ಚಿಗರನಹಳ್ಳಿಯಲ್ಲಿ ಸಂಸ್ಕರಣಗೊಳ್ಳುತ್ತಿದೆ ಬೆಂಗಳೂರಿನ ಕಸ
ಬೆಂಗಳೂರು, ನ. 11: ನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ಕಸಗಳನ್ನು ಡೊಡ್ಡಬಳ್ಳಾಪುರ ತಾಲೂಕಿನ ಚಿಗರನಹಳ್ಳಿಯಲ್ಲಿರುವ ಕಸ ಸಂಸ್ಕರಣ ಘಟಕಕ್ಕೆ ಕಳುಹಿಸಲಾಗುತ್ತಿದೆ. ಕಳೆದ 20 ದಿನಗಳಿಂದ ಪ್ರತಿದಿನ 450 ಟನ್ಗಳಷ್ಟು ನಗರದ ಕಸವನ್ನು ಇಲ್ಲಿ ಸಂಸ್ಕರಣಗೊಳಿಸಲಾಗುತ್ತಿದೆ.
ಎಂಎಸ್ಜಿಪಿ ಇನ್ಫ್ರಾಟೆಕ್ ಪ್ರೈ.ಲಿ. ಸಂಸ್ಥೆಯು 15 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ನಿರ್ಮಿಸಿದೆ. ಶೆಡ್ ಒಂದರಡಿ ಇಂಜಿನಿಯರ್ಗಳಂತೆ ಹಳದಿ ಟೋಪಿ ಹಾಕಿಕೊಂಡು ಬೂಟು ಧರಿಸಿ, ಮುಖಕ್ಕೊಂದು ಮುಸುಕು ಧರಿಸಿ ದುಡಿಯುವ ಕೆಲಸಗಾರರು ನಿರಂತರವಾಗಿ ಕಸ ಸಂಸ್ಕರಿಸುತ್ತಿರುವ ಹಿನ್ನೆಲೆಯಲ್ಲಿ ನೂರಾರು ಟನ್ಗಳಷ್ಟು ಕಸ ಪ್ರತಿದಿನ ಸಂಸ್ಕರಣೆಗೊಳ್ಳುತ್ತಿದೆ.
ಸಂಸ್ಕರಣೆ ಸಾಮರ್ಥ್ಯ 500 ಟನ್ಗೆ: ಮಂಡೂರಿಗೆ ಕಸ ಸಾಗಿಸಲು ಪಡೆದಿರುವ ಕಾಲಾವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಘಟಕದ ಸಾಮರ್ಥ್ಯ ಹೆಚ್ಚಿಸುವತ್ತ ಗಮನ ಹರಿಸಿದೆ. ನವೆಂಬರ್ ಅಂತ್ಯದ ವೇಳೆಗೆ ದಿನಕ್ಕೆ 500 ಟನ್ಗಳಷ್ಟು ಕಸ ಸಂಸ್ಕರಿಸಬಹುದೆಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. [ಕಸದ ಸಮಸ್ಯೆ ಬಗೆಹರಿಸಲು ಸ್ಯಾನ್ ಫ್ರಾನ್ಸಿಸ್ಕೋ ನೆರವು]
"ಇದೇ ಪ್ರಥಮ ಬಾರಿಗೆ ಮುಚ್ಚಿದ ಶೆಡ್ನಲ್ಲಿ ಗೊಬ್ಬರ ತಯಾರಿಸಲಾಗುತ್ತಿದೆ. ಮೊದಲು ಯಂತ್ರದ ಮೂಲಕ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ನಂತರ ತೇವಮಯ ವ್ಯರ್ಥವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಶೀಘ್ರದಲ್ಲಿ ಗೊಬ್ಬರ ತಯಾರಿಸಲು ಮಣ್ಣನ್ನು ಉಪಯೋಗಿಸಲಾಗುತ್ತದೆ. ಗೊಬ್ಬರ ತಯಾರಿಕೆ ಪ್ರಕ್ರಿಯೆಯನ್ನು ಸಿಮೆಂಟ್ ನೆಲದ ಮೇಲೆ ನಡೆಸಲಾಗುವ ಕಾರಣ ಮಣ್ಣು ಮಾಲಿನ್ಯ ಉಂಟಾಗುವ ಭೀತಿ ಇಲ್ಲ" ಎಂದು ಯೋಜನಾ ವ್ಯವಸ್ಥಾಪಕ ಪುಷ್ಕರ್ ವಿವರಿಸಿದ್ದಾರೆ. [ಕಸದ ಸಮಸ್ಯೆ ನಿವಾರಣೆಗೆ ಆರು ತಿಂಗಳ ಗಡುವು]
"ಪ್ಲಾಸ್ಟಿಕ್, ಗಾಜು ಹಾಗೂ ಲೋಹಗಳನ್ನು ಪುನರ್ ಬಳಕೆಗೆ ಕಳುಹಿಸಲಾಗುವುದು. ಉಳಿದ ಕಸಗಳನ್ನು ಪುನಃಸಂಪಾದಿಸಿದ ಇಂಧನವಾಗಿ ಪರಿವರ್ತಿಸಿ ಕಾರ್ಖಾನೆಗಳಿಗೆ ಮಾರಲಾಗುವುದು" ಎಂದು ಅವರು ತಿಳಿಸಿದ್ದಾರೆ.
ವೈಜ್ಞಾನಿಕ ನೆಲಭರ್ತಿ ಸ್ಥಾಪನೆ: "ನಿಷ್ಕ್ರಿಯ ವಸ್ತುಗಳನ್ನು ವಿಲೇವಾರಿ ಮಾಡಲು ವೈಜ್ಞಾನಿಕ ನೆಲಭರ್ತಿಯನ್ನು ಸ್ಥಾಪಿಸಲಾಗುವುದು. ಈ ನೆಲಭರ್ತಿಯ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಮನೆ, ನಿವಾಸ ಇರುವುದಿಲ್ಲ" ಎಂದು ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಲಾಲ್ ತಿಳಿಸಿದ್ದಾರೆ.
ಕೇವಲ ಮೂರು ತಿಂಗಳಲ್ಲಿ ಈ ಕಸ ಸಂಸ್ಕರಣ ಘಟಕವನ್ನು ಸ್ಥಾಪಿಸಲಾಗಿದೆ. ಶೆಡ್ನಲ್ಲಿ ಕಸ ಸಂಸ್ಕರಣ ಮಾಡುಲಾಗುತ್ತಿದ್ದು, ದುರ್ನಾತದ ಸಮಸ್ಯೆ ಇದುವರೆಗೆ ಕಾಡಿಲ್ಲ. ಭವಿಷ್ಯದಲ್ಲಿ ಅಗತ್ಯಬಿದ್ದರೆ ಕಸ ಸಂಸ್ಕರಣೆ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.