ಬೆಂಗಳೂರಿಗರೇ 3ದಿನ ಮನೆಯಿಂದ ಹೊರಬರುವ ಮುನ್ನ ಯೋಚಿಸಿ
ಬೆಂಗಳೂರು, ಮಾ 1: ಮಾರ್ಚ್ ಒಂದರಿಂದ ಮೂರರವರೆಗೆ ಬೆಂಗಳೂರು ಮಹಾನಗರದ ಜನತೆ ಮನೆಯಿಂದ ಹೊರಬರುವ ಮುನ್ನ ಒಮ್ಮೆ ಆಲೋಚಿಸುವುದು ಸೂಕ್ತ. ಯಾಕೆಂದರೆ, ಟ್ರಾಫಿಕ್ ಜಾಂನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಯಿದೆ.
ಸರಕಾರದ ನಿರ್ಬಂಧದ ನಡುವೆಯೂ ಕೆಪಿಸಿಸಿ ಪ್ರಾಯೋಜಿತ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಸೋಮವಾರ (ಫೆ 28) ಬೆಂಗಳೂರು ಪ್ರವೇಶಿಸಿದೆ. ಕೆಂಗೇರಿಯ ಪೂರ್ಣಿಮ ಕನ್ವೆಂಷನ್ ಹಾಲ್ ನಲ್ಲಿ ಕಾಂಗ್ರೆಸ್ ಮುಖಂಡರು/ಕಾರ್ಯಕರ್ತರು ತಂಗಿದ್ದಾರೆ.
ಸರಕಾರದ ನಿಯಮ ಮೀರಿದ್ದರಿಂದ ಕಾಂಗ್ರೆಸ್ ನಾಯಕರ ವಿರುದ್ದ ಎಫ್ ಐಆರ್ ದಾಖಲಾಗಿದೆ. ನಮ್ಮನ್ನು ಹತ್ತಿಕ್ಕಲ್ಲೆಂದೇ ಎಫ್ ಐಆರ್ ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೊಮ್ಮಾಯಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಫೆಬ್ರವರಿ 27ರಿಂದ ಆರಂಭವಾದ ಎರಡನೇ ಹಂತದ ಪಾದಯಾತ್ರೆಗೆ ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರು. ರಾಮನಗರದಿಂದ ಬಿಡದಿ, ಅಲ್ಲಿಂದ ಕೆಂಗೇರಿಯವರೆಗೆ ಪಾದಯಾತ್ರೆ ಮೈಸೂರು ರಸ್ತೆಯಲ್ಲಿ ಸಾಗಿಬಂದಿದ್ದರಿಂದ, ಬೆಂಗಳೂರು-ಮೈಸೂರು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇನ್ನು ಮೂರು ದಿನ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಂ ಪಕ್ಕಾ. ಯಾವಯಾವ ಭಾಗದಲ್ಲಿ ಟ್ರಾಫಿಕ್ ಜಾಂ ಆಗಬಹುದು?

ಕೆಪಿಸಿಸಿ, ಟ್ವಿಟ್ಟರ್ ಮೂಲಕ ಜನತೆಯ ಕ್ಷಮೆಯಾಚನೆ
ವಾರಂತ್ಯದ ದಿನ ಮತ್ತು ಶಿವರಾತ್ರಿ ರಜೆಯೂ ಇರುವುದರಿಂದ ಮೈಸೂರು ಭಾಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಭಾನುವಾರ ಮತ್ತು ಸೋಮವಾರ ಪಾದಯಾತ್ರೆಯ ಎಫೆಕ್ಟ್ ನಿಂದಾಗಿ ಜನರು ಹೈರಾಣರಾದರು. ಜನರು ಹಿಡಿಶಾಪ ಹಾಕುವುದನ್ನು ಅರಿತ ಕೆಪಿಸಿಸಿ, ಟ್ವಿಟ್ಟರ್ ಮೂಲಕ ಜನತೆಯ ಕ್ಷಮೆಯಾಚಿಸಿ ಈ ಹೋರಾಟ ನಿಮಗಾಗಿ, ಮಾರ್ಚ್ ಮೂರರವರೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಮನವಿ ಮಾಡಿತು.

ಬನಶಂಕರಿ ಕತ್ರಿಗುಪ್ಪೆ ರಿಂಗ್ ರೋಡ್, ಜಯದೇವ ಜಂಕ್ಷನ್
ಶಿವರಾತ್ರಿಯ ದಿನದಂದು ಕೆಂಗೇರಿಯ ಪೂರ್ಣಿಮ ಕನ್ವೆಂಷನ್ ಹಾಲ್ ನಿಂದ ಆರಂಭವಾಗುವ ಪಾದಯಾತ್ರೆ ವೆಂಕಟಾದ್ರಿ ಕಲ್ಯಾಣ ಮಂಟಪದ ಮೂಲಕ, ನಾಯಿಂಡಹಳ್ಳಿ, ಬನಶಂಕರಿ ಕತ್ರಿಗುಪ್ಪೆ ರಿಂಗ್ ರೋಡ್, ಜಯದೇವ ಜಂಕ್ಷನ್ ಮೂಲಕ ಬಿಟಿಎಂ ಲೇಔಟ್ ಅದ್ವೈತ್ ಪೆಟ್ರೋಲ್ ಬಂಕ್ ನಲ್ಲಿ ಮೂರನೇ ದಿನದ ಪಾದಯಾತ್ರೆ ಮುಗಿಸಲಿದೆ. ಆರ್.ಆರ್.ನಗರ, ಗೋವಿಂದರಾಜ ನಗರ, ವಿಜಯನಗರ, ಯಶವಂತಪುರ, ನೆಲಮಂಗಲ, ಕುಣಿಗಲ್, ಪದ್ಮನಾಭ ನಗರ, ಬಸವನಗುಡಿ, ಜಯನಗರ, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸಲಿದೆ.

ಅರಮನೆ ಮೈದಾನದಲ್ಲಿ ನಾಲ್ಕನೇ ದಿನದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ
ಮಾರ್ಚ್ ಎರಡರಂದು ಅದ್ವೈತ್ ಪೆಟ್ರೋಲ್ ಬಂಕ್ ನಿಂದ ಆರಂಭವಾಗುವ ನಾಲ್ಕನೇ ದಿನದ ಪಾದಯಾತ್ರೆ ಜಸ್ಮಾ ಭವನ, ವಿವೇಕ್ ನಗರದ ಮೂಲಕ ಅರಮನೆ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಹದೇವಪುರ, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸಲಿದೆ.

ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಸಾರ್ವಜನಿಕ ಸಭೆ
ಮಾರ್ಚ್ ಮೂರರ ಪಾದಯಾತ್ರೆಯ ಕೊನೆಯ ದಿನ ಪ್ಯಾಲೇಸ್ ಗ್ರೌಂಡಿನಿಂದ ಈದ್ಗಾ ಮೈದಾನ, ಚಾಮರಾಜಪೇಟೆಯ ಮೂಲಕ ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಸಾರ್ವಜನಿಕ ಸಭೆಯ ನಂತರ ಮೇಕೆದಾಟು ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಬಿಬಿಎಂಪಿ ವ್ಯಾಪ್ತಿಯ ಹತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಾಗಿ ಬರಲಿದೆ. ಹಾಗಾಗಿ, ಪಾದಯಾತ್ರೆ ಬರುವ ರಸ್ತೆ ಮತ್ತು ಅದನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಂನಲ್ಲಿ ಇರುವುದು ಪಕ್ಕಾ.












Click it and Unblock the Notifications