ಕೊರೊನಾ : ಬೆಂಗಳೂರಿನ ಐತಿಹಾಸಿಕ ಕರಗ ರದ್ದು
ಬೆಂಗಳೂರು, ಮಾರ್ಚ್ 30 : ಬೆಂಗಳೂರು ನಗರದ ಐತಿಹಾಸಿಕ ಕರಗ ಉತ್ಸವ ಈ ಬಾರಿ ನಡೆಯುವುದಿಲ್ಲ. ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಕರಗ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 2020ರ ಕರಗ ಉತ್ಸವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹಲವಾರು ದಿನದಿಂದ ಕರಗ ಉತ್ಸವ ನಡೆಯುವ ಕುರಿತು ಗೊಂದಲ ಉಂಟಾಗಿತ್ತು. ಇಂದು ಗೊಂದಲಕ್ಕೆ ತೆರೆ ಬಿದ್ದಿದೆ.
ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಕೆಲವು ದಿನಗಳ ಹಿಂದೆ ಬೆಂಗಳೂರು ಕರಗ ನಡೆಯುವ ಸ್ಥಳಗಳ ಪರಿಶೀಲನೆ ನಡೆಸಿದ್ದರು. ದೇವಾಲಯ ಮತ್ತುಸುತ್ತಮುತ್ತಲಿನ ಸ್ಥಳಗಳಲ್ಲಿ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಿದ್ದರು.

ಮೇಯರ್ ಗೌತಮ್ ಕುಮಾರ್ ಕರಗ ಆಚರಣೆ ಸಮಿತಿ ಜೊತೆ ಸಭೆಗಳನ್ನು ನಡೆಸಿದ್ದರು. ಕರಗ ಆಚರಣೆ ಮಾಡಲು ಸಿದ್ಧತೆಗಳು ಸಹ ನಡೆದಿತ್ತು. ಏಪ್ರಿಲ್ 8ರಂದು ಐತಿಹಾಸಿಕ ಬೆಂಗಳೂರು ಕರಗ ನಡೆಯಬೇಕಿತ್ತು. ಈಗ ಜಿಲ್ಲಾಧಿಕಾರಿಗಳು ಕರಗ ರದ್ದುಗೊಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕಡಲೆಕಾಯಿ ಪರಿಷೆಯಂತೆ ಕರಗವೂ ಪ್ರಸಿದ್ಧಿ ಪಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಗೆ ಹತ್ತಿರದಲ್ಲೇ ಇರುವ ನಗರ್ತ ಪೇಟೆಯಲ್ಲಿರುವ ಪುರಾತನ ಧರ್ಮರಾಯನ ದೇವಾಲಯದಲ್ಲಿ ಕರಗ ನಡೆಯುತ್ತದೆ.
ಪ್ರತಿ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ನಡೆಯುವ ಕರಗವನ್ನು ಹೂವಿನ ಕರಗ, ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ. ಸಾವಿರಾರು ಜನರು ರಾತ್ರಿ ಇಡೀ ನಡೆಯುವ ಕರಗ ನೋಡಲು ಸೇರುತ್ತಾರೆ.












Click it and Unblock the Notifications