BBMP: ಜೇಷ್ಠತೆ ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ, ಸ್ಪಷ್ಟನೆ
ಬಿಬಿಎಂಪಿ ಹಣಕಾಸು ವ್ಯವಹಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಮಾಡಿದ ಆರೋಪಗಳಲ್ಲಿ ಹುರಳಿಲ್ಲ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಸ್ಪಷ್ಟನೆ.
ಬೆಂಗಳೂರು, ಮಾರ್ಚ್ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗುತ್ತಿಗೆದಾರರಿಗೆ ಲಂಚ ಪಡೆದಾಗಲಿ ಇಲ್ಲವೇ ಜೇಷ್ಠತೆಯ ಆಧರ ಮೀರಿ ಬಿಲ್ ಪಾವತಿಸಲಾಗುತ್ತಿಲ್ಲ ಎಂದು ಆರೋಪಗಳಿಗೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಸ್ಪಷ್ಟನೆ ನೀಡಿದ್ದಾರೆ.
ನಗರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ಬಿಬಿಎಂಪಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಕುರಿತು ಹಲವು ಆರೋಪಗಳನ್ನು ಮಾಡಿದ್ದರು.

ಆರೋಪ ಕುರಿತು ಜಯರಾಮ್ ರಾಯಪುರ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ಅವಧಿಯಲ್ಲಿ ಜೇಷ್ಠತೆ ಮೀರಿ ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ. ಶೇಕಡಾ 99 ಜೇಷ್ಠತೆ ಆಧಾರದ ಮೇಲೆಯೇ ಬಿಲ್ ನೀಡಲಾಗಿದೆ. ಕೇವಲ ಶೇಕಡಾ 01 ರಷ್ಟು ಇಲ್ಲವೇ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ವಿವೇಚನಾಧಿಕಾರ ಬಳಸಿ ಗುತ್ತಿಗಗೆದಾರರಿಗೆ ಹಣ ಒದಗಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಗುತ್ತಿಗೆದಾರರಿಗೆ ಹಣದ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪ ಸರಿಯಲ್ಲ. ಬಿಬಿಎಂಪಿಯ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿವೆ. ಗುತ್ತಿಗೆದಾರರಿಗೆ ಆನ್ಲೈನ್ ಮೂಲಕವೇ ಹಣ ಪಾವತಿಯಾಗಿದೆ. ಇದು ಪಾರದರ್ಶಕವೇ. ಮದುವೆ ಮತ್ತು ಅನಾರೋಗ್ಯದಂತಹ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಟ್ರ್ಯಾಕ್ಟರ್ಗೆ ವಿವೇಚನಾಧಿಕಾರ ಬಳಸಿ 25 ಲಕ್ಷವರೆಗೆ ಹಣ ನೀಡಲಾಗುತ್ತಿದೆ. ಶೇ. 80ರಷ್ಟು ಜೇಷ್ಠತೆ ಆಧಾರದಲ್ಲಿ ಮತ್ತು ಶೇಕಡಾ 20ರಷ್ಟು ಮಾತ್ರವೇ ವಿವೇಚನಾಧಿಕಾರ ಬಳಸಲಾಗಿದೆ. ಹೀಗಿದ್ದರೂ ಆರೋಪ ಮಾಡಿರುವುಕ್ಕೆ ಬೇಸರವಿದೆ ಎಂದು ಅವರು ವಿವರಿಸಿದರು.

ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರಿಗೆ ಶೇ. 10ರಷ್ಟು ಲಂಚ ಪಡೆದು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ. ಡಿ.ಕೆಂಪಣ್ಣನವರು ಈ ರೀತಿ ಹಲವು ಆರೋಪಗಳಲ್ಲಿ ಯಾವುದೇ ಹುರಳಿಲ್ಲ. ಈ ಬಗ್ಗೆ ಸಾಕ್ಷಗಳು, ಪುರಾವೆಗಳು ಇದ್ದರೆ ನೀಡಬೇಕು. ಇಲ್ಲವಾದರೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಒಂದೂ ವೇಳೆ ಕ್ಷಮೇ ಕೇಳದಿದ್ದರೆ ಡಿ.ಕೆಂಪಣ್ಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಯಪುರ ಎಚ್ಚರಿಕೆ ನೀಡಿದರು.












Click it and Unblock the Notifications