ಉದ್ಯಮಿ ಮನೆ ಕಾಯುತ್ತಿದ್ದ ನೇಪಾಳಿ ಸೆಕ್ಯುರಿಟಿ ಗಾರ್ಡ್ ಗ್ಯಾಂಗ್ನಿಂದಲೇ ಕಳ್ಳತನ
ಬೆಂಗಳೂರು, ಡಿ. 10: ನೀವು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದೀರಾ? ನಿಮ್ಮ ಅಪಾರ್ಟ್ಮೆಂಟ್ ಕಾಯಲಿಕ್ಕೆ ನೇಪಾಳಿ ಸೆಕ್ಯುರಿಟಿ ಗಾರ್ಡ್ಗಳು ಇದ್ದಾರಾ? ಹಾಗಿದ್ದರೆ ಮನೆಗೆ ಬೀಗ ಹಾಕಿ ಹೊರ ಹೋಗುವ ಮುನ್ನ ನೂರು ಸಲ ಆಲೋಚಿಸಿ. ಸ್ವಲ್ಪ ಯಾಮಾರಿದರೂ ನಿಮ್ಮ ಮನೆ ಕಾಯುವ ಸೆಕ್ಯುರಿಟಿ ಗಾರ್ಡ್ ಕನ್ನ ಹಾಕಿಸಿ ಕೈತೊಳೆದುಕೊಳ್ಳುತ್ತಾನೆ. ಹೌದು, ಬೆಂಗಳೂರಿನಲ್ಲಿ ಮನೆ ಕಾಯುವ ಕಾವಲುಗಾರರೇ ಮನೆ ಕಳ್ಳತನ ಮಾಡಿಸುವ ಜಾಲ ಬೆಳಕಿಗೆ ಬಂದಿದೆ. ಹೆಣ್ಣೂರು ಪೊಲೀಸರು ಅಂತಹ ನೇಪಾಳಿ ಚೋರ್ ಗ್ಯಾಂಗ್ನ್ನು ಬಂಧಿಸಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಬೀಗ ಹಾಕಿದ ಪ್ಲಾಟ್ಗಳನ್ನು ಗುರುತಿಸಿ ತನ್ನ ಸಹಚರರನ್ನು ಕರೆಸಿ ಕಳ್ಳತನ ಮಾಡಿಸುತ್ತಿದ್ದ ನೇಪಾಳಿ ಗ್ಯಾಂಗ್ನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ರಾಜು, ಜೀವನ್, ಕರಣ್ ಬಿಸ್ತಾ, ಮುಂಬಯಿನ ಗೋರಕ್ ಶಾಹಿ ಬಂಧಿತರು. ಬಂಧಿತರಲ್ಲಿ ಐವರು ನೇಪಾಳ ಮೂಲದವರಾಗಿದ್ದು, 9 ಲಕ್ಷ ರೂ. ನಗದು, 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಕರಣ್ ಬಿಸ್ತಾ, ಜೀವನ್ ಹಾಗೂ ರಾಜು ನಗರದಲ್ಲಿ ಶ್ರೀಮಂತ ಮನೆಗಳು ಇರುವ ಅಪಾರ್ಟ್ಮೆಂಟ್ಗಳಿಗೆ ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಪ್ಲಾಟ್ ಗುರುತಿಸಿ ತಮ್ಮ ಸಹಚರರಿಗೆ ತಿಳಿಸುತ್ತಿದ್ದರು.
ಸೆಕ್ಯುರಿಟಿ ಗಾರ್ಡ್ಗಳ ಅಣತಿ ಮೇರೆಗೆ ಪ್ಲಾಟ್ ಬಾಗಿಲು ಮುರಿದು ಕಳ್ಳತನ ಮಾಡಿಸಿ ಪರಾರಿಯಾಗುತ್ತಿದ್ದರು. ತಮಗೆ ಗೊತ್ತೇ ಇಲ್ಲದಂತೆ ಸೆಕ್ಯುರಿಟಿ ಗಾರ್ಡ್ಗಳು ಕಳ್ಳತನ ಮಾಡಿಸುತ್ತಿದ್ದರು. ಕದ್ದ ಮಾಲಿನಲ್ಲಿ ಎಲ್ಲರೂ ಸಮ ಪಾಲು ಹಂಚಿಕೊಳ್ಳುತ್ತಿದ್ದರು. ಆ ಬಳಿಕ ಅದೇ ಅಪಾರ್ಟ್ಮೆಂಟ್ಗಳಲ್ಲಿ ಖತರ್ ನಾಕ್ ಸೆಕ್ಯುರಿಟಿ ಗಾರ್ಡ್ಗಳು ಕೆಲಸ ಮಾಡುತ್ತಿದ್ದರು.

ಕದ್ದು ಮನೆ ಮಾಲೀಕರಿಗೆ ಕರೆ ಮಾಡಿ ನಾಟಕ: ಇನ್ನು ಹೊರಮಾವಿನ ಕೋಕನೆಟ್ ಗ್ರೋ ಲೇಔಟ್ ಅಪಾರ್ಟ್ಮೆಂಟ್ನಲ್ಲಿ ಸೆಕ್ಯುರಿಟಿ ಅಗಿದ್ದ ಕರಣ್ ಬಿಸ್ತಾ ಕೆಲಸ ಮಾಡುತ್ತಿದ್ದ. ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಉದ್ಯಮಿ ರಾಮಚಂದ್ರರೆಡ್ಡಿ ಅಣ್ಣನ ಮಗಳ ಸಾವಿನ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಆಂಧ್ರ ಪ್ರದೇಶದ ನೆಲ್ಲೂರಿಗೆ ಹೋಗಿದ್ದರು. ಈ ಮಾಹಿತಿ ಪಡೆದಿದ್ದ ಕರಣ್ ಬಿಸ್ತಾ, ತನ್ನ ಸ್ನೇಹಿತರನ್ನು ಕರೆಸಿ ಕಳ್ಳತನ ಮಾಡಿಸಿದ್ದ. ಅಕ್ಟೋಬರ್ 14 ರಂದು ಕಳ್ಳತನ ಮಾಡಿಸಿದ್ದ ಕರಣ್ ಬಿಸ್ತಾ ಎರಡು ದಿನದ ಬಳಿಕ ಉದ್ಯಮಿ ರಾಮಚಂದ್ರರೆಡ್ಡಿಗೆ ಕರೆ ಮಾಡಿದ್ದ. ನಿಮ್ಮ ಮನೆ ಬಾಗಿಲು ಯಾರೋ ಹೊಡೆದು ಕಳ್ಳತನ ಮಾಡಿದ್ದಾರೆ ಎಂದು ತಿಳಿಸಿದ್ದ. ಅವರು ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿತ್ತು. ಉದ್ಯಮಿ ರಾಮಚಂದ್ರರೆಡ್ಡಿ ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದರು.
ಅಪಾರ್ಟ್ಮೆಂಟ್ನಲ್ಲಿ ಕಳ್ಳತನಕ್ಕೆ ಸಂಬಂಧಸಿದಂತೆ ಯಾವುದೇ ಸಿಸಿಟಿವಿ ಕೂಡ ಸಿಕ್ಕಿರಲಿಲ್ಲ. ಕರಣ್ ಬಿಸ್ತಾ ವಿಚಾರಣೆ ವೇಳೆ ಅಮಾಯಕನಂತೆ ವರ್ತಿಸಿದ್ದ. ಮೊಬೈಲ್ ಟವರ್ ಲೊಕೇಷನ್ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಕರಣ್ ಬಿಸ್ತಾಗೆ ಮುಂಬಯಿನಿಂದ ಕರೆ ಬಂದಿರುವುದು ಖಚಿತವಾಗಿತ್ತು. ಈ ಮಾಹಿತಿ ಆಧಾರದ ಮೇಲೆ ತನಿಖೆ ನೆಡಸಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದರ ಸೂತ್ರಧಾರ ಕರಣ್ ಬಿಸ್ತಾ ಎಂಬುದು ಗೊತ್ತಾಗಿದೆ. ಆ ಬಳಿಕ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಫೇಸ್ ಬುಕ್ ಮೆಸೇಂಜರ್ನಲ್ಲಿ ಕಳ್ಳತನ ಬಗ್ಗೆ ಮಾತುಕತೆ ನಡೆಸಿರುವುದು ಗೊತ್ತಾಗಿದೆ.












Click it and Unblock the Notifications