Mandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತ
ಬೆಂಗಳೂರು- ಮೈಸೂರು ಹೆದ್ದಾರಿ ಪ್ರಯಾಣಿಕರಿಗೆ ಸಂಸದ ಪ್ರತಾಪ್ ಸಿಂಹ ಸಿಹಿ ಸುದ್ದಿ ನೀಡಿದ್ದಾರೆ. ಏನೆಂದು ಮುಂದೆ ಓದಿ.
ಬೆಂಗಳೂರು, ಜನವರಿ. 25: ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ವಾಹನ ಸವಾರರಿಗೆ ಸಂಸದ ಪ್ರತಾಪ್ ಸಿಂಹ ಸಿಹಿ ಸುದ್ದಿ ನೀಡಿದ್ದಾರೆ. ಬಹುನಿರೀಕ್ಷಿತ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇನ ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾಗಿದೆ.
ಹೌದು, ಕಾಮಗಾರಿ ನಡೆಯುತ್ತಿದ್ದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಮಂಡ್ಯ ಬೈಪಾಸ್ ಈಗ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಮಾಹಿತಿಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ.
ಮೈಸೂರು ಸಮೀಪ ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ
Guyz, Mandya Bypass opened for traffic! Njoy the drive. BUT #SpeedKills, safe drive. pic.twitter.com/ak5k1i0Gkc
— Pratap Simha (@mepratap) January 25, 2023
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗೆಳೆಯರೇ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾಗಿದೆ. ಪ್ರಯಾಣವನ್ನು ಆನಂದಿಸಿ. ಆದರೆ ವೇಗದ ಚಾಲನೆ ಬೇಡ, ಸುರಕ್ಷಿತವಾಗಿ ಚಾಲನೆ ಮಾಡಿ" ಎಂದು ಮನವಿ ಮಾಡಿದ್ದಾರೆ.
ಎರಡು ವಾರಗಳ ಹಿಂದೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ವೀಕ್ಷಣೆ ನಡೆಸಿದ್ದ ವೇಳೆ ಮಾತನಾಡಿದ್ದ ಅವರು, ಮಂಡ್ಯ ಬೈಪಾಸ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ 10 ದಿನದ ಒಳಗಡೆ ಮಂಡ್ಯ ಬೈಪಾಸನ್ನು ವಾಹನ ಸಂಚಾರಕ್ಕೆ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗುತ್ತಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಲಾಗುವುದು. ಫೆಬ್ರವರಿ ಒಳಗೆ ಕಾಮಗಾರಿ ಮುಗಿಸಿ ಮಾರ್ಚ್ನಲ್ಲಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದ್ದರು.
ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಘೋಷಿಸಿದ್ದರು. ಹಾಗಾಗಿ ಅವರೇ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರತಾಪ್ ಸಿಂಹ ಈ ಹಿಂದೆ ಮಾಹಿತಿ ನೀಡಿದ್ದರು.
ಇನ್ನು, ಈ ಹೆದ್ದಾರಿಯಲ್ಲಿ ಬೈಕ್ ಮತ್ತು ಆಟೋಗಳಿಗೆ ಅವಕಾಶವಿಲ್ಲ. ಸರ್ವಿಸ್ ರಸ್ತೆಯಲ್ಲಷ್ಟೇ ಹೋಗಬಹುದು ಎಂದು ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ತಿಳಿಸಿದ್ದಾರೆ.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಪ್ರಯಾಣಿಕರ ಇಂಧನ ಹಾಗೂ ಸಮಯ ಎರಡನ್ನೂ ಉಳಿಸುತ್ತದೆ. ಹಾಗಾಗಿ ಎರಡು ಕಡೆ ಟೋಲ್ ಕಟ್ಟಬೇಕಿದೆ. ಅಲ್ಲದೆ, ಎರಡು ನಗರಗಳ ನಡುವಿನ ಮೂರುವರೆ ಗಂಟೆ ಪಯಣ ಒಂದೂವರೆ ಗಂಟೆಗೆ ಇಳಿಯಲಿದೆ. ಬಸ್ಸು, ಕಾರುಗಳು ಎಕ್ಸ್ಪ್ರೆಸ್ ವೇನಲ್ಲಿ ಸಾಗಲಿವೆ.
ಹೆದ್ದಾರಿ ಉದ್ಘಾಟನೆವರೆಗೂ ಬೈಕ್, ಆಟೋಗಳು ಎಕ್ಸ್ಪ್ರೆಸ್ ವೇನಲ್ಲಿ ಸಾಗಬಹುದು. ಆದರೆ, ಉದ್ಘಾಟನೆ ನಂತರ ಸರ್ವಿಸ್ ರಸ್ತೆಯಲ್ಲೇ ಸಾಗಬೇಕು. ಬೈಕ್ ಮತ್ತು ಆಟೋಗಳಿಗೂ ಹೆದ್ದಾರಿಯಲ್ಲಿ ಅವಕಾಶ ಕೊಟ್ಟರೆ ಅಪಘಾತ ಆಗುವ ಸಾಧ್ಯತೆ ಇದೆ. ಹೀಗಾಗಿ ಬೈಕ್ ಮತ್ತು ಆಟೋಗಳಿಗೆ ಸರ್ವಿಸ್ ರಸ್ತೆಯಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.