ಲಾಕ್ ಡೌನ್; ಬೆಂಗಳೂರಿಂದ ವಿದೇಶಕ್ಕೆ ಮರಳಿದ್ದು 3 ಸಾವಿರ ಜನರು
ಬೆಂಗಳೂರು, ಏಪ್ರಿಲ್ 30 : ಲಾಕ್ ಡೌನ್ ಜಾರಿಗೊಂಡ ಬಳಿಕ ವಿವಿಧ ದೇಶಗಳ ಪ್ರಜೆಗಳು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ದೇಶದಲ್ಲಿ ವಿಮಾನ ಸಂಚಾರ ಸಂಪೂರ್ಣವಾಗಿ ರದ್ದಾಗಿದ್ದರೂ ವಿಶೇಷ ವಿಮಾನದಲ್ಲಿ ಅವರನ್ನು ತವರು ದೇಶಕ್ಕೆ ವಾಪಸ್ ಕಳಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 22 ವಿಮಾನಗಳು 17 ವಿವಿಧ ಸ್ಥಳಗಳಿಗೆ ಸಂಚಾರ ನಡೆಸಿವೆ. ಇವುಗಳಲ್ಲಿ ಸುಮಾರು 3 ಸಾವಿರ ಜನರು ಪ್ರಯಾಣ ಮಾಡಿದ್ದಾರೆ. ಕೆಲವೊಂದು ವಿಮಾನಗಳನ್ನು ಆ ದೇಶಗಳೇ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಕಳಿಸಿದ್ದವು.
ಜಪಾನ್ನ ಟೋಕಿಯೊಗೆ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ಮೂರು ವಿಮಾನಗಳ ಮೂಲಕ ಪ್ರಜೆಗಳನ್ನು ಜಪಾಪ್ ವಾಪಸ್ ಕರೆಸಿಕೊಂಡಿದೆ. ಉಳಿದಂತೆ ದಕ್ಷಿಣ ಕೊರಿಯಾ ಒಂದು ವಿಮಾನದ ಮೂಲಕ ಎಲ್ಲರನ್ನು ಕರೆದುಕೊಂಡು ಹೋಗಿದೆ.

ಬಾಗ್ದಾದ್, ಕೊಲಂಬೋ, ದೋಹಾ, ಲಂಡನ್, ಮಸ್ಕತ್, ಪ್ಯಾರೀಸ್, ರಿಯಾದ್, ರೋಮ್ ಸೇರಿದಂತೆ ವಿವಿಧ ಪ್ರದೇಶಕ್ಕೆ ವಿಮಾನಗಳು ಹಾರಾಟ ನಡೆಸಿವೆ. ಮಾರ್ಚ್ 31ರಂದು ಮೊದಲ ಏರ್ ಇಂಡಿಯಾ ವಿಮಾನ ಬೆಂಗಳೂರಿನಿಂದ ಫ್ರಾಂಕ್ ಫರ್ಟ್ಗೆ ಹಾರಾಟ ನಡೆಸಿತ್ತು.
ವಿದೇಶಿಯರನ್ನು ವಾಪಸ್ ಕಳುಹಿಸಲು ಎರಡೂ ಸರ್ಕಾರಗಳ ನಡುವೆ ಮಾತಕತೆ ನಡೆದು ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ ಮಾತ್ರವಲ್ಲ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಿಲಿಕಿದ್ದವರು ಬೆಂಗಳೂರು ಏರ್ ಪೋರ್ಟ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ವಿಶೇಷ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ವಿಮಾನ ನಿಲ್ದಾಣವನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲಾಗಿತ್ತು. ವಿಮಾನ ನಿಲ್ದಾಣದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿದ್ದಾರೆ.












Click it and Unblock the Notifications