ಕೋರ್ಟ್ ವಿಚಾರಣೆಯಿಂದ ವಿನಾಯಿತಿ, ಸಿಎಲ್ ಪಿ ಸಭೆಗೆ ನಾಗೇಂದ್ರ
ಬೆಂಗಳೂರು, ಜನವರಿ 18 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆಪರೇಷನ್ ಕಮಲ ಹೈಡ್ರಾಮಾದಲ್ಲಿ ಭಾಗಿಯಾಗಿದ್ದ ಬಳ್ಳಾರಿಯ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರು ಸತತವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಮೆಹಫೂಜ್ ಅಲಿಖಾನ್ ಕೂಡಾ ಇಂದುವಿಚಾರಣೆಗೆ ಹಾಜರಾದರು.
ಕಾಂಗ್ರೆಸ್ ಶಾಸಕಾಂಗ ಸಭೆಗೆ 3 ರಿಂದ 6 ಮಂದಿ ಗೈರು ಸಾಧ್ಯತೆ?
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ವಿಚಾರಣೆಗೆ ಹಾಜರಾಗಲು ವಿನಾಯತಿ ನೀಡಬೇಕು ಎಂದು ಬಳ್ಳಾರಿ ಶಾಸಕ ಬಿ ನಾಗೇಂದ್ರ ಅವರು ಮನವಿ ಮಾಡಿಕೊಂಡರು. ನಾಗೇಂದ್ರ ಮನವಿಯನ್ನು ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಬಿ.ವಿ ಪಾಟೀಲ್ ಅವರು ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿದೆ.
ಶಾಸಕಾಂಗ ಸಭೆಗೆ ಹಾಜರಾಗುವುದಕ್ಕೆ ಕೋರ್ಟ್ ವಿಚಾರಣೆ ಅಡ್ಡಿ ಎನ್ನುತ್ತಿದ್ದ ನಾಗೇಂದ್ರ ಅವರು ಈಗ ಅಡ್ಡಿಯಿಲ್ಲದೆ, ಶುಕ್ರವಾರ ಮಧ್ಯಾಹ್ನ ನಡೆಯಲಿರುವ ಶಾಸಕಾಂಗ ಸಭೆಗೆ ಹಾಜರಾಗುವ ಸಾಧ್ಯತೆಯಿದೆ.
ಭಿನ್ನಮತೀಯರಿಗೆ ಖಡಕ್ ಎಚ್ಚರಿಕೆ ನೀಡಿರುವ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕಾಂಗ ಸಭೆಗೆ ಗೈರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದಿದ್ದಾರೆ.
ಶಾಸಕ ಆನಂದ್ ಸಿಂಗ್, ಬಿ ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್
2009ರಲ್ಲಿ ಆನಂದ್ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಕಂಪನಿಯಿಂದ ಅದಿರನ್ನು ಸಿಂಗಪುರ ಮತ್ತು ಚೀನಾಕ್ಕೆ ಅಕ್ರಮವಾಗಿ ಸಾಗಿಸಿದ ಆರೋಪವಿದೆ. ಎಸ್ ಐಟಿ ತನಿಖೆ, ಸಿಬಿಐ ತನಿಖೆಯಲ್ಲೂ ಆರೋಪ ಸಾಬೀತಾಗಿದ್ದು, ಇಬ್ಬರ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ.