Bengaluru-Mysuru Expressway: ಕಾಮಗಾರಿ ಪೂರ್ಣಗೊಳ್ಳದೇ ಉದ್ಘಾಟನೆ, ಟೋಲ್ ರದ್ದುಗೊಳಿಸಲು ಆಗ್ರಹ
ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೆದ್ದಾರಿ ತನ್ನ ಸಾಧನೆ ಎನ್ನುತ್ತಿರುವ ಬಿಜೆಪಿ ನಡೆ ಸರಿಯಲ್ಲ ಎಂದು ಆಮ್ ಆದ್ಮಿ ಪಾರ್ಟಿ ದೂರಿದೆ.
ಬೆಂಗಳೂರು, ಮಾರ್ಚ್ 13: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿವೆ. ಹಾಗಾದರೆ ಶುಲ್ಕ ಸಂಗ್ರಹಿಸುತ್ತಿರುವ ಟೋಲ್ ರದ್ದಿಪಡಿಸಿ ಪೂರ್ತಿ ಹಣ ತಾನೇ ಭರಿಸಲಿ ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸೋಮವಾರ ಬೆಂಗಳೂರಿನ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು, ಬೆಂಗಳೂರು-ಮೈಸೂರು ಮಧ್ಯ ಸಂಪರ್ಕ ಸಾಧನೆಗೆ ನಿರ್ಮಿಸಲಾಗಿರುವ ಹೆದ್ದಾರಿಯನ್ನು ಬಿಜೆಪಿ ನಾಯಕರು ದಶಪಥ ಎಂದು ಕರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ದಶಪಥ ಎಂದು ಕರೆಯುವುದನ್ನು ಎಲ್ಲೂ ನಿರಾಕರಣೆ ಮಾಡಿಲ್ಲ.

ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಕಟಿಸಿದ ಅಧಿಕೃತ ಆಹ್ವಾನ ಪತ್ರಿಕೆ ಆರು ಪಥವೆಂದು ಉಲ್ಲೇಖಿಸಲಾಗಿದೆ. ಹತ್ತು ಪಥವನ್ನು ಆರು ಪಥ ಮಾಡಲಾಗಿದೆ. ಉಳಿದ ನಾಲ್ಕು ಪಥಗಳು ಏನಾದವು? ಬಿಜೆಪಿ ಸರ್ಕಾರವು 40% ಕಮಿಷನ್ ಪಡೆಯುವಂತೆ ಶೇಕಡಾ 40ರಷ್ಟು ಪಥಗನ್ನು ಇಲ್ಲವಾಗಿಸಿದೆ. ಇದು ದಶಪಥವೋ ಆರು ಪಥವೋ? ಎಂಬುದನ್ನು ಬಿಜೆಪಿ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದರು.
ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ: ಎಎಪಿ
ಎನ್ಎಚ್ಎಐ ಆಹ್ವಾನದ ಪ್ರಕಾರ, ಬೆಂಗಳೂರಿನಿಂದ ನಿಡಘಟ್ಟ ತನಕ ಮಾತ್ರ ಕಾಮಗಾರಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ 140 ಕಿಲೋ ಮೀಟರ್ ಇದೆ. ಸರ್ಕಾರವು ಕೇವಲ ನಿಡಘಟ್ಟದ ತನಕ 70 ಕಿಲೋಮೀಟರ್ ಮಾತ್ರ ಹೆದ್ದಾರಿ ಮಾಡಿಸಿದ್ದಲ್ಲದೇ ಪ್ರಧಾನಿಯಿಂದ ಉದ್ಘಾಟನೆ ಮಾಡಿರುವುದು ಎಷ್ಟು ಸರಿ? ಇದು ಪ್ರಧಾನಮಂತ್ರಿಗಳಿಗೆ ಶೋಭೆ ತರುತ್ತದೆಯೇ? ಎಂದು ಅವರು ಪ್ರಶ್ನೆ ಮಾಡಿದರು.

ಇದೇ ಈ ಹೆದ್ದಾರಿಯಲ್ಲಿ ನಿಡಘಟ್ಟ ಸಮೀಪ ಕಾಮಗಾರಿ ನಡೆಯುತ್ತಿರುವ ಫೋಟೋ ಸಹ ಬಿಡುಗಡೆ ಮಾಡಲಾಯಿತು. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಮಾಡುವ ತರಾತುರಿ ಪ್ರಧಾನಿಯವರಿಗೆ ಏನಿತ್ತು? ಚುನಾವಣೆಗೆ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಹೊರಟಿದ್ದಾರಾ? ಎಂದು ಕಿಡಿ ಕಾರಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು 140 ರೂಪಾಯಿ ಟೋಲ್ ಕಟ್ಟಬೇಕಾಗಿದೆ. ಒಂದು ಕಾಲದಲ್ಲಿ ಎರಡು ಪಥವಿದ್ದ ರಸ್ತೆಯನ್ನು ನಾಲ್ಕು ಪಥ ಮಾಡಿದಾಗಿ ಟೋಲ್ ಕಟ್ಟಬೇಕಾಗಿರಲಿಲ್ಲ. ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಿತ್ತು. ಆದರೆ ಈಗ ಆರು ಪಥ ಮಾಡಿದಾಗ 140 ರೂಪಾಯಿ ನೀಡಬೇಕಾಗಿದೆ. ದುಬಾರಿ ಪೆಟ್ರೋಲ್ ಬೆಲೆ ನೀಡುವುದರ ಜೊತೆಗೆ ಟೋಲ್ ಶುಲ್ಕವನ್ನೂ ಪಾವತಿಸಲು ವಾಹನಸವಾರರಿಗೆ ಹೊರೆಯಾಗುತ್ತಿದೆ ಆದ್ದರಿಂದ ಟೋಲ್ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣೆಗಾಗಿ ಬಿಪಿಪಿ ಏನು ಬೇಕಾದರೂ ಮಾಡುತ್ತದೆ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ದುಬಾರಿ ಟೋಲ್ ನಿಗದಿಪಡಿಸುವುದಾದರೆ, ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ಹೊಗಳಿಕೊಳ್ಳುವುದು ಎಷ್ಟು ಸರಿ? ಗುತ್ತಿಗೆದಾರರು ನಿರ್ಮಿಸುವುದು ಹಾಗೂ ಅದಕ್ಕೆ ವಾಹನ ಸವಾರರು ಹಣ ನೀಡುವುದಾದರೆ ಸರ್ಕಾರಕ್ಕೆ ಏಕೆ ಇಷ್ಟೊಂದು ಪ್ರಚಾರ ಪಡೆಯಬೇಕು? ಸರ್ಕಾರಕ್ಕೆ ತಾಕತ್ತಿದ್ದರೆ ಟೋಲ್ ರದ್ದುಪಡಿಸಿ, ನಂತರವಷ್ಟೇ ಹೆದ್ದಾರಿಯ ನಿರ್ಮಾಣದ ಕ್ರೆಡಿಟ್ ತೆಗೆದುಕೊಳ್ಳಲಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಫೈಟರ್ ರವಿ ಎಂಬ ರೌಡಿ ಶೀಟರ್ಗೆ ನಮಸ್ಕಾರ ಮಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಫೈಟರ್ ರವಿ ಏನಾದರೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವನೇ? ದೇಶದ ಪ್ರಧಾನಿ ಸ್ಥಾನ ಅಲಂಕರಿಸಿದವರು ಗೂಂಡಾಗಳಿಗೆ ನಮಸ್ಕಾರ ಮಾಡುವ ಮೂಲಕ ಮೋದಿಯವರು ಯಾವ ಸಂದೇಶ ಕೊಡಲು ಹೊರಟಿದ್ದಾರೆ? ಚುನಾವಣೆಯಲ್ಲಿ ಜಯಗಳಿಸಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ ಎಂದು ಬ್ರಿಜೇಷ್ ಕಾಳಪ್ಪ ದೂರಿದರು.












Click it and Unblock the Notifications