Bengaluru-Chennai Expressway: ಇನ್ನೊಂದು ತಿಂಗಳಲ್ಲಿ 71 ಕಿ.ಮೀ ರಸ್ತೆ ಸಂಪೂರ್ಣ ಸಿದ್ಧ
ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡುವ ಸಲುವಾಗಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇನ್ನೊಂದು ತಿಂಗಳಿನಲ್ಲಿ 71 ಕಿಲೋ ಮೀಟರ್ ಉದ್ದದ ಒಂದು ವಿಭಾಗ ಸಂಪೂರ್ಣವಾಗಿ ಸಜ್ಜಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮಾಹಿತಿ ನೀಡಿದೆ.
ಮನಿ ಕಂಟ್ರೋಲ್ ವರದಿ ಮಾಡಿರುವ ಪ್ರಕಾರ, "400 ಮೀಟರ್ ಹೊರತುಪಡಿಸಿ ಹೊಸಕೋಟೆಯಿಂದ ಬೇತಮಂಗಲದವರೆಗೆ ಎಕ್ಸ್ಪ್ರೆಸ್ವೇ ಕಾಮಗಾರಿ ಪೂರ್ಣಗೊಂಡಿದೆ. 400 ಮೀಟರ್ ಬಾಕಿ ಇರುವ ಕಾಮಗಾರಿ ಜಿನ್ನಾಗರ ಬಳಿ ಇರುವ ದೇವಸ್ಥಾನ ಸ್ಥಳಾಂತರ ಮಾಡುವ ಕಾರಣದಿಂದ ವಿಳಂಬವಾಗಿದ್ದು, ಒಂದು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಎನ್ಎಚ್ಎಐ ಪ್ರಾದೇಶಿಕ ಅಧಿಕಾರಿ (ಕರ್ನಾಟಕ) ವಿಲಾಸ್ ಪಿ.ಬ್ರಹ್ಮಣಕರ್ ತಿಳಿಸಿದ್ದಾರೆ ಎಂದು ಹೇಳಿದೆ.

ಈಗಲೇ ಟೋಲ್ ವಸೂಲಿ ಮಾಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಟೋಲ್ ದರ ಎಷ್ಟು ನಿಗದಿಮಾಡಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಮುಂದಿನ ವರ್ಷ ಆಂಧ್ರಪ್ರದೇಶ ಮತ್ತು ತಮಿಳುನಾಡು ವಿಭಾಗಗಳ ಕಾಮಗಾರಿಗಳು ಕೂಡ ಮುಗಿಯಲಿದ್ದು, ವಾಹನ ದಟ್ಟಣೆ ಹೆಚ್ಚಲಿದೆ. ಈಗ ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ 71 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ಸಂಪೂರ್ಣವಾಗಿ ಸಿದ್ಧವಾದ ಬಳಿಕ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಬೆಂಗಳೂರಿನಿಂದ, ಮಾಲೂರು, ಬಂಗಾರಪೇಟೆಗೆ ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಗರಿಷ್ಠ ವೇಗದ ಮಿತಿ
ಈ ಎಕ್ಸ್ಪ್ರೆಸ್ವೇ ಹೊಸಕೋಟೆಯಲ್ಲಿ ಆರಂಭವಾಗಲಿದ್ದು ಇಂಟರ್ಚೇಂಜ್ಗಳನ್ನು ಹೊಂದಿದ್ದು, ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ಗೆ ಸಂಪರ್ಕ ಕಲ್ಪಿಸುತ್ತದೆ, ಮಾಲೂರು ಮತ್ತು ಕೆಜಿಎಫ್ನಲ್ಲಿ ಹೆಚ್ಚುವರಿ ಇಂಟರ್ಚೇಂಜ್ಗಳನ್ನು ಹೊಂದಿದ್ದು, ಎಕ್ಸ್ಪ್ರೆಸ್ವೇನಲ್ಲಿ ಗರಿಷ್ಠ 120 ಕಿ.ಮೀ ವೇಗದಲ್ಲಿ ಚಲಿಸಲು ಮಾತ್ರ ಅನುಮತಿ ನೀಡಲಾಗುತ್ತದೆ ಎಂದರು.
ದಕ್ಷಿಣ ಭಾರತದ ಮೊದಲ ಗ್ರೀನ್ಫೀಲ್ಸ್ ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇ ಎನ್ನುವ ಹೆಗ್ಗಳಿಕ ಕೂಡ ಇದರದ್ದಾಗಿದೆ. ಈ ಎಕ್ಸ್ಪ್ರೆಸ್ವೇ ಆರಂಭವಾದ ಬಳಿಕ ಹೊಸಕೋಟೆಯಿಂದ ಕೆಜಿಎಫ್ ನಡುವಿನ ಪ್ರಯಾಣ 1.5 ಗಂಟೆಗಳಿಂದ 45 ನಿಮಿಷಕ್ಕೆ ಕಡಿಮೆಯಾಗುವ ನಿರೀಕ್ಷೆ ಇದೆ.
ಕಾಮಗಾರಿ ಮುಗಿಯುವುದು ಯಾವಾಗ
ಹೈಬ್ರಿಡ್ ಆನ್ಯುಟಿ ಮಾಡೆಲ್ (HAM) ರಸ್ತೆ ನಿರ್ಮಾಣವಾಗುತ್ತಿದ್ದು, ಇದನ್ನು 2011ರಲ್ಲೇ ಘೋಷಣೆ ಮಾಡಲಾಗಿತ್ತು. ಬೆಂಗಳೂರು-ಚೆನ್ನೈ ನಡುವೆ ಗ್ರೀನ್ಫೀಲ್ಡ್ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇ (NE-7) ನಿರ್ಮಾಣಕ್ಕೆ 2022 ರಲ್ಲಿ ಅಡಿಪಾಯ ಹಾಕಲಾಯಿತು. ಅಕ್ಟೋಬರ್ 2024ರಲ್ಲೇ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತಾದರೂ, ಬಳಿಕ ಅದನ್ನು ಜೂನ್ 2025ಕ್ಕೆ ವಿಸ್ತರಣೆ ಮಾಡಲಾಯಿತು. ಈಗ 2025ರ ಡಿಸೆಂಬರ್ ತಿಂಗಳಿನಲ್ಲಿ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ.
ಹೊಸಕೋಟೆಯಿಂದ ಆರಂಭವಾಗುವ ಈ ಎಕ್ಸ್ಪ್ರೆಸ್ವೇ ಚೆನ್ನೈ ಸಮೀಪವಿರುವ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗುತ್ತದೆ. ಈ ಎಕ್ಸ್ಪ್ರೆಸ್ ನಿರ್ಮಾಣವಾದ ಬಳಿಕ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣ 4 ಗಂಟೆಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಹೆದ್ದಾರಿ ಹಾದುಹೋಗಲಿದೆ. ಈ ಎಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಚೆನ್ನೈನಿಂದ ಬೆಂಗಳೂರಿಗೆ ಸರಕು ಸಾಗಾಣಿಕೆಗೆ ಸಹಾಯವಾಗಲಿದೆ.












Click it and Unblock the Notifications