ಬೆಂಗಳೂರಿನ ಪ್ರಾಣಿಗಳ ಚಿತಾಗಾರ ಹೊಸವರ್ಷಕ್ಕೆ ಆರಂಭ
ಬೆಂಗಳೂರು, ನ.24 : ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿಗಳು ಸತ್ತರೆ ಅವುಗಳ ಅಂತ್ಯ ಸಂಸ್ಕಾರ ನೆರವೇರಿಸಲು ಚಿತಾಗಾರದ ದೊರೆಯುಲಿದೆ. ಸುಮನಹಳ್ಳಿ ಬಳಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತಾಗಾರದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.
ಕೆಲವು ದಿನಗಳ ಹಿಂದೆ ಬಿಬಿಎಂಪಿ ಮೇಯರ್ ಎನ್.ಶಾಂತ ಕುಮಾರಿ ಅವರು ಚಿತಾಗಾರಕ್ಕೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದೇಶದಲ್ಲೇ ಮೊಟ್ಟಮೊದಲ ಪ್ರಯತ್ನವಿದಾಗಿದ್ದು, ಸಾಕುಪ್ರಾಣಿಗಳು ಸತ್ತರೆ ಅವುಗಳ ಅಂತ್ಯ ಸಂಸ್ಕಾರವನ್ನು ಇಲ್ಲಿ ನೆರವೇರಿಸಬಹುದಾಗಿದೆ.

ಚಿತಾಗಾರದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಹೊಸವರ್ಷದಲ್ಲಿ ಪ್ರಾಣಿಗಳ ಚಿತಾಗಾರ ಕಾರ್ಯಾರಂಭ ಮಾಡಲಿದೆ. 2013ರಲ್ಲಿ ಪ್ರಾಣಿ ಚಿತಾಗಾರ ನಿರ್ಮಾಣಕ್ಕೆ ಬಿಬಿಎಂಪಿ ಚಾಲನೆ ನೀಡಿತ್ತು. ನಗರದಲ್ಲಿ ಸತ್ತಪ್ರಾಣಿಗಳಿಂದ ಆಗುತ್ತಿರುವ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗ ತಡೆಯಲು ಚಿತಾಗಾರವನ್ನು ನಿರ್ಮಿಸಲಾಗಿದೆ. [ಮೇಯರ್ ಸಂದರ್ಶನ ಓದಿ]
ಯಾವ ಪ್ರಾಣಿ ಸುಡಬಹುದು : ಹಸು, ಎಮ್ಮೆ, ನಾಯಿ, ಬೆಕ್ಕು, ಪಾರಿವಾಳ, ಕೋತಿ ಸೇರಿದಂತೆ ಎಲ್ಲಾ ವಿಧವಾದ ಪ್ರಾಣಿಗಳನ್ನೂ ಚಿತಾಗಾರದಲ್ಲಿ ಸುಡಬಹುದಾಗಿದೆ. ದೊಡ್ಡಪ್ರಾಣಿಗಳ ಮೃತದೇಹವನ್ನು ಕತ್ತರಿಸಲು ಚಿತಾಗಾರದಲ್ಲಿ ಕಸಾಯಿಖಾನೆ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರ ಕೊಠಡಿಯನ್ನು ನಿರ್ಮಿಸಲಾಗುತ್ತಿದೆ.

ವಿದ್ಯುತ್ ಚಿತಾಗಾರಕ್ಕೆ ಜನರೇಟರ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ವಿದ್ಯುತ್ ಕೈ ಕೊಟ್ಟರೆ ಉಪಯೋಗವಾಗಲಿದೆ. ಪ್ರಾಣಿಗಳ ದೇಹ ಸುಟ್ಟು ಬೂದಿಯಾಗಲು ಸುಮಾರು ಎರಡು ಗಂಟೆ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಇಲ್ಲಿ ಸುಡುವ ಪ್ರಾಣಿಗಳಿಗೆ ಇಂತಿಷ್ಟು ಶುಲ್ಕ ವಿಧಿಸಲಾಗುತ್ತದೆ.
ಚಿತಾಗಾರ ಕಾರ್ಯಾರಂಭ ಮಾಡುತ್ತಿದ್ದಂತೆ ಸತ್ತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಸುಡುವ, ಹೂಳುವ ಪದ್ಧತಿಯನ್ನು ನಿಷೇಧಿಸುವ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಿದೆ. ನಗರದಲ್ಲಿ ಸತ್ತ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದು ಚಿತಾಗಾರಕ್ಕೆ ಕರೆದೊಯ್ಯುವ ಕೆಲಸವನ್ನು ಪಾಲಿಕೆಯೇ ನಿರ್ವಹಿಸಲಿದೆ.












Click it and Unblock the Notifications