ಕೊನೆಗೂ ಸಿಕ್ತು ಮುಹೂರ್ತ: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆ ಜೂ.17ಕ್ಕೆ
ಬೆಂಗಳೂರು, ಜೂನ್ 8: ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೊ ಮೊದಲ ಹಂತದ ಅಂತಿಮ ಘಟ್ಟವಾದ ಯಲಚೇನಹಳ್ಳಿ-ಸಂಪಿಗೆ ರಸ್ತೆ ನಡುವಿನ ಗ್ರೀನ್ ಲೈನ್ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ.
ವಿಳಂಬದಿಂದಲೇ ಹೆಚ್ಚು ಸುದ್ದಿಯಾದಿದ್ದ ನಮ್ಮ ಮೆಟ್ರೋದ ಈ ಮಾರ್ಗ ಜೂನ್ 17 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಇದೇ ಜೂನ್ 17-18 ರಂದು ರಾಜ್ಯ ಪ್ರವಾಸ ಕೈಗೊಳ್ಳಲಿರುವುದರಿಂದ ಅವರಿಂದಲೇ ಇದನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ.
ಜೂನ್ 17 ರಂದು ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳಲಿರುವ ಬೆಂಗಳೂರು ಉತ್ತರ-ದಕ್ಷಿಣವನ್ನು ಬೆಸೆಯುವ ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮೆಟ್ರೋ ಉಪಯೋಗವನ್ನು, ಈಗಾಗಲೇ ಪರ್ಪಲ್ ಲೈನ್(ಮೈಸೂರು ರಸ್ತೆಯಿಂದ-ಬೈಯಪ್ಪನಹಳ್ಳಿವರೆಗೆ) ಮೆಟ್ರೊ ಉಪಯೋಗ ಪಡೆಯುತ್ತಿರುವ ಜನರಿಗಿಂತ ಮೂರು ಪಟ್ಟು ಹೆಚ್ಚು ಜನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.