Bengaluru Bandh: "ಬೆಂಗಳೂರು 3 ವಿಭಜನೆ ವಿರೋಧಿಸಿ: ಬೆಂಗಳೂರು ಬಂದ್ಗೆ ಕರೆ ನೀಡಲಾಗುವುದು"
Bengaluru Bandh: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಭಜನೆ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು. ಬೆಂಗಳೂರನ್ನು ವಿಭಜನೆ ಮಾಡಿದರೆ ಬೆಂಗಳೂರು ಬಂದ್ಗೆ ಕರೆ ನೀಡಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಆಡಳಿತ ಸುಲಭ ಹಾಗೂ ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ, ಮೂರು ಪಾಲಿಕೆ ಮಾಡುವುದಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ, ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ವಾಟಾಳ್ ನಾಗರಾಜ್ ಅವರು ಧ್ವನಿ ಎತ್ತಿದ್ದಾರೆ.
ಗ್ರೇಟರ್ ಬೆಂಗಳೂರು ವಿರುದ್ಧ ಹೋರಾಟ, ಬಿಬಿಎಂಪಿ ಚುನಾವಣೆ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ. ಬೆಂಗಳೂರಿಗೆ ಒಬ್ಬರೇ ಮೇಯರ್ ಸಾಕು ಯಾವುದೇ ಕಾರಣಕ್ಕೂ ಮೂರು ಜನ ಮೇಯರ್ ಬೇಡ ಅಂತ ಅವರು ಹೇಳಿದ್ದಾರೆ. ಈ ಸಂಬಂಧ ನಾಗರಿಕರಿಂದ ಹೋರಾಟ, ಬೆಂಗಳೂರು ಬಂದ್ ಮಾಡಲಾಗುವುದು. ಬೆಂಗಳೂರು ವಿಭಜನೆ ಮಾಡುವುದನ್ನು ವಿರೋಧಿಸಿ ಜೈಲಿಗೆ ಹೋಗಲು ಸಿದ್ಧ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ಗ್ರೇಟರ್ ಬೆಂಗಳೂರು ವಿರೋಧಿಸಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ವಿವಿಧ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಾಟಾಳ್ ನಾಗರಾಜ್ ಅವರು ಮಾತನಾಡಿ, ಗ್ರೇಟರ್ ಬೆಂಗಳೂರು ಕರ್ನಾಟಕ ಸರ್ಕಾರ ಹೊಸದಾಗಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅದಕ್ಕೂ ಮುಂಚೆ ನಗರ ಸಭೆ ಇತ್ತು. 1964 ಮತ್ತು 1973ರಲ್ಲಿ ನಗರಸಭೆಯಲ್ಲಿ ನಾನು ಸದಸ್ಯನಾಗಿದ್ದೆ. ಗ್ರೇಟರ್ ಬೆಂಗಳೂರು ಬೇಕಾಗಿರಲ್ಲಿಲ್ಲ. ಈಗ ಯಾವ ಕಾರಣಕ್ಕೆ ಬೆಂಗಳೂರು ವಿಭಜನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರದ ನಾಗರಿಕರಿಗೆ ಅಪಶುಕುನ, ಕೆಟ್ಟಸಂಸ್ಕೃತಿ ನಾಂದಿಯಾಗಿದೆ. ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಮುಂದೂಡಿಕೆ ಮಾಡುವ ತಂತ್ರವಾಗಿದೆ. ಗ್ರೇಟರ್ ಬೆಂಗಳೂರಿನಿಂದ ಅನಾಹುತವಾಗುವ ಸಾಧ್ಯತೆ ಇದೆ. ಗ್ರೇಟರ್ ಬೆಂಗಳೂರು ಆಡಳಿತದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಹಾಗೂ ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿಯಾಗಿರುತ್ತಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿದರು ನಮಗೆ ಸಂಬಂಧವಿಲ್ಲ. ಸ್ಥಳೀಯ ಜನಪ್ರತಿನಿಧಿ ಇದ್ದರೆ ಮಾತ್ರ ಅವರೇ ಸಮಸ್ಯೆಗಳನ್ನು ನೋಡಿಕೊಳ್ಳುತ್ತಾರೆ. ಆದರೆ, ಈಗ ಬೆಂಗಳೂರಿನ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲ.
ಈಗ ಬೆಂಗಳೂರು ಗುಂಡಿಮಯವಾಗಿದೆ. ಮೊದಲು ಗುಂಡಿ ಮುಚ್ಚುವ ಕೆಲಸವಾಗಬೇಕು. ಕನಕಪುರ, ರಾಮನಗರ ಹಲವಾರು ಪ್ರದೇಶಗಳನ್ನು ಸೇರಿಸುವುದರಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಬೆಂಗಳೂರಿಗೆ ಮಹಾಪೌರರು ಒಬ್ಬರೇ ಇದ್ದರೆ, ಮೂರು ಮೇಯರ್ ಇದ್ದರೆ ಎತ್ತು ಎರಿಗೆ ಏಳಿಯಿತು, ಕೋಣ ನೀರಿಗೆ ಇಳಿಯಿತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಗ್ರೇಟರ್ ಬೆಂಗಳೂರು ವಿರುದ್ಧ ಸಾರ್ವಜನಿಕರಿಂದ ಬೃಹತ್ ಚಳವಳಿಯನ್ನು ನಡೆಸಲಾಗುವುದು. ನಾಡಪ್ರಭು ಕೆಂಪೇಗೌಡ ಅವರ ಇತಿಹಾಸಕ್ಕೆ ಗ್ರೇಟರ್ ಬೆಂಗಳೂರು ಕೆಟ್ಟ ಸಂಪ್ರಾದಾಯ ಹಾಕಿಕೊಟ್ಟಂತೆ ಆಗುತ್ತದೆ. ಬಿಬಿಎಂಪಿ ಚುನಾವಣೆ ಮಾಡಿ, ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದರೆ ಬೆಂಗಳೂರು ಬಂದ್ಗೆ ಕರೆ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications