ಲಿವ್-ಇನ್ ಸಂಗಾತಿಯನ್ನು ಪ್ರೆಶರ್ ಕುಕ್ಕರ್ನಿಂದ ಹೊಡೆದು ಕೊಂದ ಪಾಪಿ: ಬೆಂಗಳೂರಿನಲ್ಲಿ ಭಯಾನಕ ಕ್ರೈಮ್
ಬೆಂಗಳೂರು, ಆಗಸ್ಟ್ 28: ಲಿವ್-ಇನ್ ಸಂಗಾತಿಯನ್ನು ಪ್ರೆಶರ್ ಕುಕ್ಕರ್ ಹೊಡೆದು ಕೊಂದಿರುವ ಭಯಾನಕ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೇರಳ ಮೂಲಕ ಆರೋಪಿ ತನ್ನ ಸಂಗಾತಿಯನ್ನು ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಆರೋಪದ ಹಿನ್ನೆಲೆಯಲ್ಲಿ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಲಿವ್ ಇನ್ ಸಂಗಾತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಅನುಮಾನದಿಂದ ಈ ವ್ಯಕ್ತಿಯು ಅಪರಾಧ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇಬ್ಬರೂ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಜಗಳವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇರಳ ಮೂಲದ ವೈಷ್ಣವ್ ತನ್ನ ಲಿವ್ ಇನ್ ಸಂಗಾತಿ ದೇವಾ (24) ಮೇಲೆ ಹಲ್ಲೆ ನಡೆಸಿ ಕೊಲೆ ಗೈದಿದ್ದಾನೆ.
ಈ ಇಬ್ಬರು ಸುಮಾರು ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಕಾಲೇಜಿನಲ್ಲಿ ಓದುತ್ತಿರುವಾಗ ಪರಸ್ಪರ ಪ್ರೇಮಸಂಬಂಧ ಹೊಂದಿದ್ದರು. ಆ ಬಳಿಕ ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಲ್ಸ್ ಯಾಂಡ್ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಶನಿವಾರ ನಡೆದ ಜಗಳದಲ್ಲಿ ವೈಷ್ಣವ್ ಪ್ರೆಶರ್ ಕುಕ್ಕರ್ನಿಂದ ದೇವಾಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ದೇವಾ ಅವರ ಸಹೋದರಿ ದೂರವಾಣಿ ಕರೆ ಮಾಡಲು ಸಾಧ್ಯವಾಗದೆ ನೆರೆಹೊರೆಯವರನ್ನು ಸಂಪರ್ಕಿಸಿದ್ದಾರೆ. ಆಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ವೈಷ್ಣವ್ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಅವನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿರುವುದು ಪೋಷಕರಿಗೆ ತಿಳಿದಿತ್ತು ಎಂಬುದಾಗಿ ಪೊಲೀಸರು ಪತ್ತೆ ಮಾಡಿದ್ದಾರೆ.
ಇವರಿಬ್ಬರ ಜಗಳದ ಬಗ್ಗೆಯೂ ಅವರಿಗೆ ತಿಳಿದಿತ್ತು. ಇಬ್ಬರ ಸಮಸ್ಯೆಯನ್ನು ಪರಿಹರಿಸಲು ಪೋಷಕರು ಪ್ರಯತ್ನಿಸಿದ್ದರು. ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
'ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ನಾನು ಮಹಿಳೆಯ ಪೋಷಕರನ್ನು ಭೇಟಿ ಮಾಡಿದ್ದೇನೆ. ಕಳೆದ ಹಲವು ದಿನಗಳಿಂದ ಇಬ್ಬರು ಜಗಳವಾಡುತ್ತಿದ್ದರು ಎಂದು ಅವರು ನನಗೆ ಹೇಳಿದರು. ಕುಟುಂಬವು ಇಬ್ಬರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿತ್ತು' ಎಂದು ಬೆಂಗಳೂರು ದಕ್ಷಿಣದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಹೇಳಿದ್ದಾರೆ.
ವೈಷ್ಣವ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications