ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?
ಬೆಂಗಳೂರು, ಫೆ. 9 : ಬೆಂಗಳೂರು-ಮೈಸೂರು ನಡುವಿನ ಆರು ಪಥದ ರಸ್ತೆ ಕಾಮಗಾರಿ ವಿಳಂಬವಾಗಲಿದೆಯೇ?. ಸದ್ಯದ ಮಾಹಿತಿ ಪ್ರಕಾರ ಹೌದು. ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರು ಪ್ರಧಾನಿ ಮತ್ತು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ನೈಸ್ ಯೋಜನೆಗೆ ಭೂಮಿ ಕೊಡಿ ಎಂದು ಮನವಿ ಮಾಡಿದ್ದಾರೆ, ಇದರಿಂದ ಆರುಪಥದ ರಸ್ತೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ.
'ನೂರಾರು ಕೋಟಿ ವೆಚ್ಚ ಮಾಡಿ ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆಯನ್ನು ಅಭಿವೃದ್ಧಿಪಡಿಸುವ ಬದಲು ನಮಗೆ ಭೂಮಿ ನೀಡಿ ಎಂದು ಅಶೋಕ್ ಖೇಣಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರಿಂದ ಟೆಂಡರ್ ಕರೆಯುವ ಹಂತದಲ್ಲಿರುವ ಬೆಂಗಳೂರು-ಮೈಸೂರು ಆರುಪಥದ ಹೆದ್ದಾರಿ ಕಾಮಗಾರಿ ವಿಳಂಬವಾಗಲಿದೆ.

ಕೇಂದ್ರ ಭೂ ಸಾರಿಗೆ ಇಲಾಖೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ. 3,000 ಕೋಟಿ ರೂ. ವೆಚ್ಚದಲ್ಲಿ ಈ ಮಾರ್ಗದಲ್ಲಿ ಆರು ಪಥದ ರಸ್ತೆ ನಿರ್ಮಾಣವಾಗಬೇಕಿದೆ. ಇದರ ಸಮೀಕ್ಷೆಯೂ ಮುಗಿದಿದ್ದು, ಕಾಮಗಾರಿಗೆ ಟೆಂಡರ್ ಕರೆಯಬೇಕಾಗಿದೆ.[ಬೆಂಗಳೂರು-ಮೈಸೂರು ಹೆದ್ದಾರಿಗೆ ಟೋಲ್ ಕಟ್ಟಲು ಸಜ್ಜಾಗಿ]
ಅಶೋಕ್ ಖೇಣಿ ಪತ್ರದಲ್ಲೇನಿದೆ : ಉದ್ದೇಶಿತ ಆರು ಪಥದ ರಸ್ತೆ ನೈಸ್ ರಸ್ತೆಯಿಂದ ಸುಮಾರು 5 ಕಿ.ಮೀ ಅಂತರದಲ್ಲಿ ಹಾದು ಹೋಗಲಿದೆ. ಇಷ್ಟು ಕಡಿಮೆ ಅಂತರದಲ್ಲಿ ಮತ್ತೊಂದು ರಸ್ತೆ ನಿರ್ಮಾಣ ಮಾಡಲು ಬದಲು ನೈಸ್ ರಸ್ತೆಗೆ ಭೂಮಿ ನೀಡಿದರೆ ನಾವೇ ರಸ್ತೆ ನಿರ್ಮಿಸುತ್ತೇವೆ ಎಂದು ಖೇಣಿ ಪತ್ರ ಬರೆದಿದ್ದಾರೆ. [ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ]
ಸರ್ಕಾರ ಸುಮಾರು ಮೂರು ಸಾವಿರ ಕೋಟಿ ರೂ. ವೆಚ್ಚ ಮಾಡಿ ಆರು ಪಥದ ರಸ್ತೆ ನಿರ್ಮಿಸುವ ಬದಲು ಭೂಮಿ ನೀಡಿದರೆ, ಸರ್ಕಾರದ ಬಂಡವಾಳ ಇಲ್ಲದೆ ಬಿಎಂಐಸಿ ರಸ್ತೆ ನಿರ್ಮಾಣ ಮಾಡಲಿದೆ. ಆದ್ದರಿಂದ ಈ ಯೋಜನೆ ಬಗ್ಗೆ ಮರು ಚಿಂತನೆ ನಡೆಸಬೇಕು ಎಂದು ಖೇಣಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬಿಎಂಐಸಿ ರಸ್ತೆಗೆ ಬೆಂಬಲ ಕೊಡಿ ನೀಡಿ ಎಂದು ಮನವಿ ಮಾಡಿರುವ ಖೇಣಿ ಅವರು ನೈಸ್ ಸಂಸ್ಥೆ ಬೆಂಗಳೂರು-ಮೈಸೂರು ನಡುವೆ ರಸ್ತೆ ನಿರ್ಮಾಣ ಮಾಡಿದರೆ 111 ಕಿ.ಮೀ ಆಗುತ್ತದೆ. ಆದರೆ, ಸದ್ಯ ಕೇಂದ್ರ ಆರು ಪಥದ ರಸ್ತೆ ನಿರ್ಮಿಸಿದರೆ 164 ಕಿ.ಮೀ ಆಗುತ್ತದೆ. ಆದ್ದರಿಂದ ಯೋಜನೆ ಬಗ್ಗೆ ಮರು ಚಿಂತನೆ ಮಾಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications