Bengaluru rain forecast: ಮುಂಗಾರು ಸಕ್ರಿಯ, ವಿವಿಧ ಬಡಾವಣೆಗಳಲ್ಲಿ ಮುಂದಿನ ಐದು ದಿನ ಮಳೆ
ಬೆಂಗಳೂರು, ಜೂನ್ 14: ರಾಜ್ಯಕ್ಕೆ ಮುಂಗಾರು ಆಗಮಿಸಿದ ಬೆನ್ನಲ್ಲೆ ಬೆಂಗಳೂರಿನಲ್ಲಿ ಮಳೆ ಸಕ್ರಿಯವಾಗಿದೆ. ಮುಂದಿನ ಐದು ದಿನ ದಿನವೂ ಸಂಜೆ ಹಗುರದಿಂದ ಸಾಧಾರಣ, ಒಂದೆರಡು ಕಡೆ ವ್ಯಾಪಕ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಗಾಲ ಆರಂಭವಾಗಿದೆ. ಈ ಮಧ್ಯೆ ನಗರದಲ್ಲಿ ಗರಿಷ್ಠ ತಾಪಮಾನ 31.5 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ವಾಡಿಕೆಗಿಂತ ಎರಡರಷ್ಟು ಅಧಿಕ. ಈ ವೇಳೆ ಮಳೆ ಸಕ್ರಿಯಗೊಂಡಿದೆ. ಪರಿಣಾಮ ನಗರದಲ್ಲಿ ಮಳೆ ಮುಂದುವರಿಯಲಿದೆ. ಆಗಾಗ ಬಿಸಿಲಿನ ದರ್ಶನವು ಆಗಲಿದೆ.

ಐಎಂಡಿ ಬೆಂಗಳೂರಿನ ಪ್ರಾದೇಶಿಕ ಕಚೇರಿ ವಿಜ್ಞಾನಿ ಡಾ.ಪ್ರಸಾದ್ ಅವರು, ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತ ಸೃಷ್ಟಿಯಾಗಿದ್ದರಿಂದ ಮುಂಗಾರು ಮಳೆಯ ಆಗಮನ, ಸಕ್ರಿಯತೆಗೆ ತುಸು ತೊಡಕಾಯಿತು. ಸದ್ಯ ಮುಂಗಾರು ನಿರೀಕ್ಷೆಯಷ್ಟು ಪ್ರಬಲವಾಗಿರದೇ ದುರ್ಬಲವಾಗಿದೆ. ಹೀಗಾಗಿ ಮುಂಗಾರು ಆರಂಭಿಕ ಮಳೆಯ ದರ್ಶನ ರಾಜ್ಯಕ್ಕಾಗಲಿ, ಬೆಂಗಳೂರಿಗಾಗಲಿ ಆಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ಮುಂದಿನ ಐದು ದಿನ ಬೆಂಗಳೂರಿನ ವಿವಿಧೆಡೆ ಸುಮಾರು 05 ರಿಂದ 10 ಮಿಲಿ ಮೀಟರ್ನಷ್ಟು ಮಳೆ ಬರಬಹುದು. ಈ ವಾರ ಪೂರ್ತಿ ಚಂಡಮಾರುತದ ಹಾವಳಿ ಕಂಡು ಬರುವ ಸಾಧ್ಯತೆ ಇದೆ. ಹೀಗಾಗಿ ನಿತ್ಯ ಸಂಜೆ ಮಳೆ ಬರಲಿದೆ. ಬಿಪರ್ಜಾಯ್ ಚಂಡಮಾರುತ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಮಳೆ ಬೆಳಗ್ಗೆಯಿಂದ ಇಡೀ ದಿನ ಆವರಿಸುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಜೂನ್ 19ರವರೆಗಿನ ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನ ವಿವಿಧೆಡೆ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ, ಕೆಲವು ಬಡಾವಣೆಯಗಳಲ್ಲಿ ಮಾತ್ರ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಮಿಸಲಿದೆ. ಈ ವೇಳೆ ತಾಪಮಾನವು ಗರಿಷ್ಠ 33 ರಿಂದ 31 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಲಿದೆ. ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕೆಂಗೇರಿಯಲ್ಲಿ 44ಮಿ.ಮೀ. ಮಳೆ ದಾಖಲು
ಮಂಗಳವಾರ ಸಹ ಸಂಜೆ ನಂತರ ನಗರದ ರಾಜರಾಜೇಶ್ವರಿ ವಲಯ ವ್ಯಾಪ್ತಿಯಲ್ಲಿ ಜೋರು ಮಳೆ ದಾಖಲಾಗಿದೆ. ಕೆಂಗೇರಿ 44 ಮಿ.ಮೀ, ಕೆಂಗೇರಿ (2) 36ಮಿ.ಮೀ, ರಾಜರಾಜೇಶ್ವರಿ ನಗರ 31 ಮಿ.ಮೀ, ಎಚ್.ಗೊಲ್ಲಹಳ್ಳಿ 31ಮಿ.ಮೀ, ನಾಯಂಡಹಳ್ಳಿ 27ಮಿ.ಮೀ, ಹೆಮ್ಮಿಗೆಪುರ 24ಮಿ.ಮೀ, ಮಳೆ ದಾಖಲಾಗಿದೆ.
ಇನ್ನೂ ನಗರದ ವಿವಿಧ ಪ್ರದೇಶಗಳಲ್ಲಿ ತುಂತುರು ರೂಪದಲ್ಲಿ ಮಳೆ ಸುರಿದಿದೆ. ರಾತ್ರಿ ಹೊತ್ತಿಗೆ ಮಳೆ ಮರೆಯಾಯಿತು. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮಧ್ಯಾಹ್ನದ ನಂತರ ತಂಪುವಾತಾವರಣ ಕಂಡು ಬರುತ್ತಿದೆ.












Click it and Unblock the Notifications