Bengaluru Rains : ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ
ಬೆಂಗಳೂರು, ಸೆಪ್ಟಂಬರ್ 12: ಬೆಂಗಳೂರಿನಲ್ಲಿ ಮಳೆ ನೀರು ಹರಿಯಲು ಅಡ್ಡಿ ಪಡಿಸಿದ ಒತ್ತುವರಿಗಳನ್ನು ತೆರವು ಮಾಡಿ ನಂತರ ಒತ್ತುವರಿದಾರರಿಂದಲೇ ತೆರವಿನ ಖರ್ಚುವೆಚ್ಚ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮುಂದುವರಿಸಿದ್ದಾರೆ. ಮಹಾದೇವಪುರ, ಮಾರತ್ತಹಳ್ಳಿ, ಮುನ್ನೇಕೊಳಲು ಭಾಗದಲ್ಲಿ ಜೆಸಿಬಿಗಳು ಒತ್ತುವರಿ ಜಾಗದಲ್ಲಿ ತಲೆ ಎತ್ತಿರುವ ಕಟ್ಟಡಗಳನ್ನು ತೆರವುಗೊಳಿವೆ. ಸದ್ಯ ತೆರವು ಮಾಡುವ ಖರ್ಚನ್ನು ಬಿಬಿಎಂಪಿಯೇ ಭರಿಸಲಿದೆ. ನಂತರ ಒತ್ತುವರಿ ತೆರವು ಬಗ್ಗೆ ಸಂಪೂರ್ಣ ಖರ್ಚು ವೆಚ್ಚದ ವರದಿ ತಯಾರಿಸಿ ನಂತರ ಒತ್ತುವರಿದಾರರಿಂದಲೇ ತೆರವಿನ ಸಂಪೂರ್ಣ ಖರ್ಚನ್ನು ವಸೂಲಿ ಮಾಡುವ ಚಿಂತನೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸುರಿದಿದ್ದ ಬಡಾವಣೆಗಳು, ರಸ್ತೆಗಳು ಜಲಾವೃತಗೊಂಡ ಬಳಿಕ ಮುಖ್ಯಮಂತ್ರಿಗಳ ಸ್ವತಃ ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಒತ್ತುವರಿ ತೆರವಿಗೆ ಸೂಚಿಸಿದ್ದರು. ಮಳೆ ಹಾನಿ, ಪ್ರವಾಹ ಸಂಬಂಧ ಬೆಂಗಳೂರು ನಗರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಸೆಪ್ಟೆಂಬರ್ 1ರಿಂದಲೇ ಸಮೀಕ್ಷೆ ಜತೆಗೆ ತೆರವು ಕಾರ್ಯ ಆರಂಭಿಸಿದ್ದಾರೆ.

ಸೋಮವಾರದಂದು ಮಹದೇವಪುರ ವಲಯದ ಬಸವನಗರದಲ್ಲಿ ಗೋಪಾಲನ್ ಕಾಲೇಜು ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿ ಆಗಿದೆ. ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಆಡಳಿತ ಮಂಡಳಿ ಮೈದಾನ ನಿರ್ಮಾಣ ಮಾಡಿತ್ತು. ಹೀಗಾಗಿ ಇಲ್ಲಿ ಮಳೆ ಬಂದಾಗಲೆಲ್ಲ ಒತ್ತುವರಿ ಸ್ಥಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಬಿಬಿಎಂಪಿ ಜೆಸಿಬಿ ಸಹಾಯದಿಂದ ಆ ಸ್ಥಳವನ್ನು ತೆರವುಗೊಳಿಸಿದೆ.
34 ಕಡೆ ಒತ್ತುವರಿ ತೆರವು, 20ಕಡೆ ತೆರವಿಗೆ ಮಾರ್ಕಿಂಗ್
ಅದೇ ರೀತಿ ಮುನ್ನೇಕೊಳಲುನಲ್ಲಿ ಚಿನ್ನಪ್ಪನಹಳ್ಳಿ ಕೆರೆಯಿಂದ ಹೋಗುವ ರಾಜಕಾಲುವೆ ಅಕ್ಕಪಕ್ಕದ ಒತ್ತುವರಿ ಕಟ್ಟಡಗಳನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ. ಒತ್ತುವರಿ ಪ್ರದೇಶದಲ್ಲಿ ಹರಡಿಕೊಂಡಿದ್ದ ಮನೆ, ಕಟ್ಟಡಗಳು, ಅಂಗಡಿ ಮುಂಗಟ್ಟು, ಕಾಂಪೌಂಡು ಗಳನ್ನು ಒಡೆದು ಹಾಕಲಾಗಿದೆ. ರಾಜಕಾಲುವೆ ಮೇಲೆ ಕಟ್ಟಲಾಗಿದ್ದ ಮೆಡಿಕಲ್ ಮಳಿಗೆಯನ್ನು ಅಧಿಕಾರಿಗಳು ಮುಲ್ಲಾಜಿಲ್ಲದೇ ತೆರವು ಮಾಡಿ ಖಡಕ್ ಸಂದೇಶ ರವಾನಿಸಿದ್ದಾರೆ.

ಇದರೊಂದಿಗೆ ಮಾರತ್ತಹಳ್ಳಿ, ಚಲಘಟ್ಟ ಸೇರಿಂತೆ ವಿವಿಧೆಡೆ ತೆರವು ನಡೆದಿದೆ. ಮುನ್ನೇಕೊಳಲು ಸುತ್ತಮುತ್ತ ತೆರವಿಗಾಗಿ ಸುಮಾರು 20ಕಟ್ಟಡಗಳನ್ನು ಗುರುತಿಸಲಾಗಿದೆ. ಇನ್ನು ಕೆಲವೆಡೆ ಬಿಬಿಎಂಪಿ ಒತ್ತುವರಿ ಸ್ಥಳವನ್ನು ಮಾರ್ಕಿಂಗ್ ಮಾಡಲಾಗುತ್ತಿದೆ. ಸೆಪ್ಟಂಬರ್ 1ರಿಂದ 9ರವರೆಗೆ ಬಿಬಿಎಂಪಿಯು ವಿದ್ಯಾರಣ್ಯಪುರ ವಾರ್ಡ್, ವರ್ತೂರು, ಬೆಳ್ಳಂದೂರು, ಬೊಮ್ಮನಹಳ್ಳಿ, ಜೆಪಿ ನಗರ ವ್ಯಾಪ್ತಿಯಲ್ಲಿ ಒಟ್ಟು 34 ಕಡೆಗಳಲ್ಲಿ ಒತ್ತುವರಿ ತೆರವು ಮಾಡಿದೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.












Click it and Unblock the Notifications