Bengaluru-Mysuru Expressway: ಬೆಂಗಳೂರು ನಗರ ಪ್ರವೇಶಿಸುವವರಿಗೆ ಸಂಕಷ್ಟ, ನಿತ್ಯ ಟ್ರಾಫಿಕ್ ಕಿರಿಕಿರಿ!
ಬೆಂಗಳೂರು, ಫೆಬ್ರವರಿ 19: ಬೆಂಗಳೂರು- ಮೈಸೂರು ಎಕ್ಸಪ್ರೆಸ್ ವೇ (ರಾಷ್ಟ್ರೀಯ ಹೆದ್ದಾರಿ) ಎರಡು ಪ್ರಮುಖ ನಗರಗಳ ನಡುವೆ ಸಂಚಾರ ಸಮಯ ಕಡಿಮೆ ಮಾಡುತ್ತಿದೆ. ಆದರೆ ಬೆಂಗಳೂರು ಪ್ರವೇಶಿಸುತ್ತಿದ್ದಂತೆ ವಾಹನ ಸವಾರರು ಮತ್ತೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ನಗರ ತಲುಪಲು ಸಾಕಷ್ಟು ಸಮಯ ಹಿಡಿಯುತ್ತಿದೆ.
ಒಟ್ಟು ಸುಮಾರು 117 ಕೀ.ಮಿ.ಯ ಈ ಹೆದ್ದಾರಿಯ ಅಧಿಕೃತ ಉದ್ಘಾಟನೆಯನ್ನು ಪ್ರಧಾನಮಂತ್ರಿಗಳಿಂದ ಮಾರ್ಚ್ ಉದ್ಘಾಟನೆಗೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ಮಂಡ್ಯ ಬಳಿ ಬೈಪಾಸ್ ಸಾರ್ವಜನಿಕರಿಗೆ ಮುಕ್ತವಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದಾಗಿದೆ. ಅದೇ ರೀತಿ ಮೈಸೂರಿನಿಂದ ಬೆಂಗಳೂರಿಗೆ ಬರುವವರು ಚಲಘಟ್ಟ, ಉತ್ತರಹಳ್ಳಿ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರಸ್ತುತ ಎಕ್ಸ್ಪ್ರೆಸ್ ವೇ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಅಂತ್ಯವಾಗುತ್ತದೆ. ಅಲ್ಲಿಂದ ನಗರದಕ್ಕೆ ಬರುವವರಿಗೆ ಸಮಸ್ಯೆ ಎದುರಾಗಿದೆ. ಮೈಸೂರಿನಿಂದ ಒಂದೂವರೇ ಗಂಟೆಯಲ್ಲಿ ಬರುವ ಪ್ರಯಾಣಿಕರು ಬೆಂಗಳೂರು ಪ್ರವೇಶಿಸುವುದರೊಳಗೆ ಹೈರಾಣಾಗುತ್ತಿದ್ದಾರೆ.

ರಾಜರಾಜೇಶ್ವರಿ ಆಸ್ಪತ್ರೆ ಬಳಿ ಎಕ್ಸ್ಪ್ರೆಸ್ ವೇ ಅಂತ್ಯಗೊಳ್ಳುತ್ತದೆ, ಅಲ್ಲಿಂದ ಮೇಲ್ಸೇತುವೆ ಇಳಿಜಾರು ಆರಂಭವಾಗುತ್ತದೆ. ಅಲ್ಲಿಂದಲೇ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಸವಾರರು ಒಂದೇ ಸಣ್ಣ ಪಥದಲ್ಲಿ ನಗರದ ಪ್ರವೇಶಿಸುವುದು ಆರಂಭವಾಗುತ್ತದೆ. ಹೀಗಾಗಿ ಒಮ್ಮೆಲೆ ವಾಹನಗಳು ನಿಧಾನಗೊಳ್ಳುತ್ತವೆ.
ಇನ್ನು BMRCL ನ 'ನಮ್ಮ ಮೆಟ್ರೊ' ವಿಸ್ತರಣೆಯಾದ ಚಲ್ಲಘಟ್ಟ ಮಾರ್ಗದಲ್ಲಿ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿ ಅಕ್ಕ ಪಕ್ಕ ಮಳೆ ನೀರಿನ ಕಾಲುವೆ ಹಾದು ಹೋಗುತ್ತಿದೆ. ಮೆಟ್ರೊ ನಿಲ್ದಾಣದಿಂದ ಪಂಚಮುಖಿ ಗಣೇಶ ದೇವಸ್ಥಾನ ಮುಂದೆ ರಸ್ತೆವರೆಗೆ ಮಳೆನೀರಿನ ಕಾಲುವೆಯ ಬಾಕ್ಸ್ ರೀತಿಯಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ರಸ್ತೆ ಕಿರಿದಾಗಿದೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಹವರ್ಸ್ ನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿರುತ್ತದೆ ಎಂದು ವಾಹನ ಸವರರೊಬ್ಬರು ತಿಳಿಸಿದರು.
ನೈಸ್ ರಸ್ತೆಯಿಂದ ನಗರಕ್ಕೆ ಬರುವವರಿಗೆ ಪಂಚಮುಖಿ ಗಣೇಶ ದೇಗುಲ ಹತ್ತಿರ ಬಲ ಮತ್ತು U ತಿರುವು ನಿಷೇಧಿಸಲಾಗಿದೆ. ಹೀಗಾಗಿ ಅವರೆಲ್ಲರು ಮೇಲ್ಸೇತುವೆ ಕೆಳಗೆಯೇ U ಟರ್ನ ಪಡೆದು ಬರಬೇಕಿದೆ. ಆಗ ಮೈಸೂರು ಕಡೆಯಿಂದ ಬರುವ ಎಲ್ಲ ವಾಹನಗಳು ಒಂದೆ ಕಡೆ ಆಗುತ್ತವೆ. ಇದರಿಂದ ಎಷ್ಟೋ ಸಮಯ ವಾಹನಗಳು ನಿಂತಲ್ಲೇ ನಿಲ್ಲುತ್ತವೆ.

ಒಟ್ಟಾರೆ ನೈಸ್ ರಸ್ತೆ ಜಂಕ್ಷನ್, ಕುಂಬಳಗೋಡು ಕಡೆಗೆ ಹೋಗಲು ಯಾವುದೇ ಸಮಸ್ಯೆ ಇಲ್ಲ. ಆದರೆ ಕುಂಬಳಗೋಡು, ದೊಡ್ಡ ಆಲದಮರ, ಅಂಚೆಪಾಳ್ಯ ಸುತ್ತಮುತ್ತ ಪ್ರದೇಶಕ್ಕೆ ಸುಗಮವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ರಾಜರಾಜೇಶ್ವರಿ ಆಸ್ಪತ್ರೆಯಿಂದ ನಗರಕ್ಕೆ ಬರುವಾಗ ಸಮಾರು 20 ನಿಮಿಷ ಟ್ರಾಫಿಕ್ನಲ್ಲಿ ನಿತ್ಯವು ಸಿಲುಕಿಕೊಳ್ಳುತ್ತಿದ್ದಾರೆ. ಸಂಚಾರ ಪೊಲೀಸರಿದ್ದರೂ ಭಾರಿ ವಾಹನಗಳನ್ನು ನಿಯಂತ್ರಿಸುತ್ತಿಲ್ಲ. ಎಲ್ಲೆಂದರಲ್ಲಿ ವಾಹನ ನಿಂತಿರುತ್ತವೆ. ಹೀಗಾಗಿ ಕಿರಿದಾದ ರಸ್ತೆಯನ್ನು ವಿಸ್ತರಿಸಬೇಕಿದೆ ಎಂದು ರಸ್ತೆಬದಿ ಅಂಗಡಿಯವರು ಹೇಳಿದರು.
ಉತ್ತರಹಳ್ಳಿ ಜಂಕ್ಷನ್: ಶಾಸ್ವತ ಪರಿಹಾರ ನೀಡಿ
ಕೆಂಗೇರಿ ಪೊಲೀಸ್ ಠಾಣೆಯಿಂದ- ಕೆಂಗೇರಿ ಸ್ಯಾಟಲೈಟ್ ವರೆಗೆ ಸದಾ ಟ್ರಾಫಿಕ್ ಇರುತ್ತದೆ. ಇನ್ನು ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಕಡೆಗೆ ಹೋಗುವವರಿಗೆ ಸಲೀಸಾಗಿ ತೆರಳು ದಾರಿ ಇಲ್ಲ. ಅವರು ಉತ್ತರಹಳ್ಳಿ ಜಂಕ್ಷನ್ನಲ್ಲಿ ಪ್ರತಿ ಬಾರಿಯು 10- 20 ನಿಮಿಷ ಕಾಯಬೇಕಾದ ಸ್ಥಿತಿ ಇದೆ. ಇಮ್ಮೊಮ್ಮೆ ಜಂಕ್ಷನ್ನಲ್ಲಿ ವಾಹನಗಳು ಮುಖಾಮುಖಿ ಆದಾಗ ಪರಿಸ್ಥಿತಿ ಹೇಳತೀರದಂತಾಗುತ್ತದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.












Click it and Unblock the Notifications