ಕುತೂಹಲ ಕೆರಳಿಸಿದ ಆನಂದ್ ಸಿಂಗ್ -ಡಿಕೆಶಿ ಭೇಟಿ
Recommended Video

ಬೆಂಗಳೂರು, ಮೇ 22: ಕಳೆದೊಂದು ವಾರದ ರಾಜ್ಯ ರಾಜಕಾರಣ ಪತ್ತೇದಾರಿ ಕಾದಂಬರಿಯೇ ಸರಿ! ಆ ಕಾದಂಬರಿಯ ನಾಯಕ ಆನಂದ್ ಸಿಂಗ್!
ಇದೀಗ ಅವರನ್ನು ಕಾಂಗ್ರೆಸ್ ಮುಖಂಡ ಡಿಕೆಶಿ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ. ಸದ್ಯಕ್ಕೆ ಬೆಂಗಳೂರಿನ ದೊಮ್ಲೂರಿನಲ್ಲಿರುವ ಹಿಲ್ಟನ್ ಹೋಟೆಲ್ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕರು.
ಅವರನ್ನು ಇಂದು ಭೇಟಿ ಮಾಡಿರುವ ಮಾಜಿ ಇಂಧನ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕುಶಲೋಪರಿ ವಿಚಾರಿಸಿದರು! ಬಿಜೆಪಿಯಲ್ಲಿದ್ದ ಆನಂದ್ ಸಿಂಗ್ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದಿದ್ದು ಈಗ ಹಳೇ ವಿಷಯ. ಆದರೆ ಬಿಜೆಪಿಗೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲವನ್ನು ಒದಗಿಸಿಕೊಡುವಲ್ಲಿ ಆನಂದ್ ಸಿಂಗ್ ಸಮರ್ಥರು ಎಂಬುದನ್ನು ಬಲ್ಲ ಕಾಂಗ್ರೆಸ್ ನಾಯಕರು ಅವರ ಮೇಲೊಂದು ಹದ್ದಿನ ಕಣ್ಣಿಟ್ಟಿರುವುದು ಸುಳ್ಳಲ್ಲ.

ಮೇ 15 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಣೆಯಾದ ಆನಂದ್ ಸಿಂಗ್ ನಂತರ ಪತ್ತೆಯಾಗಿದ್ದು ಮೇ 19 ರ ವಿಶ್ವಾಸಮತ ಪ್ರಕ್ರಿಯೆಯ ನಿಗದಿತ ಸಮಯಕ್ಕೂ ಕೆಲವೇ ಕ್ಷಣ ಮೊದಲು! ಅಲ್ಲಿಯವರೆಗೂ ಆನಂದ್ ಸಿಂಗ್ ಎಲ್ಲಿದ್ದರು, ಅವರನ್ನು ಬಿಜೆಪಿಯವರೇ ಕೂಡಿಟ್ಟಿದ್ದರೇ? ಅಥವಾ ಅವರೇ ಬಿಜೆಪಿ ಪರ ಒಂದಷ್ಟು ಶಾಸಕರನ್ನು ಕರೆತರಲು ತೆರೆಮರೆಯ ಯತ್ನ ನಡೆಸುತ್ತಿದ್ದರೆ ಎಂಬಲ್ಲಿ ಪ್ರಶ್ನೆಗಳು ನಿಗೂಢವಾಗಿಯೇ ಇವೆ.
ಇಷ್ಟು ದಿನ ಆನಂದ್ ಸಿಂಗ್ ಎಲ್ಲಿದ್ದರು ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಸ್ವತಃ ಡಿ ಕೆ ಶಿವಕುಮಾರ್ ಹೇಳಿದ್ದರು. ಅದೇನೇ ಇದ್ದಿರಲಿ, ಯಾವತ್ತಾದರೊಂದು ದಿನ ಒಂದಷ್ಟು ಶಾಸಕರು ಗುಂಪು ಕಟ್ಟಿಕೊಂಡು ಹೊರನಡೆಯಲು ಆನಂದ್ ಸಿಂಗ್ ಸಿದ್ಧರಾಗಿಯೇ ಇದ್ದಾರೆ ಎಂಬುದನ್ನು ಬಲ್ಲ ಕಾಂಗ್ರೆಸ್ ಅವರಿಗೆ ಸಚಿವ ಸ್ಥಾನ ನೀದಲು ಚಿಂತಿಸುತ್ತಿದೆಯೇ? ಅವರನ್ನು ಕಾಂಗ್ರೆಸ್ಸಿನಲ್ಲಿಯೇ ಹಿಡಿದಿಡಲು ಇದೊಂದು ರಣತಂತ್ರವೇ? ಡಿಕೆಶಿ ಮತ್ತು ಆನಂದ್ ಸಿಂಗ್ ಭೇಟಿ ಇದೀಗ ಅಂಥದೊಂದು ಅನುಮಾನಕ್ಕೆ ಹಾದಿಮಾಡಿಕೊಟ್ಟಿದೆ.












Click it and Unblock the Notifications