ಬೆಂಗಳೂರು: ಎಚ್ಎಎಲ್ ಜಂಕ್ಷನ್ ಅಂಡರ್ಪಾಸ್ ಡಿಸೆಂಬರ್ಗೆ ಪೂರ್ಣ
ಬೆಂಗಳೂರು, ನವೆಂಬರ್ 09: ಬೆಂಗಳೂರಿನ ಮಾರತ್ತಹಳ್ಳಿ ಮತ್ತು ಎಚ್ಎಎಲ್ ಜಂಕ್ಷನ್ನ ಸುರಂಜನ್ ದಾಸ್ ರಸ್ತೆಯಲ್ಲಿ ಬಿಬಿಎಂಪಿ ನಡೆಸುತ್ತಿರುವ ರಸ್ತೆ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ಇದೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.
ಹೆಚ್ಚು ಜನರು ಓಡಾಡಲು ಅಗತ್ಯವಾಗಿರುವ ಈ ರಸ್ತೆ ಅಂಡರ್ಪಾಸ್ ಕಾಮಗಾರಿ ಪೂರ್ಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.
ಈ ಭಾಗದಲ್ಲಿ ಸಾರ್ವಜನಿಕ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಅಂಡರ್ಪಾಸ್ ನಿರ್ಮಿಸಲಾಗುತ್ತಿತ್ತು. ಆದರೆ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಅಂಡರ್ಪಾಸ್ನಲ್ಲಿ ಹೂಳು ತುಂಬಿಕೊಂಡಿತ್ತು. ಹೀಗಾಗಿ ಈ ನಿರ್ಮಾಣ ಯೋಜನೆ ಒಂದೂವರೆ ತಿಂಗಳು ವಿಳಂಬವಾಗಿದೆ.
ಬೆಂಗಳೂರಿಗೆ ಪ್ರಧಾನಿ ಭೇಟಿ: ರಸ್ತೆಗುಂಡಿ ಮುಚ್ಚಲು ಮುಂದಾದ ಬಿಬಿಎಂಪಿ, ಎಎಪಿ ವ್ಯಂಗ್ಯ
ಸದ್ಯ ಕಾಮಗಾರಿಯಲ್ಲಿ ಬಾಕ್ಸ್ಗಳನ್ನು ಜೋಡಿಸುವ, ಕಾಂಕ್ರೀಟು ಹಾಕು ಪ್ರಕ್ರಿಯೆ ನಡೆಯುತ್ತಿದೆ. ಇದು ಮುಂದಿನ 10 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರ ಅಂಡರ್ಪಾಸ್ ಮೇಲೆ ವಾಹನಗಳು ಸರಾಗವಾಗಿ ಸಾಗಲಿವೆ. ಹಳೆ ವಿಮಾನ ನಿಲ್ದಾಣದಿಂದ ಮಾರತ್ತಹಳ್ಳಿ ಕಡೆಗೆ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಸಿಗ್ನಲ್ನಲ್ಲಿ ನಿಮಿಷಗಳಗಟ್ಟಲೇ ಕಾಯಬೇಕಾಗಿಲ್ಲ. ಮಾರತಹಳ್ಳಿ ಕಡೆಯಿಂದ ಬರುವ ವಾಹನಗಳು ಮತ್ತು ಸುರಂಜನ್ ದಾಸ್ ರಸ್ತೆಗೆ ಪ್ರವೇಶಿಸುವ ವಾಹನಗಳಿಗೆ ಉಚಿತ ಎಡ ತಿರುವು ಕಲ್ಪಿಸಲಾಗಿದೆ.
ರಸ್ತೆ ಅಂಡರ್ಪಾಸ್ ನಿರ್ಮಾಣವನ್ನು ದೀಪಾವಳಿ ಹಬ್ಬದೊಳಗೆ ಪೂರ್ಣಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಗುರಿ ಇಟ್ಟುಕೊಂಡಿದ್ದೆವು. ಆದರೆ ಮಳೆಯಿಂದಾಗಿ ಕಾಮಗಾರಿ ವಿಳಂಬವಾಯಿತು. ಮಳೆಯಿಂದ ಹೂಳು ತುಂಬಿದ ಮಣ್ಣು ತೆಗೆಯುವ ಯಂತ್ರ ಹಾಗೂ ಕ್ರೇನ್ ಜೇಡಿಮಣ್ಣಿನಲ್ಲಿ ಸಿಲುಕಿ ಕಾಮಗಾರಿ ನಿಧಾನವಾಯಿತು ಎಂದು ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದರು.
19 ಕೋಟಿ ರೂ. ವೆಚ್ಚದ ಕಾಮಗಾರಿ
ಒಟ್ಟು 19 ಕೋಟಿ ರೂ. ರಸ್ತೆ ಅಂಡರ್ಪಾಸ್ ಯೋಜನೆ ಇದಾಗಿದ್ದು, ಅದನ್ನು ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಲೋಕೇಶ್ ಅವರು ಗಡುವು ನಿಗದಿಪಡಿಸಿದ್ದಾರೆ. ಕೆಲವು ಸಮಸ್ಯೆಗಳ ಮಧ್ಯೆ ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಯಿತು. ಇದಕ್ಕಾಗಿ ಬಿಬಿಎಂಪಿ 3,100 ಚದರ ಮೀಟರ್ ಹೆಚ್ಚುವರಿ ಜಾಗ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮುಂದಿನ 40ರಿಂದ 50 ದಿನಗಳಲ್ಲಿ ಅಂಡರ್ಪಾಸ್ ಕೆಲಸ ಪೂರ್ಣಗೊಳ್ಳಲಿದೆ.
ಮಾರತ್ತಹಳ್ಳಿ, ಎಚ್ಎಎಲ್ ಭಾಗದಲ್ಲಿ ನಿತ್ಯ ಸಾವಿರಗಟ್ಟಲೆ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯ ವಾಹನಸವಾರರಿಗೆ ಪ್ರಮುಖ ಮಾರ್ಗವಾಗಿದ್ದು, ವರ್ಷಗಳಿಂದಲೂ ಇಲ್ಲಿನ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದಕ್ಕೆ ಬಿಬಿಎಂಪಿ ವಿರುದ್ಧ ವಾಹನಸವಾರರು ಆಕ್ರೋಶ ಹೊರಹಾಕಿದ್ದು, ತ್ವರಿತಗತಿಯಲ್ಲಿ ಕೆಲಸ ಮುಗಿಸುವಂತೆ ಒತ್ತಾಯಿಸಿದ್ದರು.