ಯುವತಿಯನ್ನು ಅಶ್ಲೀಲವಾಗಿ ಚಿತ್ರಿಸಿ ಬ್ಲಾಕ್ ಮೇಲ್: ಟ್ರೋಲ್ ಅಡ್ಮಿನ್ ಸೆರೆ
ಬೆಂಗಳೂರು, ಸೆ. 21: ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಪ್ರೇಜ್ ಮಾಡಿಕೊಂಡು ಹೆಣ್ಣು ಮಕ್ಕಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಪ್ರೀತಿಸುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ ಟ್ರೋಲ್ ಪೇಜ್ ಅಡ್ಮಿನ್ನನ್ನು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಲ್ಬರ್ಗಾ ಮೂಲದ ಅವಿನಾಶ್ (26) ಬಂಧಿತ ಆರೋಪಿ. ಕಲಬುರಗಿ ಜಿಲ್ಲೆಯ ಈತ ಐಟಿಐನಲ್ಲಿ ಎಲೆಕ್ಟ್ರಿಯೇಷನ್ ಮಾಡಿದ್ದು, ಎಲೆಕ್ಟ್ರಿಯೇಷನ್ ಅಗಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ. ಕೊರೊನಾ ಲಾಕ್ ಡೌನ್ ಬಳಿಕ ಕೆಲಸ ಬಿಟ್ಟು ಇನ್ಸ್ಟಾ ಗ್ರಾಮ್ನಲ್ಲಿ ಗುಡ್ಬಾಯ್ ಬ್ಯಾಡ್ಟ್ರೋಲ್ ಟ್ರೋಲ್ ಸೃಷ್ಟಿಸಿ ಪೇಜ್ ನಿರ್ವಹಣೆ ಮಾಡುತ್ತಿದ್ದ. ರಿಪ್ ಅಭಿ ಎನ್ನುವ ಖಾತೆ ಮೂಲಕ ಅಶ್ಲೀಲ ಪೋಸ್ಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದ.
ಟ್ರೋಲ್ ಪೇಜ್ ಮೂಲಕ ಪರಿಚಯವಾದ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ ಅವಿನಾಶ್ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕಿದ್ದ. ಇದಕ್ಕೆ ಒಪ್ಪದೇ ಈದ್ದಾಗ ಆಕೆಯ ಭಾವಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ, ಅವಾಚ್ಯ ಪದಗಳಿಂದ ನಿಂದನೆ ಮಾಡುವ ವಿಡಿಯೋ ಮಾಡಿ ಯುವತಿ ಹಾಗೂ ಯುವತಿ ಪೋಷಕರ ಮೊಬೈಲ್ಗೆ ರವಾನೆ ಮಾಡಿದ್ದ. ಈ ಕುರಿತು ಯುವತಿಯ ಪೋಷಕರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಯುವತಿಗೆ ಪ್ರೀತಿಸುವಂತೆ ಮನವಿ ಮಾಡಿದ್ದ
ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಯುವತಿಗೆ ಪ್ರೀತಿಸುವಂತೆ ಮನವಿ ಮಾಡಿದ್ದ. ಇದನ್ನು ತಿರಸ್ಕರಿಸಿದ ಯುವತಿಯ ಹಾಗೂ ಯುವತಿ ತಾಯಿ ಮತ್ತು ಸಹೋದರನ ಭಾವಚಿತ್ರಗಳನ್ನು ಅಶ್ಲಿಲವಾಗಿ ಚಿತ್ರಿಸಿ ಅವಿನಾಶ್ ತನ್ನ ಇನ್ಸ್ಟಾ ಗ್ರಾಂ ಟ್ರೋಲ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದ. ಅಲ್ಲದೇ ಯುವತಿಯ ಜನ್ಮ ದಿನದಂದು ಮತ್ತಷ್ಟು ಅಶ್ಲೀಲ ಪೋಸ್ಟ್ ರಚನೆ ಮಾಡಿ ನೀನು ನನ್ನನ್ನು ಪ್ರೀತಿಸದಿದ್ದರೆ ಇವನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆ
''ಮಾತ್ರವಲ್ಲದೇ ಟ್ರೋಲ್ ಪೇಜ್ಗಳ ಆಡ್ಮಿನ್ಗಳನ್ನು ಪರಿಚಯಿಸಿಕೊಂಡು, ವಾಟ್ಸಪ್ ಮೂಲಕ ಗ್ರೂಪ್ ಮಾಡಿಕೊಂಡು, ಟ್ರೋಲ್ ಮಾಡಿ ಮಾನ ಹರಾಜು ಹಾಕುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಈತನ ವಿರುದ್ಧ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಆಗ್ನೇಯ ವಿಭಾಗದ ಪೊಲೀಸರು ಕಲಬುರ್ಗಿಯಲ್ಲಿದ್ದ ಅವಿನಾಶ್ ನನ್ನು ಬಂಧಿಸಿದ್ದಾರೆ. ಈತನಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಅತನಿಗಾಗಿ ಶೋಧ ನಡೆಸಲಾಗುತ್ತಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರೋಲ್ ಪೇಜ್ ಪಾವತಿ ದಂಧೆ
''ಇತ್ತೀಚೆಗೆ ತಮಗೆ ಆಗದವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮರ್ಯಾದೆ ತೆಗೆಯಲೆಂದೇ ಹಲವು ಟ್ರೋಲ್ ಪೇಜ್ಗಳು ಹುಟ್ಟಿಕೊಂಡಿವೆ. ಹಣ ಕೊಟ್ಟು ತಮಗೆ ಆಗದವರ ಬಗ್ಗೆ ವಿವರ ನೀಡಿದರೆ, ಅವರ ಭಾವಚಿತ್ರಗಳನ್ನು ಅಶ್ಲೀಲವಾಗಿ ಬಿತ್ತರಿಸಿ ಮರ್ಯಾದೆ ತೆಗೆಯಲೆಂದೇ ಹಲವು ಟ್ರೋಲ್ ಪೇಜ್ಗಳು ಹುಟ್ಟಿಕೊಂಡಿವೆ. ಹಣ ಪಡೆದು ಮರ್ಯಾದೆ ಹಾಳು ಮಾಡುವ ಕಾರ್ಯದಲ್ಲಿ ತೊಡಗಿರುವ ಟ್ರೋಲ್ ಪೇಜ್ಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಸೈಬರ್ ಅಪರಾಧ ಎಂದು ಗೊತ್ತಿದ್ದರೂ ಹಣಕ್ಕಾಗಿ ಈ ಕೃತ್ಯದಲ್ಲಿ ತೊಡಗಿದ್ದು, ಬೆಂಗಳೂರು ಸೈಬರ್ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಟ್ರೋಲ್ ಪೇಜ್ಗಳ ಮೇಲೆ ನಿಗಾ ವಹಿಸಬೇಕಿದೆ,'' ಎಂದು ಸೈಬರ್ ತಜ್ಞ ನಾ. ವಿಜಯಶಂಕರ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
Recommended Video

ಟ್ರೋಲ್ ಪೇಜ್ಗಳ ಬಗ್ಗೆ ಪೊಲೀಸರು ನಿಗಾ
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಸಿಂಧೂರಿ ಅವರ ಪತಿ ಹಣ ಕೊಟ್ಟು ಐಪಿಎಸ್ ಅಧಿಕಾರಿ ರೂಪಾ ಅವರ ಮರ್ಯಾದೆ ತೆಗೆಯುವಂತೆ ಟ್ರೋಲ್ ಪೇಜ್ ಅಡ್ಮಿನ್ಗಳನ್ನು ಸಂಪರ್ಕಿಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಅವರೇ ಬಹಿರಂಗ ಪಡಿಸಿದ್ದರು. ಇದೀಗ ಅವಿನಾಶ್ ಬಂಧನ ಪ್ರಕರಣದಲ್ಲಿ ಅದು ಸಾಬೀತಾಗಿದ್ದು, ದುರುದ್ದೇಶ ಪೂರ್ವಕವಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಟ್ರೋಲ್ ಪೇಜ್ಗಳ ಬಗ್ಗೆ ಪೊಲೀಸರು ನಿಗಾ ವಹಿಸಬೇಕಿದೆ.












Click it and Unblock the Notifications