ಹೊಸ ಪೊಲೀಸ್ ಆಯುಕ್ತ, ಸೈಬರ್ ಸ್ಪೆಷಲಿಸ್ಟ್ ಪ್ರತಾಪ್ ರೆಡ್ಡಿ ಪರಿಚಯ
ಕರ್ನಾಟಕದ ಕಾಮ್ ಅಂಡ್ ಕೂಲ್ ಪೊಲೀಸ್ ಅಧಿಕಾರಿ ಸಿ. ಎಚ್. ಪ್ರತಾಪ್ ರೆಡ್ಡಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಅಕ್ರಮಗಳನ್ನು ಬಯಲಿಗೆ ಎಳೆಯುವ ಮೂಲಕ ಪ್ರಖ್ಯಾತಿ ಹೊಂದಿರುವ ಹಿರಿಯ ಐಪಿಎಸ್ ಅಧಿಕಾರಿ ಸಿ. ಎಚ್. ಪ್ರತಾಪ್ ರೆಡ್ಡಿ ಸರ್ಕಾರದ ಸೈಬರ್ ಲ್ಯಾಬ್ಸ್ ಯೋಜನೆಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಿಬಿಐನಲ್ಲೂ ಕೆಲಸ ಮಾಡಿರುವ ಅವರು ಯಾವುದೇ ಪರಿಸ್ಥಿತಿಯನ್ನೂ ಕೂಲ್ ಆಗಿ ನಿಭಾಯಿಸುವ ಗುಣ ಹೊಂದಿದ್ದಾರೆ.
ಅಚ್ಚರಿ ಬೆಳವಣಿಗೆಯಲ್ಲಿ ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿರುವ ಸಿ. ಎಚ್. ಪ್ರತಾಪ್ ರೆಡ್ಡಿ ಹಿನ್ನೆಲೆ, ಸೇವಾ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸದ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್ ರೆಡ್ಡಿ ಇದೀಗ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಆಗಿ ನೇಮಕಗೊಂಡಿದ್ದಾರೆ.
ಗುಂಟೂರು ಮೂಲದ ರೆಡ್ಡಿ; ಪ್ರತಾಪ್ ರೆಡ್ಡಿ ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯವರು. ಇವರ ಜನ್ಮ ದಿನಾಂಕ ಜು. 1, 1964 , ಗುಂಟೂರು ಜಿಲ್ಲೆ, ಆಂಧ್ರ ಪ್ರದೇಶ. ಬಿ.ಟೆಕ್ ಪದವೀಧರರಾಗಿದ್ದು, 1991ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿದ್ದು, ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

ಸಿ. ಎಚ್. ಪ್ರತಾಪ್ ರೆಡ್ಡಿ ಹಾಸನ ಜಿಲ್ಲೆಯ ಸಹಾಯಕ ಸೂಪರಿಡೆಂಟೆಂಟ್ ಆಫ್ ಪೊಲೀಸ್ ಆಗಿ ಸೇವೆ ಆರಂಭಿಸಿದ್ದರು. ಇಂಡಿಯಾ ಸೈಬರ್ ಲ್ಯಾಬ್ಸ್ ಯೋಜನೆಗಳ ಮೂಲಕ ಕಾನೂನು ಜಾರಿ ಅಭಿಯೋಜನಾ ನಿರ್ದೇಶನಾಲಯಗಳಲ್ಲಿ ಸೇವೆ ಸಲ್ಲಿಸಿ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಕೊಡುಗೆ ನೀಡಿದ್ದಾರೆ.
ಸಿಬಿಐ ನಲ್ಲಿ ಅಮೂಲ್ಯ ಸೇವೆ: ಪ್ರತಾಪ್ ರೆಡ್ಡಿ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಹಾಗೂ ಮುಂಬೈ ಎರಡು ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಬ್ಯಾಂಕ್ ಮತ್ತು ಸೆಕ್ಯುರಿಟಿ ಡೊಮೈನ್ ಗಳಲ್ಲಿ ನಡೆದಿದ್ದ ಹಲವಾರು ಭ್ರಷ್ಟಾಚಾರಗಳನ್ನು ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಆ ಬಳಿಕ ಮುಂಬೈ ಘಟಕದ ಸಿಬಿಐನಲ್ಲೂ ಸೇವೆ ಸಲ್ಲಿಸಿದ್ದರು.

ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿರುವ ಪ್ರತಾಪ್ ರೆಡ್ಡಿ, ಸಶಸ್ತ್ರ ಮೀಸಲು ಪಡೆ ಕಮಾಂಡಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಐಡಿಯಲ್ಲಿ ವಿಶೇಷ ವಿಚಾರಣೆ, ನರಹತ್ಯೆ, ದರೋಡೆ ವಿಭಾಗದ ಡಿಐಜಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಲವು ಮಹತ್ವದ ಪ್ರಕರಣಗಳ ತನಿಖೆ ನೇತೃತ್ವ ವಹಿಸಿದ್ದರು.
ಮಣಿಪಾಲ್ ಸಾಮೂಹಿಕ ಲೈಂಗಿಕ ದೌರ್ಜನ್ಯ ಕೇಸು: ಮಣಿಪಾಲದಲ್ಲಿ ವರದಿಯಾಗಿದ್ದ ಕೇರಳ ಮೂಲದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಿ. ಎಚ್. ಪ್ರತಾಪ್ ರೆಡ್ಡಿ.
ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿದ್ದ ಪ್ರತಾಪ್ ರೆಡ್ಡಿ ಯಾವುದೇ ಸುಳಿವು ಇಲ್ಲದೇ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಅತ್ಯಂತ ದಕ್ಷ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಪ್ರತಾಪ್ ರೆಡ್ಡಿ ಮಣಿಪಾಲ್ ಅತ್ಯಾಚಾರ ಪ್ರಕರಣದ ಆರೋಪಿಗಳ ಪತ್ತೆಗೆ ಸ್ವತಃ ಇಳಿದಿದ್ದರು.
ಯಾವುದೇ ಸುಳಿವು ಇಲ್ಲದೇ ಹರಿ ಪ್ರಸಾದ್, ಆನಂದ್, ಯೋಗೀಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಸುಳಿವು ಇಲ್ಲದ ಈ ಪ್ರಕರಣದ ಪತ್ತೆಯ ರುವಾರಿ ಪ್ರತಾಪ್ ರೆಡ್ಡಿ ಪ್ರಕರಣ ವರದಿಯಾದ ಆರೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪ್ರತಾಪ್ ರೆಡ್ಡಿ ಯಶಸ್ವಿಯಾಗಿದ್ದರು.
ಯಾವುದೇ ಕ್ಲಿಷ್ಟ ಪ್ರಕರಣ ಇರಲಿ ಪ್ರತಾಪ್ ರೆಡ್ಡಿ ಕೂಲ್ ಆಗಿ ತೆಗೆದುಕೊಳ್ಳುತ್ತಾರೆ. ಮಂಗಳೂರಿನಲ್ಲಿ ನಡೆದಿದ್ದ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಅವರು ನಿಬಾಯಿಸಿದ ರೀತಿ ಬೇರೆ ಯಾರೂ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಅವರ ಯಶಸ್ಸಿನ ಗುಟ್ಟೇ ಅದು ಎಂದು ಅವರಿಂದ ಮಾರ್ಗದರ್ಶನ ಪಡೆದಿದ್ದ ಅಧಿಕಾರಿ ಹೇಳುತ್ತಾರೆ.
ಇನ್ನು ಸಿಬಿಐನಲ್ಲಿ ಕೆಲಸ ಮಾಡಿರುವ ಅನುಭವ ಇರುವ ಪ್ರತಾಪ್ ರೆಡ್ಡಿ ಸೈಬರ್ ತಜ್ಞತೆಯಲ್ಲಿ ನಿಪುಣತೆ ಸಾಧಿಸಿದ್ದಾರೆ. ಪ್ರತಾಪ್ ರೆಡ್ಡಿ ತನ್ನ ಸೈಬರ್ ತಜ್ಞತೆಯನ್ನು ಬಳಿಸಿ ಅನೇಕ ಸೈಬರ್ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂದೂ ಪ್ರಚಾರ ಬಯಸದ ಪ್ರತಾಪ್ ರೆಡ್ಡಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪೊಲೀಸ್ ದಂಡ ಹಿಡಿದಿದ್ದಾರೆ.












Click it and Unblock the Notifications