Job fraud: ಉದ್ಯೋಗ ಕೊಡಿಸೋದಾಗಿ ₹80 ಲಕ್ಷ ಪೀಕಿದ ಗ್ಯಾಂಗ್, ಯಾವ ಕೆಲಸಕ್ಕೆ ಗೊತ್ತಾ?
ಕೆಲಸ ಕೊಡಿಸುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳ ಕನಸಿನೊಂದಿಗೆ ಚೆಲ್ಲಾಟವಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಬೆಂಗಳೂರಿನಲ್ಲೂ ಇಂತಹ ವಂಚಕರು ಸಕ್ರಿಯವಾಗಿದ್ದು, ಆಗಾಗ ಪೊಲೀಸರ ಬಲೆ ಬೀಳುತ್ತಿದ್ದಾರೆ. ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಬಿಸಿ ಸಂಘಟಿತ ಅಪರಾಧ (ಪಶ್ಚಿಮ) ವಿಭಾಗವು ಮೂವರು ವಂಚಕರನ್ನು ಬಂಧಿಸಿದೆ.
ನಿರುದ್ಯೋಗಿ ಯುವಜನರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಅವರಿಗೆ ಕೆಲಸದ ಆಮಿಷವೊಡ್ಡಿ ಲಕ್ಷಗಟ್ಟಲೆ ಹಣ ಪಡೆದು ವಂಚಿಸುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ. ಈ ಗ್ಯಾಂಗ್ ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಗಳನ್ನು ಕೊಡಿಸುವುದಾಗಿ ಅಭ್ಯರ್ಥಿಗಳು ಭರವಸೆ ನೀಡುತ್ತಿದ್ದರು. ಇದೇ ರೀತಿ 80 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಅಭ್ಯರ್ಥಿಗಳಿಂದ ವಸೂಲು ಮಾಡಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಹುಡುಕಾಟ ನಡೆದಿದ್ದು, ಪ್ರಕರಣವು ತನಿಖೆಯಲ್ಲಿದೆ. ಉದ್ಯೋಗದ ಮೋಸಗಳನ್ನು ತಡೆಯಲು ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಕಮೀಷನರ್ ಮನವಿ ಮಾಡಿದ್ದಾರೆ.
ಜಮೀನಿನ ದಾಖಲೆಗಳನ್ನು ಕೃತಕವಾಗಿ ತಯಾರಿಸಿ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಜನರಲ್ ಪವರ್ ಆಫ್ ಅಟಾರ್ನಿ, ಮಾರಾಟ ಹಕ್ಕುಪತ್ರ, ಬಿ ಪ್ರಾಪರ್ಟಿ ರಜಿಸ್ಟರ್ ಎಕ್ಸ್ಟ್ರಾಕ್ಟ್ ಮತ್ತು ಇನ್ನಿತರ ಸಂಬಂಧಿತ ದಾಖಲೆಗಳು ಸೇರಿವೆ. ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಬೆಂಗಳೂರು ನಗರ ಪೊಲೀಸರು ಬೈಕ್ ಕಳ್ಳತನವನ್ನು ತಡೆಯಲು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. ಹೆಬ್ಬಾಳ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿ, ಸುಮಾರು 13 ಲಕ್ಷ ಮೌಲ್ಯದ 20 ಬೈಕ್ಗಳನ್ನು ವಶಪಡಿಸಿಕೊಂಡಿದ್ದು, ನಗರದೆಲ್ಲೆಡೆ ದಾಖಲಾಗಿದ್ದ 20 ಪ್ರಕರಣಗಳಿಗೆ ಸಂಬಂಧಿಸಿದ ಬೈಕ್ಗಳು ಪತ್ತೆ ಹಚ್ಚಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ, 12.80 ಲಕ್ಷ ಮೌಲ್ಯದ 15 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೈಕಿ 12 ಬೈಕ್ ಮಾಲೀಕರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ವಾಹನವನ್ನು ಪಾರ್ಕ್ ಮಾಡುವಾಗ ಎಚ್ಚರಿಕೆಯಿಂದಿರಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ನಮ್ಮ 112ಗೆ ತಕ್ಷಣ ಮಾಹಿತಿ ನೀಡಿ ಎಂದು ಕಮೀಷನರ್ ದಯಾನಂದ್ ಮನವಿ ಮಾಡಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆಯವರು ನಗರಾದ್ಯಂತ ನಡೆದ ಮನೆ ಮತ್ತು ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಆರೋಪಿಯಿಂದ 109 ಗ್ರಾಂ ಬಂಗಾರದ ಆಭರಣಗಳು, 1.5 ಕೆ.ಜಿ ಬೆಳ್ಳಿಯ ಸಾಮಾನುಗಳು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 9.50 ಲಕ್ಷ ಎಂದು ತಿಳಿದುಬಂದಿದೆ. ನಿಮ್ಮ ಮನೆ ಲಾಕ್ ಮಾಡುವಾಗ ಮತ್ತು ನಿಮ್ಮ ವಾಹನವನ್ನು ಪಾರ್ಕ್ ಮಾಡುವಾಗ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.
ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರ್ಟೇಕರ್ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ ಸುಮಾರು 11.5 ಲಕ್ಷ ಮೌಲ್ಯದ 157 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಗೆ ಕೆಲಸದವರನ್ನು ಸೇರಿಸಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು, ಯಾವುದೇ ಸಂಶಯಾಸ್ಪದ ಚಟುವಟಿಕೆಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಕೋರಿದ್ದಾರೆ.












Click it and Unblock the Notifications