Bengaluru rain: ಇಂದಿನಿಂದ ಸೆ.26ರ ತನಕ ನಗರದಲ್ಲಿ ಮಳೆ ಆರ್ಭಟ: ಮುನ್ಸೂಚನೆ
ಬೆಂಗಳೂರು, ಸೆಪ್ಟಂಬರ್ 20: ಬೆಂಗಳೂರಿನಲ್ಲಿ ಮಳೆ ಸಿಂಚನ ಮುಂದುವರಿದಿದ್ದು, ಆಗಾಗ ಮಳೆಯಾಗುತ್ತಿದೆ. ಇದು ಮುಂದಿನ ಸೆಪ್ಟಂಬರ್ 26ರವರೆಗೂ ಮುಂದುವರಿಯಲಿದೆ. ಇಂದು ಬುಧವಾರ ವಿವಿಧ ಪ್ರದೇಶಗಳಲ್ಲಿ ರಾತ್ರಿವರೆಗೂ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಇಂದಿನಿಂದ ಜೋರು ಮಳೆಯ ವಾತಾವರಣ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ಇದರಿಂದ ಮೂರು ದಿನದ ಗಣೇಶ ವಿಸರ್ಜನೆಗೆ ಸಂಜೆ ನಂತರ ತೊಂದರೆ ಆಗುವ ಸಾಧ್ಯತೆ ಗಳು ಇವೆ. ಕೆಲವೆಡೆ ಇಂದು ವ್ಯಾಪಕ ಮಳೆ ಸಾಧ್ಯತೆ ಇದೆ. ವಿವಿಧ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಬರಲಿದೆ.

ಇಂದು ಬೆಳಗ್ಗೆಯಿಂದಲೇ ಬಿಸಿಲಿನ ವಾತಾವರಣ ಜತೆ ಸೆಕೆಯ ವಾತಾವರಣವು ಕಂಡು ಬಂತು. ಇಂದು ಬಿಸಿಲಿನ ಝಳ ಹೆಚ್ಚಿತ್ತು. ಎರಡು ಮೂರು ದಿನಗಳಿಂದ ತಾಪಮಾನದಲ್ಲಿ ಏರಿಕೆ ಆಗಿದ್ದು, ಮಳೆ ಆಗಮನ ಹಿನ್ನೆಲೆಯಲ್ಲಿ ಮತ್ತೆ ತಾಪಮಾನದಲ್ಲಿ ಇಳಿಕೆ ಆಗುವ ಲಕ್ಷಣಗಳು ಇವೆ.
ತಾಪಮಾನದಲ್ಲಿ ಇಳಿಕೆ, ತಂಪು ವಾತಾವರಣ?
ಸೆಪ್ಟಂಬರ್ 26ರವರೆಗೆ ನಗರದಲ್ಲಿ ನಿತ್ಯವು ಒಂದಿಲ್ಲೋಂದು ಕಡೆ ಗುಡುಗು ಮಿಂಚು ಸಹಿತ ಉತ್ತಮ ಮಳೆ ಆಗಲಿದೆ. ಕೆಲವೆಡೆ ತುಂತುರು ಮಳೆ ಆಗಲಿದೆ. ಇದರಿಂದ ತಾಪಮಾನದಲ್ಲಿ ಇನ್ನಷ್ಟು ಇಳಿಕೆ ಆಗಿ ತಂಪು ಮತ್ತು ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ.

ನಿತ್ಯ ನಗರದಲ್ಲಿ ಗರಿಷ್ಠ ತಾಪಮಾನ 28-27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 20-21ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ಇನ್ನೂ ನೆನ್ನೆ ಮಂಗಳವಾರ ಸೆಪ್ಟಂಬರ್ 19ರಂದು ನಗರದ ವಿವಿಧೆಡೆ ಮಳೆ ಆಗಿದೆ. ಈ ಪೈಕಿ ಬಿಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಅಧಿಕ ಮಳೆ ಆಗಿದೆ. ದಾಸರಹಳ್ಳಿಯ ವಲಯದ ಬಾಗಲಗುಂಟೆಯಲ್ಲಿ 14ಮಿಲಿ ಮೀಟರ್, ಯಲಹಂಕ ವಲಯದ ದೊಡ್ಡಬೊಮ್ಮಸಂದ್ರ ಮತ್ತು ಯಶವಂತಪುರದ ಬಳಿ 12.5 ಮಿಲಿ ಮೀಟರ್ ಮಳೆ ಬಿದ್ದಿದೆ.
ರಾಜ್ಯದ ವಿವಿಧೆಡೆ ಮಳೆ ಅಬ್ಬರ
ಇನ್ನೂ ಕರ್ನಾಟಕದಲ್ಲಿ ಮುಂದಿನ ಒಂದು ವಾರದ ಕಾಲ ಅಲ್ಲಲ್ಲಿ ಉತ್ತಮ ಮಳೆ ಆಗಲಿದೆ. ಈ ಪೈಕಿ ಕರಾವಳಿಯಲ್ಲಿ ಮಳೆ ಸಕ್ರಿಯವಾಗಿದ್ದು, ಮೂರು ಜಿಲ್ಲೆಗಳಿಗೆ ನಾಳೆ ಗುರುವಾರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇತ್ತ ಒಳನಾಡು ಜಿಲ್ಲೆಗಳಲ್ಲೂ ಸಹ ಆಗಾಗ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.












Click it and Unblock the Notifications