ಚಾಲಕರೇ,ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ
ಬೆಂಗಳೂರು, ಸೆಪ್ಟೆಂಬರ್, 22 : ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ರಾಜ್ಯಾದ್ಯಂತ ಕಡ್ಡಾಯಗೊಳಿಸಲು ಚಿಂತನೆ ನಡೆಸಿರುವ ಸರ್ಕಾರ, ಹಿಂಬದಿಯ ಸವಾರರಿಗೂ ಈ ನಿಯಮವನ್ನು ಅನ್ವಯಿಸಲು ಮುಂದಾಗಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.
ಸಾರಿಗೆ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಸರ್ಕಾರ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ ನಿಯಮ 230(1)ಕ್ಕೆ ತಿದ್ದುಪಡಿ ತರುವ ಕರಡು ರೂಪಿಸಿ ದ್ವಿಚಕ್ರ ವಾಹನ ಚಾಲಕ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲು ತೀರ್ಮಾನ ತೆಗೆದುಕೊಂಡಿದೆ.[ತುಮಕೂರು ತಲೆಗಳಿಗೆ ಇವತ್ತಿನಿಂದ ಶಿರಸ್ತ್ರಾಣ ಕಡ್ಡಾಯ]
ಕರ್ನಾಟಕ ಸರ್ಕಾರ 2005 ರಿಂದಲೇ ತುಮಕೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮಂಗಳೂರು, ಬೆಳಗಾವಿ, ಶಿವಮೊಗ್ಗ ಇನ್ನಿತರ ಜಿಲ್ಲೆಗಳಲ್ಲಿ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿತ್ತು. ಇದೀಗ ಸರ್ಕಾರ ಈ ನಿಯಮವನ್ನು ರಾಜ್ಯಾದ್ಯಾಂತ ವಿಸ್ತರಿಸುವ ನಿರ್ಣಯಕ್ಕೆ ಬಂದಿದ್ದು, ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆ ಕಡ್ಡಾಯವಾಗಲಿದೆ.
ನಗರದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಬೇಕೆಂಬ ಮಾತು 2013ರಿಂದಲೇ ಕೇಳಿ ಬರುತ್ತಿತ್ತು. ಆದರೆ ಸಾರ್ವಜನಿಕರಿಂದ ಈ ನಿಯಮಕ್ಕೆ ವಿರೋಧ ವ್ಯಕ್ತವಾದ ಪರಿಣಾಮ ಸರ್ಕಾರ ಇದನ್ನು ಜಾರಿಗೆ ತರಲು ವಿಳಂಬ ಮಾಡಿತ್ತು. ಬಳಿಕ 2014ರಲ್ಲಿ ಸರ್ಕಾರಕ್ಕೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿ 2015ರ ಜನವರಿಯಿಂದ ಈ ನಿಯಮ ಜಾರಿಗೆ ತರಲು ಅನುಮತಿ ನೀಡುವಂತೆ ಕೋರಿತ್ತು.[ಬೈಕ್ ಸವಾರರ ತಲೆಗೆ 'ಹೆಲ್ಮೆಟ್' ಹಾಕಿದ ಸರ್ಕಾರ!]
ಈ ವಿಚಾರದ ಕುರಿತಾಗಿ ಸಾರಿಗೆ ಇಲಾಖೆ ಈ ವರ್ಷ ಪುನಃ ಪ್ರಸ್ತಾವನೆ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ನ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ದ್ವಿಚಕ್ರ ವಾಹನ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಬೇಕಿದೆ. ಆದ್ದರಿಂದ ಜೂನ್ 30ರೊಳಗೆ ಅಧಿಸೂಚನೆ ಹೊರಡಿಸಲು ಅನುಮತಿ ನೀಡಬೇಕು ಎಂದು ಕೇಳಿತ್ತು. ಹೆಚ್ಚಿನ ಮಾಹಿತಿ ಹಾಗೂ ಆಕ್ಷೇಪಣೆಗಳಿಗಾಗಿ http://rto.kar.nic.in/Helpcss.html ಸಂಪರ್ಕಿಸಬಹುದು.