ಸಂಜಯ ನಗರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮೇಲೆ ಖಾಕಿ ಫೈರಿಂಗ್
ಬೆಂಗಳೂರು, ಮಾರ್ಚ್ 26: ನಗರದ ಸಂಜಯ ನಗರದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ಪೈಕಿ, ಒಬ್ಬನ ಕಾಲಿಗೆ ಪೊಲೀಸರು ಗುಂಡು ಹೊಡೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ, ಆರೋಪಿಗಳಲ್ಲಿ ಒಬ್ಬನಾದ ತಾಜುದ್ದೀನ್ ಎನ್ನುವಾತ, ಪೊಲೀಸರ ಮೇಲೆ ಕಲ್ಲು, ಇಟ್ಟಿಗೆ ಎಸೆದು ಪರಾರಿಯಾಗಲು ಯತ್ನಿಸಿದ್ದ.
ಈ ವೇಳೆ, ಸಂಜಯ ನಗರ ಠಾಣೆಯ ಬಾಲಾಜಿ, ತಾಜುದ್ದೀನ್ ಕಾಲಿಗೆ ಗುಂಡು ಹೊಡೆದು, ನಂತರ ಆತನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಮಹಿಳಾ ಪಿಎಸೈ ರೂಪಾ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ: ಬುಧವಾರ (ಮಾ 25) ದೇಶಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ನಾಖಾಬಂದಿ ಹಾಕಿ ಸಂಜಯ ನಗರ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಜೊತೆಗೆ, ಮನೆಯಿಂದ ಹೊರಗೆ ಬರದಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ತಾಜುದ್ದೀನ್ (25) ಮತ್ತು ಕುತುಬುದ್ದೀನ್ (25) ಎನ್ನುವ ಕಿಡಿಗೇಡಿಗಳು, ಪೊಲೀಸರನ್ನು ಕೆಳಕ್ಕೆ ತಳ್ಲಿ, ಹಲ್ಲೆ ನಡೆಸಿದ್ದರು. ಈ ಕೃತ್ಯ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿತ್ತು.
"ಇದು ಇಬ್ಬರು ನಮ್ಮ ಸಹದ್ಯೋಗಿಗಳಿಗೆ ಮಾಡಿದ ಅವಮಾನವಲ್ಲ. ಇಡೀ ಪೊಲೀಸ್ ಸಮೂಹಕ್ಕೆ. ಇಬ್ಬರು ಪೊಲೀಸರಿಗೆ ಮಾತ್ರ ಹೊಡೆದದ್ದಲ್ಲ, ಇಡೀ ಪೊಲೀಸ್ ಸಮುದಾಯಕ್ಕೆ. ಇವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ" ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದರು.












Click it and Unblock the Notifications