ಸಿದ್ದರಾಮಯ್ಯ ವಾರ್ನಿಂಗ್, ಸಮಾನ ಮನಸ್ಕ ಶಾಸಕರ ಸಭೆ ರದ್ದು!
Recommended Video
ಬೆಂಗಳೂರು, ಏಪ್ರಿಲ್ 29 : ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರು ಕರೆದಿದ್ದ ಸಮಾನ ಮನಸ್ಕರ ಸಭೆ ರದ್ದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಖಾಡಕ್ಕೆ ಇಳಿದಿದ್ದು, ಶಾಸಕರು ತಮ್ಮ ನಿಲುವು ಬದಲಿಸಿದ್ದಾರೆ.
ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರ ಸಭೆ ಕರೆದಿದ್ದರು. ಏಪ್ರಿಲ್ 30ರಂದು ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಸಭೆ ನಿಗದಿಯಾಗಿತ್ತು. ಈಗ ಸಭೆಯನ್ನು ರದ್ದು ಮಾಡಲಾಗಿದೆ.
ಸಮಾನ ಮನಸ್ಕ ಶಾಸಕರ ಸಭೆ ಬರೆದ ಎಸ್.ಟಿ.ಸೋಮಶೇಖರ್
'ರಾಜಕೀಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ' ಎಂದು ಹೇಳಿದ್ದ ಎಸ್.ಟಿ.ಸೋಮಶೇಖರ್ ಅವರು ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಈ ಸಭೆ ಕರೆಯಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು.
ಎರಡು ಕ್ಷೇತ್ರದ ಉಪ ಚುನಾವಣೆ : ಮೈತ್ರಿ ನಾಯಕರ ಮಹತ್ವದ ಸಭೆ
ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮುಂತಾದ ಶಾಸಕರು ಸಮಾನ ಮನಸ್ಕ ಶಾಸಕರ ಗುಂಪಿನಲ್ಲಿದ್ದರು....
ಎಲ್ಲರೂ ಸಿದ್ದರಾಮಯ್ಯ ಆಪ್ತರು
ಬಿಡಿಎ ಅಧ್ಯಕ್ಷ ಮತ್ತು ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದ್ದ ಬೈರತಿ ಬಸವರಾಜ್, ಮುನಿರತ್ನ, ಬೈರತಿ ಸುರೇಶ್ ಎಲ್ಲರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು, ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.
ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಭಾನುವಾರ ಎಸ್.ಟಿ.ಸೋಮಶೇಖರ್ ಅವರು ಸಭೆಗೆ ಶಾಸಕರನ್ನು ಆಹ್ವಾನಿಸಿದ್ದ ಆಹ್ವಾನ ಪತ್ರಿಕೆ ವೈರಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಎಲ್ಲರಿಗೂ ಖಡಕ್ ವಾರ್ನಿಂಗ್ ನೀಡಿದ್ದರು. ಆದ್ದರಿಂದ, ಸಭೆಯನ್ನು ರದ್ದು ಮಾಡಲಾಗಿದೆ.
ಉಪ ಚುನಾವಣೆಯಲ್ಲಿ ಕೆಲಸ ಮಾಡಿ
ಸಮಾನ ಮನಸ್ಕ ಶಾಸಕರ ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಿದ್ದ ಸಿದ್ದರಾಮಯ್ಯ ಅವರು ಉಪ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಮೇ 19ರಂದು ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯ ಸೂಚನೆಯಂತೆ ಶಾಸಕರು ಪ್ರಚಾರದಲ್ಲಿ ತೊಡಗುವ ಸಾಧ್ಯತೆ ಇದೆ.
ದಿನೇಶ್ ಗುಂಡೂರಾವ್ ಏನು ಹೇಳಿದ್ದರು?
ಎಸ್.ಟಿ.ಸೋಮಶೇಖರ್ ಕರೆದಿರುವ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಒಳ್ಳೆಯ ವಿಚಾರಕ್ಕೆ ಅವರು ಸಭೆ ಕರೆದಿರಬಹುದು. ನಮ್ಮದೇನೂ ಹಿಟ್ಲರ್ ಆಡಳಿತವಲ್ಲ. ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುವೆ' ಎಂದು ಹೇಳಿದ್ದರು.