ಬೆಂಗಳೂರುː 5 ಜನ ಡ್ರಾಪ್ ದರೋಡೆಕೋರರ ಟ್ರ್ಯಾಪ್
ಬೆಂಗಳೂರು, ನ. 14: ರಾತ್ರಿ ಬಸ್ ತಪ್ಪಿಸಿಕೊಂಡು ಹೇಗಾದರೂ ಮನೆ ಸೇರಬೇಕೆಂಬ ಧಾವಂತದಲ್ಲಿದ್ದವರೇ ಇವರ ಟಾರ್ಗೆಟ್. ಜನರನ್ನು ಡ್ರಾಪ್ ಮಾಡುವ ನೆಪದಲ್ಲಿ ವಾಹನಕ್ಕೆ ಹತ್ತಿಸಿಕೊಂಡು ನಗದು,ಮೊಬೈಲ್ ದೋಚುತ್ತಿದ್ದ 5 ಜನರ ಗುಂಪೊಂದು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದೆ.
ಬೆಂಗಳೂರು ಲಗ್ಗೆರೆ ಚೌಡೇಶ್ವರಿನಗರದ ನಾಗೇಶ (22), ಕುಮಾರ(25), ವಿನೋದ(22), ಆನಂದ್ (21) ಮತ್ತು ಭರತ (20) ಬಂಧಿತರು. ನವೆಂಬರ್ 10 ರಂದು ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಕೆ ಅಪಾರ್ಟ್ ಮೆಂಟ್ ಕಡೆಯಿಂದ ಜ್ಞಾನಭಾರತಿ ಕಡೆಗೆ ಹೋಗುವ ಶಿವನಹಳ್ಳಿ ರಸ್ತೆ ಜಂಕ್ಷನ್ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು 2 ಲಕ್ಷ ರೂ, ನಗದು, 23 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.[ಬೆಂಗಳೂರು ಮನೆಗಳ್ಳರ ಬಂಧನ, ಅಪಾರ ಹಣ ವಶ]

ಗೊರಗುಂಟೆಪಾಳ್ಯ, ಯಶವಂತಪುರ, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿಕೊಂಡು ಸುಮನಹಳ್ಳಿ, ತುಮಕೂರು ರಸ್ತೆ, ನೆಲಮಂಗಲ ಟೋಲ್ ಕಡೆಗಳಿಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಬೆದರಿಸಿ ದೋಚಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಇಂಥ ಪ್ರಕರಣದಲ್ಲಿ ಹಣ ಕಳೆದುಕೊಂಡವರಿದ್ದರೆ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕೆಂಗೇರಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಜೆ.ಶಿವಶಂಕರ್, ಪಿಎಸ್ಐ ಎಂ. ಮಲ್ಲಿಕಾರ್ಜುನ್ ಸಿಬ್ಬಂದಿ ಪ್ರದೀಪ್ ಕುಮಾರ್, ಸತೀಶ್, ಸೋಮಣ್ಣ, ಗೋವಿಂದ ಭಾಗವಹಿಸಿದ್ದರು.
ತಲಘಟ್ಟಪುರ ಬೆಂಗಳೂರು ನಗರ ವ್ಯಾಪ್ತಿಗೆ
ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿದ್ದ ತಲಘಟ್ಟಪುರ ಠಾಣೆಯನ್ನು ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೊರವಲಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ವಸತಿ ಪ್ರದೇಶಗಳು, ಬಡಾವಣೆಗಳು ನಿರ್ಮಾಣಗೊಂಡು ಜನವಸತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಾನಗರ ವ್ಯಾಪ್ತಿಗೆ ಸೇರಿಸಲಾಗಿದೆ.
ಬನಶಂಕರಿ ಉಪ-ವಿಭಾಗದ ಅಧೀನದಲ್ಲಿ ಠಾಣೆ ಕಾಯರ್ಯಾರಂಭ ಮಾಡಿದ್ದು ಒಟ್ಟು 34 ಹಳ್ಳಿಗಳು ಠಾಣಾ ಸರಹದ್ದಿಗೆ ಒಳಪಡುತ್ತವೆ ಎಂದು ಪೊಲೀಸ್ ಇಲಾಖೆ ಆದೇಶ ತಿಳಿಸಿದೆ.












Click it and Unblock the Notifications