ರೆಸ್ಟೋರೆಂಟ್ ಗಳ ಪರಿಶೀಲನೆಗೆ ಅಗ್ನಿ ಶಾಮಕ ಇಲಾಖೆ ಸೂಚನೆ
ಬೆಂಗಳೂರು, ಡಿಸೆಂಬರ್ 30 : ಮುಂಬೈನ ಕಮಲ ಮಿಲ್ಸ್ ಕಟ್ಟಡದ ಮೇಲಿನ ಪಬ್ ನಲ್ಲಿ ನಡೆದ ಅಗ್ನಿ ದುರಂತದ ನಂತರ ಎಚ್ಚೆತ್ತ ರಾಜ್ಯ ಅಗ್ನಿಶಾಮಕ ಇಲಾಖೆ, ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಮೇಲಿರುವ ಓಪನ್ ಪಬ್, ರೆಸ್ಟೋರೆಂಟ್ ಗಳ ಪರಿಶೀಲನೆಗೆ ಮುಂದಾಗಿದೆ.
ಮುರುಟಿಹೋದ ಖುಷಬೂ, ದುರಂತ ಸಂಭವಿಸಿದ್ದು ಹೇಗೆ?
ನಗರದ ಬಹುಮಹಡಿ ಕಟ್ಟಡಗಳ ಮೇಲೆ ಹಲವು ಓಪನ್ ರೆಸ್ಟೋರೆಂಟ್ ಗಳು, ಪಬ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಾಣಿಜ್ಯ ಕೇಂದ್ರಗಳಿಗೆ ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿರುವ ಬಹುಮಹಡಿಗಳಲ್ಲಿರುವ ತೆರೆದ ಪಬ್ ರೆಸ್ಟೋರೆಂಟ್ ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಬೇಕು. ಅಗ್ನಿ ಸುರಕ್ಷತಾ ಕ್ರಮ ಇಲ್ಲದಿದ್ದರೆ ನೋಟಿಸ್ ನೀಡಿ ಸುರಕ್ಷಿತಾ ಕ್ರಮ ಪಾಲಿಸುವಂತೆ ತಿಳಿಸಿ ಇಲ್ಲದಿದ್ದರೆ ಕ್ರಮ ಜರುಗಿಸಿ ಎಂದು ಅಗ್ನಿಶಾಮಕ ಇಲಾಖೆ ಮಹಾನಿರ್ದೇಶಕ ಎಂ.ಎನ್, ರೆಡ್ಡಿ, ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ವರ್ಷಾಂತ್ಯದ ಪಾರ್ಟಿ ಹಾಳುಗೆಡವಲು ಪೊಲೀಸ್ ಸಿದ್ಧ!
ವೈಟ್ ಫೀಲ್ಡ್ ನಲ್ಲಿರುವ ವರ್ಜೀನಿಯಾ ಮಾಲ್ ಮಹಡಿ ಮೇಲೆ ಅಗ್ನಿ ಸುರಕ್ಷತಾ ಕ್ರಮ ಉಲ್ಲಂಘಿಸಿ ರೆಸ್ಟೋರೆಂಟ್ ಹಾಗೂ ಇನ್ನಿತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಂಡು ಮುಂದಾಗಬಹುದಾದ ಅನಾಹುತಗಳನ್ನು ತಡೆಯಿರಿ ಎಂದು ಎಂ.ಎನ್. ರೆಡ್ಡಿಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇಂದಿರಾನಗರ ೧೦೦ ಅಡಿ ರಸ್ತೆಯಲ್ಲಿರುವ ಹಲವು ಪಬ್ ಗಳಲ್ಲಿ ತುರ್ತು ಅಗ್ನಿ ನಿರ್ಗಮನ ದ್ವಾರ ಇಲ್ಲ ಎಂದು ಅಲ್ಲಿನ ಸ್ಥಳೀಯರೊಬ್ಬರು ಮನವಿ ಮಾಡಿದ್ದಾರೆ. 15 ಮೀಟರ್ ಗಿಂತ ಎತ್ತರದ ಕಟ್ಟಡಗಳನ್ನು ಬಹುಮಹಡಿ ಕಟ್ಟಡ ಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಕಟ್ಟಡಗಳಲ್ಲಿ ಕಡ್ಡಾಯವಾಗಿ ತುರ್ತು ನಿರ್ಗಮನ ದ್ವಾರ ಇರಬೇಕು.
ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ವಹಿವಾಟು ನಡೆಸುತ್ತಿರುವ ಓಪನ್ ರೆಸ್ಟೋರೆಂಟ್ ಮತ್ತು ಪಬ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.