Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ವಿಸ್ತರಣೆ: ಎಲ್ಲಿಗೆ ಹಾಗೂ ಇದರಿಂದ ಏನೆಲ್ಲಾ ಲಾಭಗಳಿವೆ?
Bengaluru-Chennai Expressway: ಇದೇ ವರ್ಷ ಉದ್ಘಟನೆ ಆಗಲಿರುವ ಬಹುನೀರಿಕ್ಷಿತ ಎಕ್ಸ್ಪ್ರೆಸ್ ವೇಗಳಲ್ಲಿ ಬೆಂಗಳೂರು-ಚೆನ್ನೇ ಎಕ್ಸ್ಪ್ರೆಸ್ವೇ ಒಂದಾಗಿದೆ. ಕರ್ನಾಟಕ ವ್ಯಾಪ್ತಿಯಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಮಾತ್ರ ಕಾಮಗಾರಿ ಮುಂದುವರೆದಿದೆ. ಈ ನಡುವೆಯೇ ಈ ಹೆದ್ದಾರಿ ವಿಸ್ತರಣೆ ಬಗ್ಗೆ ಮತ್ತೊಂದು ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
260 ಕಿಲೋ ಮೀಟರ್ ಉದ್ದದ ಈ ಎಕ್ಸ್ಪ್ರೆಸ್ ವೇ ಅನ್ನು ಗ್ರೀನ್ಫೀಲ್ಡ್ ಯೋಜನೆಯಡಿ ₹17,900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದು ಪೂರ್ಣಗೊಂದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ 5-6 ಗಂಟೆಗಳಿಂದ ಕೇವಲ 2.15 ಗಂಟೆಗಳಿಗೆ ಇಳಿಕೆಯಾಗಲಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ, ಪ್ರಯಾಣಿಕರು ಎರಡು ನಗರಗಳ ನಡುವೆ ಮೂರು ಪ್ರಮುಖ ಮಾರ್ಗಗಳನ್ನು ಬಳಸುತ್ತಾರೆ. ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮೂಲಕ ಹೊಸೂರು-ಕೃಷ್ಣಗಿರಿ ಮಾರ್ಗ, ಹಳೆಯ ಮದ್ರಾಸ್ ರಸ್ತೆ ಮತ್ತು ಕೋಲಾರ, ಕೆಜಿಎಫ್, ವಿ ಕೋಟಾ ಮತ್ತು ವೆಲ್ಲೂರು ಮೂಲಕ ಹಾದುಹೋಗುವ ಮೂರನೇ ಮಾರ್ಗವಾಗಿದೆ.
ಈ ಮೂರು ಮಾರ್ಗಗಳಲ್ಲಿ ಗೋಲ್ಡನ್ ಕ್ವಾಡ್ರಿಲ್ಯಾಟರ್ ಹೆಚ್ಚು ಬಳಕೆಯಲ್ಲಿದೆ. ಇದು ಎರಡು ನಗರಗಳ ನಡುವೆ ಸರಿಸುಮಾರು 380 ಕಿಲೋ ಮೀಟರ್ ದೂರದಲ್ಲಿದೆ. ಮುಂಬರುವ ಹೊಸ ಎಕ್ಸ್ಪ್ರೆಸ್ವೇಯಿಂದ ದೂರ ಕಡಿಮೆ ಆಗುತ್ತದೆ ಮತ್ತು ಪ್ರಯಾಣವು ಸುಗಮ ಮತ್ತು ಸುರಕ್ಷಿತ ಆಗಿರುತ್ತದೆ.
ಇನ್ನು ಕರ್ನಾಟಕದಲ್ಲಿ ಎಕ್ಸ್ಪ್ರೆಸ್ವೇ ಮಾರ್ಗವನ್ನು ಮೂರು ಪ್ಯಾಕೇಜ್ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸಕೋಟೆಯಿಂದ ಮಾಲೂರು (27.1 ಕಿಮೀ), ಮಾಲೂರಿನಿಂದ ಬಂಗಾರಪೇಟೆ (27.1 ಕಿಮೀ) ಮತ್ತು ಬಂಗಾರಪೇಟೆಯಿಂದ ಬೇತಮಂಗಲ (17.5 ಕಿಮೀ). ಈ ಮಾರ್ಗವು ದಾಬಾಸ್ಪೇಟೆಯಲ್ಲಿರುವ ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್ಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ.
ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ
ಹಂತ 1: ಹೊಸಕೋಟೆ-ಮಾಲೂರು ನಡುವೆ 27.1 ಕಿಲೋ ಮೀಟರ್
ಹಂತ 2: ಮಾಲೂರು-ಬಂಗಾರಪೇಟೆ 27.1 ಕಿಲೋ ಮೀಟರ್
ಹಂತ 3: ಬಂಗಾರಪೇಟೆ-ಬೇತಮಂಗಲ, 17.5 ಕಿಲೋ ಮೀಟರ್
ಸದ್ಯ ಕರ್ನಾಟಕದ ವ್ಯಾಪ್ತಿಯಲ್ಲಿ 71 ಕಿಲೋ ಮೀಟರ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಕರ್ನಾಟಕ ಭಾಗದಲ್ಲಿ ಈಗಾಗಲೇ ವಾಹನಗಳು ಸಂಚಾರ ಮಾಡುತ್ತಿವೆ. ಆದರೆ ಇನ್ನೂ ಟೋಲ್ ಶುಲ್ಕ ಸಂಗ್ರಹವನ್ನು ಆರಂಭಿಸಿಲ್ಲ. ಇನ್ನು ಈ ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಕಾಮಗಾರಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇನ್ನೂ ಪೂರ್ಣಗೊಂಡಿಲ್ಲ. 2025ರ ಆಗಸ್ಟ್ ವೇಳೆಗೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ ಎಂದು ಇತ್ತೀಚೆಗಷ್ಟೇ ಪ್ರಾಧಿಕಾರದ ಮಾಹಿತಿ ನೀಡಿತ್ತು.
ಯಾವೆಲ್ಲಾ ಮಾರ್ಗಗಳಲ್ಲಿ ಹಾದು ಹೋಗಲಿದೆ?: ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ.
ಹೆದ್ದಾರಿ ವಿಸ್ತರಣೆ ಅಪ್ಡೇಟ್: ಇದೀಗ ಈ ಎಕ್ಸ್ಪ್ರೆಸ್ವೇಯನ್ನು ಮಂಗಳೂರಿಗೆ ವಿಸ್ತರಿಸುವ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ ಎನ್ನುವ ಮಾಹಿತಿಯೊಂದು ಲಭ್ಯಗಿದೆ. ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಹೊಸ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾವನೆ ಸಲ್ಲಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ ಬೆಂಗಳೂರು-ಚೆನ್ನೈ ಕಾರಿಡಾರ್ಗೆ ಸುಲಭವಾಗಿ ಸಂಪಕ ಸಾಧಿಸಲಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಹಕಾರಿ ಆದಂತಾಗಲಿದೆ.












Click it and Unblock the Notifications