ಮಳೆ ಅವಾಂತರ: ಕುಸಿದ ಕಾಂಪೌಂಡ್ ಗೆ 5 ಕಾರ್ಮಿಕರು ಬಲಿ
ಬೆಂಗಳೂರು, ಸೆಪ್ಟೆಂಬರ್. 07: ಮಹಾನಗರದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿ ದಿನ ಸಂಜೆ ವರುಣ ಆರ್ಭಟಿಸುತ್ತಿದ್ದು ಕಾರ್ಮಿಕರ ಜೀವವನ್ನು ಬಲಿ ಪಡೆದಿದ್ದಾನೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾರ್ಮಿಕರ ಶೆಡ್ ವೊಂದು ಕುಸಿದು ಬಿದ್ದಿದ್ದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮುಂಜಾನೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗಡೇನಗರದ ನೂರ್ ನಗರದಲ್ಲಿ ಅವಘಡ ಸಂಭವಿಸಿದೆ. ಸೆಲ್ವಂ(28), ಬಿಹಾರ ಮೂಲದ ದುಲಾಲ್(23) ಅಜಿತ್ ಪ್ರಧಾನ್ (43) ಸ್ಥಳದಲ್ಲೇ ಮೃತಪಟ್ಟವರು. ನೂರ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಿಗ್ನೇಚರ್ ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿರು ಕಾಂಪೌಂಡ್ ಪಕ್ಕದ ಗೋಡೆಗೆ ತಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. [ಸಮಾಜ ಕಲ್ಯಾಣ ಸಚಿವರ ಮನೆ ಮುಂದಿನ ಮ್ಯಾನ್ ಹೋಲ್ ಮೃತ್ಯುಕೂಪ]

ಧಾರಾಕಾರ ಮಳೆಗೆ 12 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಸುಮಾರು 20 ಜನ ಗಾಯಗೊಂಡಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ ಮತ್ತು ಶನಿವಾರದ ಮಳೆಗೆ ಕಾಂಪೌಂಡ್ ಶಿಥಿಲಗೊಂಡಿತ್ತು. ಭಾನುವಾರ ಕುಸಿದು ಬಿದ್ದು ನಾಲ್ವರು ಕಾರ್ಮಿಕರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications