ಟೇ ಕೊಡಿ, ಇಷ್ಟೇ ಕೊಡಿ ಅಂತೆಲ್ಲ ಕೇಳುವಂತಿಲ್ಲ ಎಂದು ವಾರ್ನ್ ಮಾಡಲಾಗಿದೆ.

ಗಣೇಶ ಕೂರಿಸಲು ಸ್ಪೆಷಲ್ ರೂಲ್ಸ್: ಗಣೇಶ ಹಬ್ಬ ಆಯೋಜಿಸುವವರಿಗೆ ಪೊಲೀಸರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದಾರೆ. ಅದೇನಂದ್ರೆ, ವಿವಾದಿತ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಯಾವುದೇ ಅಪರಾಧಗಳು ನಡೆದರೆ, ಅದಕ್ಕೆ ಆಯೋಜಕರೇ ಜವಾಬ್ದಾರಿ ಹೊರಬೇಕು. ಗಣೇಶನನ್ನು ಕೂರಿಸುವ ಸಂಘದವರು ತಮ್ಮ ಸಂಪೂರ್ಣ ವಿವರಗಳನ್ನು ಸ್ಥಳೀಯ ಪೊಲೀಸ್ ಸ್ಟೇಷನ್ಗಳಲ್ಲಿ ದಾಖಲಿಸಬೇಕು.
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಸಂಬಂಧಪಟ್ಟ ಠಾಣೆಯಿಂದ ಪರ್ಮಿಷನ್ ಪಡೆಯಬೇಕು. ಸಾರ್ವಜನಿಕರು ಹಾಗೂ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಗಣೇಶ ಕೂರಿಸುವಂತಿಲ್ಲ. ಚಪ್ಪರ, ಶಾಮಿಯಾನ ಹಾಕಲು ಪರವಾನಗಿ ಪಡೆದುಕೊಳ್ಳಬೇಕು. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಸೌಂಡ್ ಬಾಕ್ಸ್ಗಳ ಬಳಕೆಗೆ ಅನುಮತಿ ಪಡೆಯಬೇಕು. ಯಾವುದೇ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶವಿಲ್ಲ. ಎಲ್ಲೆಂದರಲ್ಲಿ ಪಟಾಕಿಗಳನ್ನು ಸಿಡಿಸಬಾರದು, ಕರ್ಪೂರಗಳನ್ನು ಹಚ್ಚಬಾರದು. ಗಣೇಶ ವಿಸರ್ಜನೆಯ ಮೆರವಣಿಗೆಯು ರಾತ್ರಿ 10ರೊಳಗೆ ಮುಗಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications