ಬೆಂಗಳೂರಿನಲ್ಲಿ ಗಂಟೆಗೆ 70 ಮಿ.ಮೀ ಮಳೆಯಾದರೂ ಪರಿಸ್ಥಿತಿ ನಿಭಾಯಿಸುತ್ತೇವೆ: ಬಿಬಿಎಂಪಿ
ಬೆಂಗಳೂರು, ಜುಲೈ 14: ನಗರದಲ್ಲಿ ಗಂಟೆಗೆ 70 ಮಿ.ಮೀ ಮಳೆಯಾದರೂ ಪರಿಸ್ಥಿತಿ ನಿಭಾಯಿಸುತ್ತೇವೆ ಎಂದು ಬಿಬಿಎಂಪಿ ಹೇಳಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ನಗರದಲ್ಲಿ ಒಂದು ಗಂಟೆಯಲ್ಲಿ 50-75 ಎಂಎಂ ಮಳೆಯಾದರೂ ಪರಿಸ್ಥಿತಿ ನಿಭಾಯಿಸಬಲ್ಲೆವು" ಎಂದು ಹೇಳಿದ್ದಾರೆ.
ನೈಋತ್ಯ ಮುಂಗಾರು ಚುರುಕು: ರಾಜ್ಯಾದ್ಯಂತ ಜುಲೈ 18ರವರೆಗೆ ಭಾರಿ ಮಳೆ
ನಗರದಲ್ಲಿ ಒಂದು ವೇಳೆ ಒಂದು ಗಂಟೆಯಲ್ಲಿ 75 ಎಂಎಂ ಮಳೆಯಾದರೂ ಪರಿಸ್ಥಿತಿ ನಿಭಾಯಿಸಬಲ್ಲೆವು. ಇದಕ್ಕಿಂತಲೂ ಹೆಚ್ಚಿನ ಮಳೆಯಾದರೆ, ಅದರಿಂದ ಆಗುವ ಅನಾಹುತ ಕೆಲವೇ ಗಂಟೆಗಳಷ್ಟು ಇರಲಿದ್ದು, ಆ ಪರಿಸ್ಥಿತಿ ನಿಭಾಯಿಸಲೂ ಸರ್ವಸನ್ನದ್ಧರಾಗಿದ್ದೇವೆಂದು ಎಂದಿದ್ದಾರೆ.
ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಅವರು ಮಾತನಾಡಿ, ನಗರದಲ್ಲಿ ಮಂಗಳವಾರ ಸಂಜೆ 5.30ರ ವೇಳೆಗೆ 5 ಎಂಎಂ ಮಳೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.2 ಮಿ.ಮೀ ಮಳೆಯಾಗಿದ್ದು, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 3.7 ಮಿ,ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಜುಲೈ 18ರವರೆಗೂ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಮಂಗಳವಾರ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲಿ ಕೂಡ ಉತ್ತಮ ಮಳೆಯಾಗಿದೆ.
Recommended Video
ಇನ್ನೂ ಬುಧವಾರ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಮಳೆಯಾಗುತ್ತಿದೆ. ದೇಶದಲ್ಲೂ ಮೊದಲ ಬಾರಿಗೆ ನೈರುತ್ಯ ಮುಂಗಾರು ಎಲ್ಲೆಡೆ ವ್ಯಾಪಿಸಿದ್ದು, ದೇಶದಾದ್ಯಂತ ಉತ್ತಮ ಮಳೆಯಾಗುತ್ತಿದೆ.